ಕೇಜ್ರಿವಾಲ್‌ ಜತೆ ಮೈತ್ರಿಗೆ ಕಾಂಗ್ರೆಸ್‌ ರೆಡಿ?| ದಿಲ್ಲಿಯಲ್ಲಿ ಸೋಲು ಖಚಿತ ಆಗುತ್ತಿದ್ದಂತೆಯೇ ಕಾಂಗ್ರೆಸ್‌ ಥಂಡಾ| ಫಲಿತಾಂಶದ ಆಧಾರದಲ್ಲಿ ಮೈತ್ರಿಬಗ್ಗೆ ಚರ್ಚೆ: ಚಾಕೋ| ಕೇಜ್ರಿವಾಲ್‌ ಗೆಲುವು ಅಭಿವೃದ್ಧಿಗೆ ಸಿಗಲಿರುವ ಜಯ: ಅಧೀರ್‌

ನವದೆಹಲಿ[ಫೆ.10]: ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ (ಆಪ್‌) ಮೂರನೇ ಬಾರಿಗೆ ದಿಲ್ಲಿಯಲ್ಲಿ ಅಧಿಕಾರಕ್ಕೇರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದ್ದಂತೆಯೇ ಮತ್ತೊಂದು ರಾಜಕೀಯ ಧ್ರುವೀಕರಣ ಆಗುವ ಸಾಧ್ಯತೆ ಗೋಚರಿಸುತ್ತಿದೆ. ಒಂದು ವೇಳೆ ಆಪ್‌ ಗೆದ್ದಿದ್ದೇ ಆದಲ್ಲಿ ಅದರ ಜತೆ ಮೈತ್ರಿಗೆ ಕಾಂಗ್ರೆಸ್‌ ಪಕ್ಷ ಮುಂದಾಗುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ಸಮೀಕ್ಷೆಗಳ ಪ್ರಕಾರ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ತಣ್ಣಗಾದಂತೆ ಕಂಡುಬರುತ್ತಿರುವ ಕಾಂಗ್ರೆಸ್‌ ಮುಖಂಡರು ಮೈತ್ರಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಕೇಜ್ರಿವಾಲ್‌ ಮೇಲೆ ಹೊಗಳಿಕೆಯ ಮಳೆ ಸುರಿಸಿದ್ದಾರೆ.

ಮೈತ್ರಿ ಬಗ್ಗೆ ಸುದ್ದಿಗಾರರು ದಿಲ್ಲಿ ಕಾಂಗ್ರೆಸ್‌ ಪ್ರಭಾರಿ ಪಿ.ಸಿ. ಚಾಕೋ ಅವರನ್ನು ಕೇಳಿದಾಗ, ‘ಅದು ಫಲಿತಾಂಶದ ಆಧಾರದಲ್ಲಿ ನಿರ್ಣಯವಾಗಲಿದೆ. ಒಮ್ಮೆ ಫಲಿತಾಂಶ ಹೊರಬಂದರೆ ಆ ಬಗ್ಗೆ ಚರ್ಚಿಸಬಹುದು. ಆದರೆ ಸಮೀಕ್ಷೆಗಳು ಸರಿಯಿಲ್ಲ. ಸಮೀಕ್ಷೆಗಳಲ್ಲಿ ಹೇಳಿದ್ದಕ್ಕಿಂತ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಲಿದೆ’ ಎಂದಿದ್ದಾರೆ.

ಈ ನಡುವೆ, ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು, ‘ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಲಿದೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ಕೋಮು ವಿಷಯಗಳನ್ನು ಮುಂದಿಟ್ಟು ಹೋರಾಡಿತು. ಕೇಜ್ರಿವಾಲ್‌ ಅಭಿವೃದ್ಧಿ ವಿಷಯಗಳನ್ನು ಪ್ರಸ್ತಾಪಿಸಿದರು. ಕೇಜ್ರಿವಾಲ್‌ ಗೆದ್ದರೆ ಅದು ಅಭಿವೃದ್ಧಿಗೆ ಸಿಕ್ಕ ಜಯವಾಗಲಿದೆ’ ಎಂದು ಹೇಳಿದ್ದಾರೆ.