ಅತಿ ದೊಡ್ಡ ಪಕ್ಷದಿಂದ ಗೂಂಡಾಗಿರಿ: ಬಿಜೆಪಿ ವಿರುದ್ಧ ಕೇಜ್ರಿ ಆಕ್ರೋಶ
- ಕೇಜ್ರಿವಾಲ್ ಮನೆ ಮುಂದೆ ಬಿಜೆಪಿ ಕಾರ್ಯಕರ್ತರ ದಾಂಧಲೆ
- ಗೂಂಡಾಗಿರಿಗೆ ಬಿಜೆಪಿ ಪ್ರೋತ್ಸಾಹಿಸುತ್ತಿದೆ ಎಂದ ಕೇಜ್ರಿವಾಲ್
- ದೇಶಕ್ಕಾಗಿ ಜೀವ ಕೊಡುವೆ ಎಂದ ಎಎಪಿ ನಾಯಕ
ನವದೆಹಲಿ: ತಮ್ಮ ನಿವಾಸದ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಡೆಸಿದ ದಾಳಿಗೆ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಭಾರತದ ಅತಿದೊಡ್ಡ ಪಕ್ಷವೊಂದು ಗೂಂಡಾಗಿರಿಯನ್ನು ಓಲೈಸುವುದರಲ್ಲಿ ತೊಡಗಿದೆ. ಇದು ಹೊರಗಡೆಗೆ ಬೇರೆಯದ್ದೇ ಆದ ಸಂದೇಶವನ್ನು ರವಾನಿಸಲಿದೆ ಎಂದು ಹೇಳಿದ್ದಾರೆ. ‘ಕೇಜ್ರಿವಾಲ್ ಈ ದೇಶಕ್ಕೆ ಮುಖ್ಯವಲ್ಲ. ದೇಶಕ್ಕಾಗಿ ನಾನು ನನ್ನ ಜೀವವನ್ನು ಕೊಡುತ್ತೇನೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ಅತಿದೊಡ್ಡ ಪಕ್ಷ ಗೂಂಡಾಗಿರಿ ಪೋಷಿಸುತ್ತಿರುವುದು ದೇಶದ ಜನರಿಗೆ ಕೆಟ್ಟ ಅಭಿಪ್ರಾಯವನ್ನು ರವಾನಿಸಲಿದೆ’ ಎಂದು ಅವರು ಹೇಳಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತಾಗಿ ಹಾಸ್ಯ ಮಾಡಿದ್ದರು ಎಂಬ ಕಾರಣಕ್ಕೆ ಅವರ ಮನೆಯ ಮೇಲೆ ಬಿಜೆಪಿ ಯುವ ಕಾರ್ಯಕರ್ತರು ದಾಳಿ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಈವರೆಗೆ ಬಂಧಿಸಲಾಗಿದೆ.
ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿತ್ತು. ದೆಹಲಿ ಸಿಎಂ ಕೇಜ್ರಿವಾಲ್ ಅವರ ನಿವಾಸದ ಭದ್ರತಾ ಆಸ್ತಿಗಳನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಹಾಗೂ ಭದ್ರತಾ ತಡೆಗೋಡೆಗಳು ಧ್ವಂಸವಾಗಿದೆ. ಈ ಮೂಲಕ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಯತ್ನಿಸಿದೆ ಎಂದು ಆಪ್ ಮುಖಂಡರು ಆರೋಪಿಸಿದ್ದರು.
ಇತ್ತೀಚೆಗೆ ಬಿಡುಗಡೆಯಾಗಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಕೇಜ್ರಿವಾಲ್ ವಿರೋಧವಾಗಿ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ತಡೆಗೋಡೆ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಧ್ವಂಸಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ದೆಹಲಿ ಅಸೆಂಬ್ಲಿಯಲ್ಲಿ, ಕೇಜ್ರಿವಾಲ್ ಬಿಜೆಪಿ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದರು ಹಾಗೂ ಕಾಶ್ಮೀರ ಫೈಲ್ಸ್ ಚಿತ್ರವನ್ನು ಯೂಟ್ಯೂಬ್ನಲ್ಲಿ ಹಾಕಬೇಕು ಎಂದು ಹೇಳಿದರು. ಚಿತ್ರವನ್ನು ತೆರಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸುವ ಬದಲು ವಿವೇಕ್ ಅಗ್ನಿಹೋತ್ರಿಗೆ ಈ ಸಿನಿಮಾವನ್ನು ಯೂಟ್ಯೂಬ್ನಲ್ಲಿ (#YouTubeParDalDo) ಹಾಕುವಂತೆ ಹೇಳಬೇಕು. ಈ ರೀತಿಯಾಗಿ ಇದು ಎಲ್ಲರಿಗೂ ಉಚಿತವಾಗಿರುತ್ತದೆ ಮತ್ತು ಪ್ರತಿಯೊಬ್ಬರೂ ಅದನ್ನು ನೋಡಲು ಸಾಧ್ಯವಾಗುತ್ತದೆ ಎಂದಿದ್ದರು.
ಕೇಜ್ರೀವಾಲ್ ಹೇಳಿಕೆ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ರಾಜಕಾರಣಿಗಳ ಮಾತು ಕೇಳುವುದಕ್ಕಿಂತ ತಮ್ಮ ಸಿನಿಮಾ ನೋಡುತ್ತಿರುವ ಕೋಟಿಗಟ್ಟಲೆ ಜನರತ್ತ ಗಮನ ಹರಿಸುತ್ತೇನೆ ಎಂದು ವಿವೇಕ್ ಹೇಳಿದ್ದಾರೆ. 'ಇಲ್ಲಿಯವರೆಗೆ ಎರಡು ಕೋಟಿ ಜನರು ದಿ ಕಾಶ್ಮೀರ ಫೈಲ್ ನೋಡಿದ್ದಾರೆ. ಅವರು ಆಳವಾದ ಭಾವನೆಯಿಂದ ಉತ್ತರಿಸುತ್ತಿದ್ದಾರೆ. ನಾನು ಆ 20 ಮಿಲಿಯನ್ ಜನರ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ ಮತ್ತು ವೃತ್ತಿಪರ ನಿಂದನೆ ಮಾಡುವ 20 ರಾಜಕಾರಣಿಗಳ ಮೇಲೆ ಅಲ್ಲ ಎಂದಿದ್ದಾರೆ.
'The Kashmir Files ಟ್ಯಾಕ್ಸ್ ಫ್ರೀ ಯಾಕೆ? ಯೂಟ್ಯೂಬ್ಗೆ ಅಪ್ಲೋಡ್ ಮಾಡಲಿ ಎಂದ ಕೇಜ್ರೀ ವೃತ್ತಿಪರ ನಿಂದಕ'
ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರ ನಿವಾಸದ ಮುಂದೆ ಚಿತ್ರದ ಕುರಿತು ಹೇಳಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ, ಕಾಶ್ಮೀರದಲ್ಲಿ ಹಿಂದು ಹತ್ಯೆ ಕುರಿತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅಪಹಾಸ್ಯ ಮಾಡಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡಿದೆ. ಈ ಕೂಡಲೇ ಕೇಜ್ರಿವಾಲ್ ಕ್ಷಮೆಯಾಚಿಸಬೇಕು. ಎಲ್ಲಿಯವರೆಗೂ ಕ್ಷಮೆ ಕೇಳುವುದಿಲ್ಲವೋ ಅಲ್ಲಿಯ ತನಕ ಯುವ ಮೋರ್ಚಾ ಪ್ರತಿಭಟಿಸಲಿದೆ ಎಂದು ಹೇಳಿದ್ದರು.