ಒಂದು ಸಮುದಾಯವನ್ನು ಸಂಪೂರ್ಣವಾಗಿ ಬಹಿಷ್ಕರಿಸಿ: BJP ಸಂಸದ; ಓವೈಸಿ ಆಕ್ರೋಶ
ಅವರು ಮೀನು - ಮಾಂಸ ಅಂಗಡಿಗಳನ್ನು ಸಹ ತೆರೆಯುತ್ತಾರೆ. ಒಂದು ವೇಳೆ ಈ ಅಂಗಡಿಗಳಿಗೆ ಲೈಸೆನ್ಸ್ ಇಲ್ಲದಿದ್ದರೆ ಅವುಗಳನ್ನು ಮುಚ್ಚುವಂತೆ ನಾವು ಪಾಲಿಕೆಗೆ ಹೇಳಬೇಕು ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
ಸಮುದಾಯವೊಂದನ್ನು (Community) ಸಂಪೂರ್ಣವಾಗಿ ಬಹಿಷ್ಕರಿಸಿ ಎಂದು ದೆಹಲಿ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ (Parvesh Sahib Singh Verma) ಕರೆ ನೀಡಿದ್ದಾರೆ. ಬಿಜೆಪಿ ಸಂಸದರ ಈ ಹೇಳಿಕೆಗೆ ಅಸಾದುದ್ದೀನ್ ಓವೈಸಿ (Asaduddin Owaisi) ಸೇರಿ ಹಲವು ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಹ ಚರ್ಚೆಯಾಗುತ್ತಿದೆ. ಅವರು ಮುಸ್ಲಿಂ ಸಮುದಾಯವನ್ನು ಬಹಿಷ್ಕಾರ ಹಾಕಲು ಕರೆ ನೀಡಿದ್ದಾರೆ ಎಂದು ಕೇಸರಿ ಪಕ್ಷದ (Saffron Party) ಸಂಸದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ‘’ಅವರ ತಲೆಯನ್ನು ಸರಿ ಮಾಡಬೇಕು’’ ಎಂದೂ ಹೇಳಿದ್ದಾರೆ. ಅವರ ಭಾಷಣದ ವಿಡಿಯೋ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗುತ್ತಿದೆ.
ಇನ್ನು, ತೆರೆದ ಜಾಗದಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಮಳೆ ಬರುತ್ತಿದ್ದರೂ, ಜನರು ಅವರ ಭಾಷಣ ಕೇಳುತ್ತಿದ್ದು, ಕೊಡೆ ಹಿಡಿದುಕೊಂಡು ಆಲಿಸುತ್ತಿದ್ದರು. ಮಳೆಯ ನಡುವೆಯೇ, ತಾನು ಹೇಳಿದ ಪ್ರತಿಜ್ಞೆಗಳನ್ನು ಪುನರಾವರ್ತಿಸಲು ಸಂಸದ ಕೇಳಿಕೊಂಡಿದ್ದರು, ಜನರು ಸಹ ಸಂಸದರು ಹೇಳಿದಂತೆ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನು ಓದಿ: Ganesha Chaturthi ಗಣಪತಿ ಕೂರಿಸಿದ ಬಿಜೆಪಿ ನಾಯಕಿ ವಿರುದ್ಧ ಮುಸ್ಲಿಂ ಮುಖಂಡರಿಂದ ಫತ್ವಾ!
ಅವರು ಕೈಗಾಡಿಗಳನ್ನು ತೆರೆಯುತ್ತಲೇ ಇರುತ್ತಾರೆ, ಆದರೆ ನೀವು ಅವರ ಬಳಿ ತರಕಾರಿಗಳನ್ನು ಕೊಂಡುಕೊಳ್ಳುವ ಅಗತ್ಯ ಇಲ್ಲ. ಅವರು ಮೀನು - ಮಾಂಸ ಅಂಗಡಿಗಳನ್ನು ಸಹ ತೆರೆಯುತ್ತಾರೆ. ಒಂದು ವೇಳೆ ಈ ಅಂಗಡಿಗಳಿಗೆ ಲೈಸೆನ್ಸ್ ಇಲ್ಲದಿದ್ದರೆ ಅವುಗಳನ್ನು ಮುಚ್ಚುವಂತೆ ನಾವು ಪಾಲಿಕೆಗೆ ಹೇಳಬೇಕು ಎಂದೂ ಬಿಜೆಪಿ ಸಂಸದ ಹೇಳಿದ್ದಾರೆ.
ಅಲ್ಲದೆ, ನೀವು ಅವರನ್ನು ಎಲ್ಲಿ ನೋಡಿದರೂ ಅವರ ತಲೆ ಸರಿ ಮಾಡಬೇಕು ಎನಿಸಿದರೆ ಇದಕ್ಕೆ ಒಂದೇ ಚಿಕಿತ್ಸೆ ಅವರನ್ನು ಸಂಪೂರ್ಣ ಬಹಿಷ್ಕಾರ ಮಾಡಿ. ನೀವು ಅದನ್ನು ಒಪ್ಪುತ್ತೀರಿ ಎಂದರೆ ಕೈ ಎತ್ತಿ ಎಂದು ಬಿಜೆಪಿ ಸಂಸದರು ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಹೇಳಿದರು. ಇನ್ನು, ಭಾಷಣ ಕೇಳುತ್ತಿದ್ದ ಎಲ್ಲರೂ ಸಹ ಸಂಸದರ ಹೇಳಿಕೆಗೆ ಧ್ವನಿಗೂಡಿಸಿ ತಮ್ಮ ಕೈಗಳನ್ನು ಎತ್ತಿದ್ದಾರೆ.
ಇನ್ನು, ನಾನು ಹೇಳಿದ ಮೇಲೆ ಹೇಳಿ, ನಾವು ಅವರನ್ನು ಬಹಿಷ್ಕಾರ ಮಾಡೋಣ ಎಂದೂ ಸಂಸದರು ಹೇಳಿದ್ದಕ್ಕೆ, ಜನರು ಸಹ ಅದೇ ಹೇಳಿಕೆಯನ್ನು ಪುನರಾವರ್ತಿಸಿದರು. ಅಲ್ಲದೆ, ಅವರ ಅಂಗಡಿಗಳಿಂದ ನಾವು ಏನನ್ನೂ ಖರೀದಿಸುವುದಿಲ್ಲ. ನಾವು ಅವರಿಗೆ ಯಾವುದೇ ಕೆಲಸವನ್ನು ನೀಡಲ್ಲ ಎಂದು ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಹೇಳಿದ್ದು, ಜನರು ಸಹ ಇದನ್ನು ಧ್ವನಿಗೂಡಿಸಿ ಪ್ರತಿಜ್ಞೆ ಮಾಡಿದ್ದಾರೆ. ಹೌದು, ನಾವು ಮಾಡುತ್ತೇವೆ ಎಂದು ನೆರೆದಿದ್ದ ಜನರು ಸಂಸದರ ಹೇಳಿಕೆಗೆ ಪ್ರತಿಕ್ರಿಯೆ ಮೂಲಕ ಒಪ್ಪಿಕೊಂಡಿದ್ದಾರೆ.
ಇನ್ನೊಂದೆಡೆ, ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮಾತನಾಡಿದ್ದ ಕಾರ್ಯಕ್ರಮದಲ್ಲೇ ಮಾತನಾಡಿರುವ ಉತ್ತರ ಪ್ರದೇಶ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜಾರ್ ಮುಸ್ಲಿಮರ ವಿರುದ್ಧ ವಿವಾದಾತ್ಮಕ ಕಮೆಂಟ್ಗಳನ್ನು ಮಾಡಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋವನ್ನು ಅವರು ಟ್ವೀಟ್ ಮಾಡಿದ್ದು, ಕೇಸರಿ ಪಕ್ಷದ ಶಾಸಕರ ಹೇಳಿಕೆಗೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ‘’ನಮ್ಮ ಅಂದವಾದ ನಗರ, ಈಗ ಹಂದಿಗಳ ನಗರವಾಗಿದೆ’’ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜಾರ್ ಹೇಳಿದ್ದಾರೆ.
ಇದನ್ನೂ ಓದಿ: Karnataka Politics: ನನಗೆ ಮುಸ್ಲಿಮರ ಮತ ಬೇಡ: ಬಿಜೆಪಿ ಶಾಸಕ ಹರೀಶ್ ಪೂಂಜ
ಬಿಜೆಪಿ ಸಂಸದರ ಹೇಳಿಕೆಗೆ ಓವೈಸಿ ವಿರೋಧ
ಬಿಜೆಪಿಯ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಿಜೆಪಿ ಮುಸಲ್ಮಾನರ ವಿರುದ್ಧ ಯುದ್ಧ ಆರಂಭಿಸಿದೆ ಎಂದಿದ್ದು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮೌನವಾಗಿದ್ದಾರೆ ಎಂದೂ ಟೀಕಿಸಿದ್ದಾರೆ. ಅಲ್ಲದೆ, ರಾಷ್ಟ್ರ ರಾಜಧಾನಿಯ ಸಂಸದರೊಬ್ಬರು ಈ ರೀತಿ ಮಾತನಾಡಿದರೆ, ಇನ್ನು ಸಂವಿಧಾನಕ್ಕಿರುವ ಮೌಲ್ಯವೇನು ಎಂದೂ ಅಸಾದುದ್ದೀನ್ ಓವೈಸಿ ಪ್ರಶ್ನೆ ಮಾಡಿದ್ದಾರೆ.