'ಭಾರತವನ್ನು 'ಹಿಂದೂ ರಾಷ್ಟ್ರ'ವೆಂದು ಘೋಷಿಸಿ, ತಪ್ಪಿದರೆ ನಾನು ಜಲಸಮಾಧಿಯಾಗುತ್ತೇನೆ'
* ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಬೇಡಿಕೆಗೆ ಮತ್ತಷ್ಟು ಬಲ
* ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಿದ ಎಂದ ಪ್ರಸಿದ್ಧ ಸ್ವಾಮೀಜಿ
* ತಪ್ಪಿದಲ್ಲಿ ಜಲಸಮಾಧಿಯಾಗುವ ಬೆದರಿಕೆ
ಅಯೋಧ್ಯೆ(ಸೆ.29): ಅಯೋಧ್ಯೆಯ(Ayodhya) ಪ್ರಸಿದ್ಧ ಸ್ವಾಮೀಜಿ ಜಗದ್ಗುರು ಪರಮಹಂಸ ಮಹಾರಾಜ್(Jagadguru Paramhans Acharya Maharaj) ಶಾಕಿಂಗ್ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಭಾರತವನ್ನು ಹಿಂದೂ ರಾಷ್ಟ್ರವೆಂದು(Hindu Nation) ಘೋಷಿಸಲು ಒತ್ತಾಯಿಸಿರುವ ಸ್ವಾಮೀಜಿ, ಮಹಾತ್ಮ ಗಾಂಧಿ(Gandhiji) ಜಯಂತಿಯಂದು ಸರ್ಕಾರ ಈ ಕಾರ್ಯ ಮಾಡಬೇಕಾಗಿ ಮನವಿ ಮಾಡಿದ್ದಾರೆ. ಅಲ್ಲದೇ ತನ್ನ ಈ ಬೇಡಿಕೆಯನ್ನು ಪೂರೈಸದಿದ್ದರೆ ತಾನು ಜಲಸಮಾಧಿಯಾಗುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆ ಎಎನ್ಐ(ANI) ಜೊತೆ ಮಾತನಾಡಿರುವ ಸ್ವಾಮೀಜಿ ಜಗದ್ಗುರು ಪರಮಹಂಸ ಮಹಾರಾಜ್(Jagadguru Paramhans Acharya Maharaj) "ನಾನು ಅಕ್ಟೋಬರ್ 2 ರೊಳಗೆ ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸುವಂತೆ ಬೇಡಿಕೆ ಇಟ್ಟಿದ್ದೇನೆ. ತಪ್ಪಿದಲ್ಲಿ ನಾನು ಸರಯು ನದಿಯಲ್ಲಿ ಜಲ ಸಮಾಧಿಯಾಗುತ್ತೇನ" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಸ್ವಾಮೀಜಿ ಕೇಂದ್ರದ ಮೋದಿ ಸರ್ಕಾರಕ್ಕೆ ಭಾರತದಲ್ಲಿರುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ರಾಷ್ಟ್ರೀಯತೆಯನ್ನೂ ರದ್ದುಗೊಳಿಸುವಂತೆ ಕೇಳಿಕೊಂಡಿದ್ದಾರೆ.
2022 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ. ಇಂತಹ ಸಂದರ್ಭದಲ್ಲಿ ಸ್ವಾಮೀಜಿ ಜಗದ್ಗುರು ಪರಮಹಂಸ ಮಹಾರಾಜ್ ಇಂತಹುದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬುವುದು ಉಲ್ಲೇಖನೀಯ. ಈ ಹಿಂದೆ ಇನ್ನೂ ಅನೇಕ ಸ್ವಾಮೀಜಿಗಳು ಇಂತಹುದೇ ಹೆಳಿಕೆಗಳನ್ನು ನಿಡಿದ್ದರೆಂಬುವುದು ಉಲ್ಲೇಖನೀಯ.
ಈ ಹಿಂದೆ, ಆಮ್ ಆದ್ಮಿ ಪಕ್ಷ ಮತ್ತು ಸಮಾಜವಾದಿ ಪಕ್ಷವು ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖರೀದಿಸಿದ ಭೂಮಿ ವಿಚಾರವಾಗಿ ಸವಾಲೆಸೆದಿದ್ದ ಸಂದರ್ಭದಲ್ಲಿ ಸ್ವಾಮೀಜಿಗಳು ಟ್ರಸ್ಟ್ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದ್ದರು. ಅಲ್ಲದೇ ಎರಡೂ ಪಕ್ಷಗಳ ವಿರುದ್ಧ 1,000 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದ್ದರು.