Asianet Suvarna News Asianet Suvarna News

ಅಯೋಧ್ಯೆ ವಿಚಾರಣೆ ಇಂದೇ ಅಂತ್ಯ ಸಾಧ್ಯತೆ

ನಾಳೆಯ ಬದಲು ಇಂದೇ ವಾದ ಪೂರ್ಣಗೊಳಿಸಿ: ನ್ಯಾ ಗೊಗೋಯ್‌ ಸೂಚನೆ |  ಅಯೋಧ್ಯೆಯನ್ನು ರಾಮಜನ್ಮಸ್ಥಳ ಎಂದು ಪರಿಗಣಿಸಿ: ವಕೀಲ ಪರಾಶರನ್‌ | ‘ಜನ್ಮಸ್ಥಳ ಬದಲಿಸಲಾಗದು, ಮುಸ್ಲಿಮರು ಬೇರೆಡೆಯೂ ಪ್ರಾರ್ಥನೆ ಸಲ್ಲಿಸಬಹುದು’ |  ‘ಬಾಬರ್‌ ಮಾಡಿದ ಐತಿಹಾಸಿಕ ಪ್ರಮಾದ ಸರಿಪಡಿಸಿ’ ಎಂದು ಹಿಂದೂ ಪರ ವಕೀಲರ ಮನವಿ

daily hearings in ayodhya case likely to end October 16
Author
Bengaluru, First Published Oct 16, 2019, 8:31 AM IST

ನವದೆಹಲಿ (ಅ. 16): ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆ ಬುಧವಾರ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿ ಅಂತಿಮ ತೀರ್ಪು ಪ್ರಕಟಣೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ.

ಮಂಗಳವಾರ ನಡೆದ 40ನೇ ದಿನದ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀಶ ನ್ಯಾ. ರಂಜನ್‌ ಗೊಗೋಯ್‌ ಅವರು, ‘ಈ ಮುನ್ನ ಗುರುವಾರ ವಿಚಾರಣೆಯ ಅಂತಿಮ ದಿನಾಂಕ ನಿಗದಿ ಮಾಡಿದ್ದೆವು. ಆದರೆ ಬುಧವಾರವೇ ವಾದ-ಪ್ರತಿವಾದ ಪೂರ್ಣಗೊಳಿಸಿ. ನಾಳೆ ಸಂಜೆ 5ರವರೆಗೆ ಕಲಾಪ ನಡೆಸೋಣ’ ಎಂದು ಪ್ರಕರಣದಲ್ಲಿ ವಾದಿಸುತ್ತಿರುವ ವಿವಿಧ ಪಕ್ಷಗಳ ವಕೀಲರಿಗೆ ಸೂಚಿಸಿದರು. ಹೀಗಾಗಿ ನಿಗದಿತ ದಿನಾಂಕವಾಗಿದ್ದ ಅಕ್ಟೋಬರ್‌ 17ರ ಬದಲು ಅ.16ರಂದೇ ವಿಚಾರಣೆ ಮುಗಿವ ಸಾಧ್ಯತೆ ಇದೆ.

ಅಯೋಧ್ಯೆಯಲ್ಲಿ ಡಿ. 10 ರವರೆಗೆ ನಿಷೇಧಾಜ್ಞೆ

ಜನ್ಮಭೂಮಿ ಬದಲಿಸಲಾಗದು- ಪರಾಶರನ್‌:

ಈ ನಡುವೆ, ಹಿಂದೂ ಪಕ್ಷಗಳ ಪರ ವಾದಿಸಿದ ಹಿರಿಯ ವಕೀಲ ಕೆ. ಪರಾಶರನ್‌ ಅವರಿಗೆ ನ್ಯಾ ಗೊಗೋಯ್‌ ಅವರ ನೇತೃತ್ವದ ಪಂಚಸದಸ್ಯ ಪೀಠ ರಾಮಜನ್ಮಭೂಮಿ ಬಗ್ಗೆ ಸಾಕಷ್ಟುಪ್ರಶ್ನೆ ಹಾಕಿತು. ‘ಮಸೀದಿಯೆಂದರೆ ಮಸೀದಿ. ನೀವಿದನ್ನು ಒಪ್ಪುತ್ತೀರಾ’ ಎಂದು ಕೇಳಿತು. ಈ ಪ್ರಶ್ನೆಗಳಿಗೆ ಉತ್ತರಿಸಿದ ಪರಾಶರನ್‌, ‘ಇಲ್ಲ. ನಾನು ಒಪ್ಪಲ್ಲ. ಮಂದಿರ ಎಂದರೆ ಮಂದಿರ. ರಾಮಜನ್ಮಭೂಮಿ ಎಂದರೆ ರಾಮ ಜನಿಸಿದ ಸ್ಥಳ. ಈ ಸ್ಥಳದಲ್ಲಿದ್ದ ಮಂದಿರ ಧ್ವಂಸಗೊಳಿಸಿ ಮುಘಲ್‌ ದೊರೆ ಬಾಬರ್‌ ಪ್ರಮಾದ ಎಸಗಿದ್ದ. ಈ ಐತಿಹಾಸಿಕ ಪ್ರಮಾದವನ್ನು ಈಗ ಸರಿಪಡಿಸಬೇಕು. ಜನ್ಮಸ್ಥಳವನ್ನು ಬದಲಿಸಲು ಆಗದು. ಹೀಗಾಗಿ ಅದೇ ಸ್ಥಳದಲ್ಲಿ ಮಂದಿರ ಇರಬೇಕು. ಮುಸ್ಲಿಮರು ಬೇರೆ ಮಸೀದಿಗಳಲ್ಲಿ ಕೂಡ ಪ್ರಾರ್ಥನೆ ಸಲ್ಲಿಸಬಹುದು. ಅಯೋಧ್ಯೆಯಲ್ಲಿ 55-60 ಮಸೀದಿಗಳಿವೆ’ ಎಂದು ವಾದಿಸಿದರು.

ಈ ನಡುವೆ, ಪರಾಶರನ್‌ ಅವರಿಗೆ ಸಾಕಷ್ಟುಪ್ರಶ್ನೆ ಕೇಳುವ ಸಂದರ್ಭದಲ್ಲಿ, ‘ಹಿಂದೂ ಪಕ್ಷಗಳಿಗೂ ಕೋರ್ಟು ಸಾಕಷ್ಟುಪ್ರಶ್ನೆಗಳನ್ನು ಕೇಳುತ್ತಿದೆ’ ಎಂದು ಮುಸ್ಲಿಂ ಪಕ್ಷಗಳ ಪರ ವಕೀಲ ರಾಜೀವ್‌ ಧವನ್‌ ಅವರನ್ನು ಉದ್ದೇಶಿಸಿ ಹಾಸ್ಯ ಶೈಲಿಯಲ್ಲಿ ಹೇಳಿದರು. ಸೋಮವಾರದ ವಿಚಾರಣೆ ವೇಳೆ, ‘ಕೋರ್ಟು ಬರೀ ಮುಸ್ಲಿಂ ಪಕ್ಷಗಳಿಗೆ ಪ್ರಶ್ನೆ ಕೇಳುತ್ತಿದೆ’ ಎಂದು ಧವನ್‌ ಆಕ್ಷೇಪಿಸಿದ್ದರು.

Follow Us:
Download App:
  • android
  • ios