ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ಅಂತಿಮ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಮುಗಿಸುವ ಹಂತಕ್ಕೆ ಬಂದಿರುವ ಅಯೋಧ್ಯೆಯಲ್ಲಿ ಡಿ.10ರವರೆಗೆ ಪರಿಚ್ಛೇದ 144ರ ಅನ್ವಯ ನಿಷೇಧಾಜ್ಞೆ ಸಾರಲಾಗಿದೆ.

ಅಯೋಧ್ಯಾ (ಅ. 15): ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ಅಂತಿಮ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಮುಗಿಸುವ ಹಂತಕ್ಕೆ ಬಂದಿರುವ ಅಯೋಧ್ಯೆಯಲ್ಲಿ ಡಿ.10ರವರೆಗೆ ಪರಿಚ್ಛೇದ 144ರ ಅನ್ವಯ ನಿಷೇಧಾಜ್ಞೆ ಸಾರಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಆಗಸ್ಟ್‌ 31ರಿಂದ ಅಯೋಧ್ಯೆಯಲ್ಲಿ ಅಕ್ರಮವಾಗಿ ಗುಂಪು ಸೇರುವುದು ಹಾಗೂ ಅನಪೇಕ್ಷಿತ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು. ಇದರ ಜತೆಗೆ ಈಗ ನಿಷೇಧಾಜ್ಞೆಯನ್ನು ಘೋಷಿಸಲಾಗಿದೆ. ಈ ಪ್ರಕಾರ ಒಂದು ಕಡೆ 4 ಜನಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಸೇರಿದರೆ ಅಂಥವರ ಮೇಲೆ ದೊಂಬಿ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅನುಜ್‌ ಕುಮಾರ್‌ ಝಾ ಸೋಮವಾರ ಹೇಳಿದ್ದಾರೆ.

ಇದೇ ವೇಳೆ ಡ್ರೋನ್‌ಗಳನ್ನು ಹಾರಿಸುವುದು, ಶೂಟಿಂಗ್‌ ಹಾಗೂ ಫೋಟೋ ತೆಗೆಯಲು ಮಾನವರಹಿತ ಯಂತ್ರಗಳನ್ನು ಹಾರಿಸುವುದನ್ನು ನಿರ್ಬಂಧಿಸಲಾಗಿದೆ. ದೀಪಾವಳಿ ವೇಳೆ ಅನುಮತಿ ಇಲ್ಲದೇ ಪಟಾಕಿ ಮಾರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಗಸ್ಟ್‌ 6ರಂದು ಸುಪ್ರೀಂ ಕೋರ್ಟ್‌ ಅಯೋಧ್ಯೆ ಪ್ರಕರಣದ ವಿಚಾರಣೆ ಆರಂಭಿಸಿದ್ದು, ಅಕ್ಟೋಬರ್‌ 17ರಂದು ವಿಚಾರಣೆ ಮುಗಿಸುವುದಾಗಿ ಇತ್ತೀಚೆಗೆ ಹೇಳಿತ್ತು. ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನ.17ರಂದು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಅಷ್ಟರೊಳಗೆ ಅಯೋಧ್ಯೆ ಪ್ರಕರಣದ ತೀರ್ಪು ಪ್ರಕಟವಾಗುವುದು ಖಚಿತವಾಗಿದೆ.