ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ಅಕ್ಟೋಬರ್ 25 ರಂದು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಭುವನೇಶ್ವರ/ಕೋಲ್ಕತಾ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಪೂರ್ವ ಕರಾವಳಿಯ ಕಡೆ ಸಾಗಿದ್ದು, ಬುಧವಾರ ಚಂಡಮಾರುತದ ಸ್ವರೂಪ ಪಡೆಯಲಿದೆ ಹಾಗೂ ಅ.25ರಂದು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ಒಡಿಶಾ, ಪ.ಬಂಗಾಳ ಹಾಗೂ ಆಂಧ್ರಪ್ರದೇಶ ಕರಾವಳಿಗಳಲ್ಲಿ ಹೈ ಅಲರ್ಟ್‌ ಸಾರಲಾಗಿದೆ.

ಈ ಚಂಡಮಾರುತಕ್ಕೆ ಒಮಾನ್‌ ದೇಶವು ‘ಡನಾ’ (ಅರೇಬಿಕ್‌ನಲ್ಲಿ ಔದಾರ್ಯ ಎಂದರ್ಥ) ಎಂದು ಹೆಸರಿಟ್ಟಿದೆ.

‘ವಾಯುಭಾರ ಕುಸಿತವು ಪಶ್ಚಿಮ-ವಾಯವ್ಯದ ಕಡೆ ಸಾಗಿ, ಅ.23ರಂದು ಚಂಡಮಾರುತವಾಗಲಿದೆ. ಇದು ಅ.25ರಂದು ಒಡಿಶಾದ ಉತ್ತರ ಭಾಗ ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ತೀರದಲ್ಲಿರುವ ಪುರಿ ಮತ್ತು ಸಾಗರ್‌ ಮಧ್ಯೆ ಅಪ್ಪಳಿಸಲಿದ್ದು, ಗಂಟೆಗೆ 100-110 ಕಿಮೀ ತೀವ್ರತೆಯಲ್ಲಿ ಗಾಳಿ ಬೀಸಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೇಶದಲ್ಲಿ ಕೃಷಿ ಅವಲಂಬಿತರು ಹೆಚ್ಚಳ, ಕರ್ನಾಟಕದಲ್ಲಿ ಇಳಿಕೆ!

ಬುಧವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ತೀರಗಳಲ್ಲಿ ಗಾಳಿಯ ತೀವ್ರತೆ ಗಂಟೆಗೆ 60 ಕಿಮೀ ತಲುಪಲಿದ್ದು, ಅ.23ರಿಂದ 25ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಸಲಾಗಿದೆ. ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿ, ಪ್ರಕೋಪವನ್ನು ಎದುರಿಸಲು ಸಿದ್ಧರಿರುವಂತೆ ಸೂಚಿಸಲಾಗಿದೆ.

ಅಕ್ಟೋಬರ್ 24, 25ರಂದು ಕಡಲತೀರಕ್ಕೆ ಡಾನಾ ಚಂಡಮಾರುತ; 100-110 ಕಿಮೀ ವೇಗದಲ್ಲಿ ಗಾಳಿ ಜೊತೆ ಮಳೆ