* ಕ್ಯಾಂಪ್‌ನಲ್ಲಿ ಸಿಆಆರ್‌ಪಿಎಫ್ ಜವಾನರ ವಾಗ್ವಾದ* ವಾಗ್ವಾದದ ನಡುವೆ ಗುಂಡಿನ ದಾಳಿ ನಡೆಸಿದ ಯೋಧ* ಗುಂಡಿನ ದಾಳಿಗೆ ನಾಲ್ವರು ಬಲಿ, ಮೂವರಿಗೆ ಗಂಭೀರ ಗಾಯ

ರಾಯ್ಪುರ(ನ.08): ಛತ್ತೀಸ್‌ಗಢದ ಸುಕ್ಮಾದಲ್ಲಿ (Sukma, Chhattisgarh) ಸಿಆರ್‌ಪಿಎಫ್ ಸಿಬ್ಬಂದಿ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ವೇಳೆ ಜವಾನನೊಬ್ಬ ತನ್ನ ಸಹ ಸೈನಿಕರ ಮೇಲೆ ಗುಂಡಿನ ದಾಳಿ (Firing) ನಡೆಸಿದ್ದು, ಇದರಲ್ಲಿ 4 ಯೋಧರು ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ CRPF ಶಿಬಿರವು ಮರೈಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ ಎಂಬುವುದು ಉಲ್ಲೇಖನೀಯ. ಸಿಆರ್‌ಪಿಎಫ್ (CRPF) 50 ಬೆಟಾಲಿಯನ್ ನಡುವೆ ಕೆಲ ವಿಚಾರವಾಗಿ ವಾಗ್ವಾದ ನಡೆದಿದ್ದು, ಈ ಜಗಳ ಗುಂಡು ಹಾರಿಸುವವರೆಗೂ ತಲುಪಿದೆ ಎಂದು ಹೇಳಲಾಗಿದೆ. ಘಟನೆ ಬಳಿಕ ಅಲ್ಲಲ್ಲಿ ಕೋಲಾಹಲ ಉಂಟಾಗಿದೆ.

Add Asianetnews Kannada as a Preferred SourcegooglePreferred

ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗುಂಡು ಹಾರಿಸಿದ ಯೋಧನ ಹೆಸರನ್ನು ರಿತೇಶ್ ರಂಜನ್ ಎಂದು ಹೇಳಲಾಗಿದ್ದು, ಅವರು ನೈಟ್‌ ಡ್ಯೂಟಿಯಲ್ಲಿದ್ದರು. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಧನಂಜಯ್ ಕುಮಾರ್ ಸಿಂಗ್, ರಾಜೀವ್ ಮಂಡಲ್, ಧರ್ಮಾತ್ಮ ಕುಮಾರ್ ಮತ್ತು ಮಲಯ್ ರಂಜನ್ ಮಹಾರಾಣಾ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡ ಯೋಧರನ್ನು ರಾಯ್‌ಪುರಕ್ಕೆ ವಿಮಾನ ಮೂಲಕ ಕರೆತರಲಾಗುತ್ತಿದೆ. ಘಟನೆಯಲ್ಲಿ ಹುತಾತ್ಮರಾದ ಯೋಧರ ಹೆಸರನ್ನು ಧಂಜಿ, ರಾಜೀಬ್ ಮಂಡಲ್, ಧರ್ಮೇಂದ್ರ ಕುಮಾರ್ ಮತ್ತು ರಾಜಮಣಿ ಕುಮಾರ್ ಯಾದವ್ ಎಂದು ನೀಡಲಾಗಿದೆ. ಇವರಲ್ಲಿ ಇಬ್ಬರು ಜವಾನರಾದ ಧಂಜಿ ಮತ್ತು ರಾಜಮಣಿ ಬಿಹಾರದ ನಿವಾಸಿಗಳಾಗಿದ್ದರೆ, ರಾಜೀಬ್ ಮಂಡಲ್ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದರು. ನಾಲ್ಕನೇ ಯೋಧ ಧರ್ಮೇಂದ್ರ ಕುಮಾರ್ ಬಗ್ಗೆ ಮಾಹಿತಿ ಸದ್ಯಕ್ಕೆ ಪತ್ತೆಯಾಗಿಲ್ಲ.

Scroll to load tweet…

ವಿವಾದದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ

ಇನ್ನು ಗುಂಡಿನ ದಾಳಿ ನಡೆಸಿದ ಆರೋಪಿ ಜವಾನ ರಿತೇಶ್ ರಂಜನ್ ಗೆ ಏನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರಂಭಿಕ ಮಾಹಿತಿಯಲ್ಲಿ ಸೈನಿಕರ ನಡುವಿನ ವಾಗ್ವಾದ ನಡೆದಿತ್ತೆಂಬ ವಿಷಯ ಬಯಲಿಗೆ ಬಂದಿದೆ. ಈ ಕುರಿತು ಸಿಆರ್‌ಪಿಎಫ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಸ್ತಾರ್ ಐಜಿ ಸ್ಥಳಕ್ಕೆ ತಲುಪಿದ್ದಾರೆ. ಯೋಧನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿರುವ ಘಟನೆ ಇದೇ ಮೊದಲಲ್ಲ, ಇದಕ್ಕೂ ಮುನ್ನ ಇಂತಹ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

ಆರೋಪಿ ಜವಾನನ ವಿಚಾರಣೆ

ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಗ್ರಾಮದಲ್ಲಿರುವ ಸಿಆರ್‌ಪಿಎಫ್‌ನ 50ನೇ ಬೆಟಾಲಿಯನ್‌ನ ಕ್ಯಾಂಪ್‌ನಲ್ಲಿ ಜವಾನನೊಬ್ಬ ತನ್ನ ಸಹಚರರ ಮೇಲೆ ಗುಂಡು ಹಾರಿಸಿದ್ದಾನೆ, ಬಸ್ತಾರ್ ಪ್ರದೇಶದ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ. ಗುಂಡಿನ ದಾಳಿಗೆ ಕಾರಣ ಸ್ಪಷ್ಟವಾಗಿಲ್ಲ. ವಾಗ್ವಾದದ ನಂತರ ಆರೋಪಿ ಜವಾನ ತನ್ನ ಎಕೆ-47 ರೈಫಲ್‌ನಿಂದ ಇತರ ಯೋಧರ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ನಾಲ್ವರು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಮೂವರು ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಇತರ ಜವಾನರು ಮತ್ತು ಅಧಿಕಾರಿಗಳು ಆಗಮಿಸಿ ಆರೋಪಿ ಜವಾನನನ್ನು ಹಿಡಿದಿದ್ದಾರೆ. ಆರೋಪಿ ಜವಾನನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.