ಕೊರೋನಾಗೆ ಚಿಕಿತ್ಸೆ ಪ್ರಾಣಿಗಳಿಗಿಂತ ಕಡೆ ; ವಿವಿಧೆಡೆ ಆಸ್ಪತ್ರೆಗಳ ಸ್ಥಿತಿಗತಿಗೆ ಸುಪ್ರೀಂ ಕೆಂಡ
ದೇಶದಲ್ಲಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವುದರ ನಡುವೆಯೇ, ವಿವಿಧ ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ಎಲ್ಲೆ ಮೀರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅತ್ಯಂತ ಕಟು ಶಬ್ದಗಳಲ್ಲಿ ಕಿಡಿಕಾರಿದೆ. ಕೊರೋನಾ ರೋಗಿಗಳಿಗೆ ಪ್ರಾಣಿಗಳಿಗಿಂತ ಕೀಳಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನವದೆಹಲಿ (ಜೂ. 13): ದೇಶದಲ್ಲಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವುದರ ನಡುವೆಯೇ, ವಿವಿಧ ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಯ$್ಷ ಎಲ್ಲೆ ಮೀರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅತ್ಯಂತ ಕಟು ಶಬ್ದಗಳಲ್ಲಿ ಕಿಡಿಕಾರಿದೆ.
ಕೊರೋನಾ ರೋಗಿಗಳಿಗೆ ಪ್ರಾಣಿಗಳಿಗಿಂತ ಕೀಳಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯ ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪಕ್ಕದಲ್ಲೇ ವೈರಸ್ಗೆ ಬಲಿಯಾದವರ ಶವಗಳ ರಾಶಿ ಹಾಕಿದ್ದು ಭಯಾನಕ ಎಂದು ಅಬ್ಬರಿಸಿದೆ.
ಕೊರೋನಾ ರೋಗಿಗಳ ಚಿಕಿತ್ಸೆ ಹಾಗೂ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಕುರಿತಂತೆ ಮಾಧ್ಯಮಗಳಲ್ಲಿ ಮನಕಲಕುವ ಹಲವು ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಶುಕ್ರವಾರ ಸ್ವಯಂ ಅರ್ಜಿ ದಾಖಲಿಸಿಕೊಂಡ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ದೆಹಲಿ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಚಾಟಿ ಬೀಸಿತು.
ಇನ್ನು ಕೊರೋನಾ ವೈರಸ್ ಪರೀಕ್ಷೆಗೆ ಹೊಸ ಮಾನದಂಡ?
ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಗುಜರಾತ್ ರಾಜ್ಯಗಳಿಗೆ ಕೊರೋನಾ ರೋಗಿಗಳ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ. ಕೌಲ್ ಹಾಗೂ ಎಂ.ಆರ್. ಶಾ ಅವರಿದ್ದ ಪೀಠ ಸೂಚಿಸಿತು. ಸರ್ಕಾರಿ ಆಸ್ಪತ್ರೆಗಳು, ರೋಗಿಗಳ ಆರೈಕೆ, ಸಿಬ್ಬಂದಿ, ಮೂಲಸೌಕರ್ಯ ಮತ್ತಿತರ ಮಾಹಿತಿಯನ್ನು ಈ ರಾಜ್ಯಗಳು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿತು.
ಕೊರೋನಾಗೆ ಬಲಿಯಾದವರ ಶವಗಳ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿಲ್ಲ. ಮೃತದೇಹಗಳ ವಿಚಾರದಲ್ಲಿ ಆಸ್ಪತ್ರೆಗಳು ಹೆಚ್ಚಿನ ಕಾಳಜಿ ತೆಗೆದುಕೊಳ್ಳುತ್ತಿಲ್ಲ. ವ್ಯಕ್ತಿ ನಿಧನರಾಗಿ ಹಲವು ದಿನಗಳೇ ಕಳೆದರೂ ಕುಟುಂಬದವರಿಗೆ ಮಾಹಿತಿ ನೀಡುತ್ತಿಲ್ಲ. ಯಾವಾಗ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂಬ ವಿಷಯವನ್ನೂ ಬಂಧುಗಳಿಗೆ ತಿಳಿಸಲಾಗುತ್ತಿಲ್ಲ. ಇದರಿಂದಾಗಿ ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಕೊನೆಯದಾಗಿ ತಮ್ಮವರ ಮೃತದೇಹ ನೋಡಲೂ ಆಗುತ್ತಿಲ್ಲ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲೂ ಆಗುತ್ತಿಲ್ಲ. ಒಂದು ಪ್ರಕರಣದಲ್ಲಂತೂ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ ಎಂದು ಖೇದ ವ್ಯಕ್ತಪಡಿಸಿತು.
ಪ್ರಾಣಿ ಶವದಂತೆ ವ್ಯಕ್ತಿ ಶವ ಎಳೆದೊಯ್ದರು!
ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆ ಬಗ್ಗೆ ಪ್ರಸ್ತಾಪಿಸಿದ ನ್ಯಾಯಪೀಠ, ರೋಗಿಗಳ ವಾರ್ಡ ಶವ ಇಡಲಾಗಿತ್ತು. ವರಾಂಡ ಹಾಗೂ ನಿರೀಕ್ಷಣಾ ಕೊಠಡಿಗಳಲ್ಲೂ ಶವಗಳನ್ನು ತುಂಬಲಾಗಿತ್ತು. ಈ ಪರಿಸ್ಥಿತಿ ಭಯಾನಕವಾಗಿದೆ ಎಂದಿತು.
ವೈದ್ಯರಿಗೆ ಸಂಬಳ:
ಮತ್ತೊಂದೆಡೆ, ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರಿಗೆ ವೇತನ ಪಾವತಿಸದಿರುವುದು, ವಸತಿ ವ್ಯವಸ್ಥೆ ಕಲ್ಪಿಸದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಯುದ್ಧ ನಡೆಯುತ್ತಿರುವಾಗ ಯೋಧರು ಅಸಮಾಧಾನಗೊಳ್ಳದಂತೆ ನೋಡಿಕೊಳ್ಳಬೇಕು. ಒಂದು ಹೆಜ್ಜೆ ಮುಂದೆ ಹೋಗಿ, ಹೆಚ್ಚಿನ ಹಣ ತಂದು ವೈದ್ಯರ ಕುಂದುಕೊರತೆ ನಿವಾರಿಸಿ ಎಂದು ನ್ಯಾಯಾಲಯ ಸೂಚಿಸಿದೆ.