ಪ್ರಾಣಿ ಶವದಂತೆ ವ್ಯಕ್ತಿ ಶವ ಎಳೆದೊಯ್ದರು!
ಮನುಷ್ಯನ ಮೃತದದೇಹವನ್ನು ಪ್ರಾಣಿಯ ಶವದಂತೆ ಎಳೆದೊಯ್ದ ದೃಶ್ಯ ವೈರಲ್| ಕೋಲ್ಕತಾದಲ್ಲೊಂದು ಅಮಾನವೀಯ ಘಟನೆ
ಕೋಲ್ಕತಾ(ಜೂ.13): ಕೋಲ್ಕತಾದ ಶವಾಗಾರವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿರುವ ಮೃತ ದೇಹಗಳನ್ನು ಅಮಾನವೀಯವಾಗಿ ಎಳೆದೊಯ್ದು ವ್ಯಾನ್ವೊಂದರಲ್ಲಿ ತುಂಬುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊರೋನಾ ವೈರಸ್ನಿಂದ ಜನರು ಮೃತಪಟ್ಟಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
ಮೃತ ದೇಹಗಳು ಕೊರೋನಾ ವೈರಸ್ ಪೀಡಿತ ರೋಗಿಗಳದ್ದಾಗಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಮೃತ ಪಟ್ಟವರು ಕೊರೋನಾ ವೈರಸ್ ರೋಗಿಗಳಲ್ಲ. ಅವು ವಾರಸುದಾರರು ಇಲ್ಲದ ದೇಹಗಳು ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಕಳವಳ ವ್ಯಕ್ತಪಡಿಸಿದ್ದು, ಮೃತದೇಹಗಳನ್ನು ಹೃದಶೂನ್ಯವಾಗಿ ವಿಲೇವಾರಿ ಮಾಡಲಾಗಿದೆ. ಈ ಕೃತ್ಯ ಎಸಗಿದವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಗೃಹ ಕಾರ್ಯದರ್ಶಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ.