ಚೀನಾಕ್ಕಿಂತ ಭಾರತಕ್ಕೆ ಕೊರೋನಾ ದೊಡ್ಡ ಕಂಟಕ!
ವೈರಾಣುಗಳು ಯಾವಾಗಲೂ ತಂಪಾದ, ಶುಷ್ಕ ಹವಾಮಾನದಲ್ಲಿ ಹೆಚ್ಚು ಹರಡುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ಜ್ವರ ಹೆಚ್ಚು. ಭಾರತ ಸೇರಿದಂತೆ ಏಷ್ಯಾ ಉಪಖಂಡದಲ್ಲಿ ಬೇಸಿಗೆ ಸಮೀಪಿಸುತ್ತಿರುವುದರಿಂದ, ಸೂರ್ಯನ ಶಾಖವು ಕೊರೋನಾ ವೈರಸ್ಸನ್ನು ಹೊರಹಾಕುವಲ್ಲಿ ಸಹಾಯಕವಾಗಬಹುದು. ಆದರೆ, ಇದಕ್ಕಿಂತ ದೊಡ್ಡ ಸಮಸ್ಯೆ ಇನ್ನೊಂದಿದೆ.
ನವದೆಹಲಿ[ಮಾ.05]: ಚೀನಾ ಮೂಲದ ಕೊರೋನಾ ವೈರಸ್ ಜಗತ್ತಿನಾದ್ಯಂತ ಶರವೇಗದಲ್ಲಿ ಹಬ್ಬುತ್ತಿದೆ. ಭಾರತದಲ್ಲಿಯೂ 3 ಪ್ರಕರಣಗಳಲ್ಲಿ ಕೊರೋನಾ ವೈರಸ್ ತಗುಲಿರುವುದು ದೃಢವಾಗಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಈಗಾಗಲೇ ಅನುಮಾನಾಸ್ಪದ 23,532 ಜನರನ್ನು ನಿಗಾದಲ್ಲಿ ಇಡಲಾಗಿದೆ ಎಂದು ಸರ್ಕಾರವೇ ಹೇಳಿದೆ. ನೆರೆಯ ಶ್ರೀಲಂಕಾದಲ್ಲೂ ಒಬ್ಬರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಪಾಕಿಸ್ತಾನವೂ ಮೊದಲ ಸೋಂಕಿತ ವ್ಯಕ್ತಿಯ ಬಗ್ಗೆ ಬಾಯ್ಬಿಟ್ಟಿದೆ.
ನಮಸ್ತೇ ಹೇಳಿ ಕೊರೋನಾದಿಂದ ಬಚಾವ್ ಆಗಿ ಅಂತಿದ್ದಾರೆ ಸಲ್ಮಾನ್ ಖಾನ್
ಭಾರತಕ್ಕೇಕೆ ಇದು ದೊಡ್ಡ ಸವಾಲು?
ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆಯಿರುವ ದೇಶ ಚೀನಾ. ಭಾರತ ನಂ.2 ಸ್ಥಾನದಲ್ಲಿದೆ. ಆದರೆ, ಜನಸಾಂದ್ರತೆಯಲ್ಲಿ ಚೀನಾಕ್ಕಿಂತ ಭಾರತ ಮುಂದಿದೆ. ಚೀನಾದಲ್ಲಿ ಪ್ರತಿ ಚದರ ಕಿ.ಮೀ. ಜಾಗದಲ್ಲಿ 148 ಜನರು ವಾಸಿಸುತ್ತಿದ್ದರೆ ಭಾರತದಲ್ಲಿ ಪ್ರತಿ ಚದರ ಕಿ.ಮೀ.ಯಲ್ಲಿ 420 ಜನರು ವಾಸಿಸುತ್ತಿದ್ದಾರೆ. ಮೇಲಾಗಿ, ಇಲ್ಲಿನ ಆರೋಗ್ಯ ವ್ಯವಸ್ಥೆಯು ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ ಮತ್ತು ದೇಶೀಯ ಆಂತರಿಕ ವಲಸೆ ಹೆಚ್ಚಾಗಿರುವುದರಿಂದ ಸೋಂಕು ನಿಯಂತ್ರಣ ಭಾರತಕ್ಕೆ ಒಂದು ದೊಡ್ಡ ಸವಾಲು. ಭಾರತದ ಜನಸಂಖ್ಯೆಗೆ ಹೋಲಿಸಿದರೆ ಕೊರೋನಾ ಸೋಂಕಿತ ಪ್ರಕರಣಗಳು ತೀರಾ ಚಿಕ್ಕದೆನಿಸಬಹುದು. ಆದರೆ ಕೊರೋನಾ ವೈರಸ್ ಚೀನಾದಿಂದ ಹೊರಗೆ ವ್ಯಾಪಕವಾಗಿ ಹಬ್ಬುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಏಕಾಏಕಿ ಈ ಸೋಂಕು ವ್ಯಾಪಿಸಿದಲ್ಲಿ ತೀವ್ರ ಜನನಿಬಿಡವಾಗಿರುವ ಭಾರತದಂಥ ದೇಶಕ್ಕೆ ಅದನ್ನು ತಡೆಯುವುದು ಚೀನಾಕ್ಕಿಂತ ಕಷ್ಟವಾಗಬಹುದು. ಜೊತೆಗೆ ಆರ್ಥಿಕತೆಗೂ ತಾಳಿಕೊಳ್ಳಲಾಗದ ಹೊಡೆತ ನೀಡಬಹುದು ಎಂಬ ಕಳವಳ ವ್ಯಕ್ತವಾಗುತ್ತಿದೆ.
ಕೊರೋನಾ ವೈರಸ್ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?
ಜನಸಾಂದ್ರತೆಯೇ ಕಂಟಕ
ಬೇರೆಲ್ಲಾ ದೇಶಗಳಿಗಿಂತ ಭಾರತ ಕೊರೋನಾ ಬಗ್ಗೆ ಹೆಚ್ಚು ಜಾಗೃತವಾಗಿರಬೇಕು. ಕಾರಣ ಭಾರತದ ಜನಸಾಂದ್ರತೆ. ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ ಇಲ್ಲಿ 420 ಜನರು ವಾಸಿಸುತ್ತಾರೆ. ಅದೇ ಚೀನಾದಲ್ಲಿ 148 ಜನರು ವಾಸಿಸುತ್ತಾರೆ. ಮುಂಬೈನ ಧಾರಾವಿ ಕೊಳಚೆ ಪ್ರದೇಶದಲ್ಲಿ ಅಥವಾ ಸಾಂಪ್ರದಾಯಿಕ ಅವಿಭಕ್ತ ಕುಟುಂಬಗಳಲ್ಲಿ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಪರಸ್ಪರ ಮಾತು, ಶೀತ, ಕೆಮ್ಮು, ಸೀನು ಇವುಗಳಿಂದ ಸೋಂಕು ವ್ಯಾಪಿಸಬಹುದು.
ಬೆಂಗ್ಳೂರಲ್ಲಿ ಕೊರೋನಾ ವೈರಸ್: ರೋಗ ಬರದಂತೆ ಹಿಂಗ್ ಮಾಡಿದ್ರೆ ಬೆಸ್ಟ್
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ಸಾರ್ವಜನಿಕ ಆರೋಗ್ಯಕ್ಕೆ ಭಾರತಕ್ಕಿಂತ ಕಡಿಮೆ ವ್ಯಯಿಸುತ್ತಿವೆ. ಹಾಗಾಗಿ ಆ ದೇಶದಲ್ಲಿ ಸೋಂಕು ಹೆಚ್ಚಾಗುತ್ತಲೇ ಇದೆ. ಪಾಕಿಸ್ತಾನದಲ್ಲಿ ಪತ್ತೆಯಾದ ಮೊದಲ ಪ್ರಕರಣದಲ್ಲಿ ಸೋಂಕಿತ ವ್ಯಕ್ತಿಯು ಇರಾನ್ನಿಂದ ಬಂದವನು. ಮಧ್ಯಪ್ರಾಚ್ಯದಲ್ಲಿ ಈಗಾಗಲೇ 245 ಜನರಲ್ಲಿ ಸೋಂಕಿರುವುದು ದೃಢಪಟ್ಟಿದ್ದು, 26 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನವು ಚೀನಾ, ಜಪಾನ್ ಮತ್ತು ಇರಾನ್ನಿಂದ ಬರುವ ಮತ್ತು ಹೋಗುವ ವಿಮಾನಗಳನ್ನು ರದ್ದುಪಡಿಸಿದೆ. ಪಾಕ್ ಚೀನಾದಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ಕರೆತರಲು ನಿರಾಕರಿಸಿದೆ. ಬಾಂಗ್ಲಾ ಚೀನಾದ ವುಹಾನ್ನಿಂದ ಕರೆತಂದ 312 ಜನರನ್ನು ಢಾಕಾದ ಹೊರವಲಯದಲ್ಲಿ ತೀವ್ರ ನಿಗಾದಲ್ಲಿ ಇರಿಸಿದೆ.
ಆಂತರಿಕ ವಲಸೆಯಿಂದ ಸಮಸ್ಯೆ
ಚೀನಾದಂತೆ ಭಾರತದಲ್ಲೂ ಆಂತರಿಕ ವಲಸೆ ಹೆಚ್ಚು. 2011ರ ಜನಗಣತಿ ಪ್ರಕಾರ 45 ಕೋಟಿ ಜನರು ಉದ್ಯೋಗ ಅಥವಾ ಸೌಲಭ್ಯ ಅರಸಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಬಂದಿದ್ದಾರೆ. ದಿನನಿತ್ಯ ಲಕ್ಷಾಂತರ ಜನ ಉದ್ಯೋಗ ಅರಸಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ಈ ಮಾರಣಾಂತಿಕ ವೈರಸ್ ತಡೆಯುವುದು ಸುಲಭದ ಕೆಲಸವಲ್ಲ. ಚೀನಾ ಕೊರೋನಾ ಪೀಡಿತ ಹುಬೈ ಪ್ರಾಂತ್ಯಕ್ಕೆ ಸಂಪರ್ಕವನ್ನೇ ತಪ್ಪಿಸಿ ವೈರಸ್ ನಿಯಂತ್ರಣಕ್ಕೆ ಪ್ರಯತ್ನಿಸಿತ್ತು. ಆದರೆ ಭಾರತದಲ್ಲಿ ಇಂಥ ಪ್ರಯತ್ನ ಫಲ ಕೊಡುವುದಿಲ್ಲ. ಭಾರತದಲ್ಲಿ ಜನರು ನಿತ್ಯ ಒಂದಿಲ್ಲೊಂದು ಪ್ರದೇಶಕ್ಕೆ ಪ್ರಯಾಣಿಸುವುದರಿಂದ ಸೋಂಕು ಬೇಗ ವ್ಯಾಪಿಸುವ ಸಾಧ್ಯತೆ ಹೆಚ್ಚು. ದೊಡ್ಡ ಪ್ರಮಾಣದಲ್ಲಿ ಸೋಂಕು ಏಕಾಏಕಿ ಹಬ್ಬಲು ಆರಂಭವಾದರೆ ಈಗಾಗಲೇ ಸಂಕಷ್ಟದಲ್ಲಿರುವ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ. ನಮ್ಮ ದೇಶದ ಆರೋಗ್ಯ-ರಕ್ಷಣಾ ಖರ್ಚು ವಿಶ್ವದಲ್ಲೇ ಅತ್ಯಂತ ಕಡಿಮೆ. ಒಟ್ಟು ದೇಶೀಯ ಉತ್ಪನ್ನದ ಕೇವಲ 3.7% ಮಾತ್ರ ಭಾರತ ಆರೋಗ್ಯಕ್ಕಾಗಿ ವ್ಯಯ ಮಾಡುತ್ತಿದೆ. ಅದು ಸಾರ್ವಜನಿಕ ಆಸ್ಪತ್ರೆಗಳ ದೈನಂದಿನ ನಿರ್ವಹಣೆ ಮತ್ತು ದುರಸ್ತಿಗೇ ಬೇಕಾಗುತ್ತದೆ. ಇನ್ನು ಖಾಸಗಿ ಆಸ್ಪತ್ರೆಗಳು ಬಹುತೇಕರಿಗೆ ನಿಲುಕದ ನಕ್ಷತ್ರ.
ಕೊರೋನಾ ಬಂದ ಕೂಡ್ಲೇ ಸಾಯೋಲ್ಲ: ಹೀಗ್ ಮಾಡಿದ್ರೆ ರೋಗ ಬರೋದೇ ಇಲ್ಲ...
ಚೀನಾದಲ್ಲಿ ಸೋಂಕು ಹರಡಿದಾಗಿನಿಂದ ಭಾರತ ಸೋಂಕು ನಿಯಂತ್ರಣಕ್ಕೆ ಸಾಕಷ್ಟುಕ್ರಮ ಕೈಗೊಳ್ಳುತ್ತಿದೆ. ಬಂದರು ಮತ್ತು ಏರ್ಪೋರ್ಟ್ಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಸೋಂಕುಪೀಡಿತ ದೇಶಗಳಿಂದ ಭಾರತಕ್ಕೆ ಬರುವವರ ವೀಸಾವನ್ನು ರದ್ದು ಮಾಡಿದೆ. ನೂತನ ಟ್ರಾವೆಲ್ ಅಡ್ವೈಸರಿಯನ್ನು ಬಿಡುಗಡೆ ಮಾಡಿದೆ. ಆದರೆ ಭಾರತದಲ್ಲಿ ಕ್ಷಯರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪದ್ಮನೇಸನ್ ನರಸಿಂಹನ್, ಭಾರತದಲ್ಲಿ ರೋಗ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಂತರಿಕ ವಲಸೆ, ಜನಸಾಂದ್ರತೆ, ಸೂಕ್ತ ಆರೋಗ್ಯ ಸೌಲಭ್ಯಗಳ ಕೊರತೆ ಭಾರತಕ್ಕೆ ಅತಿ ದೊಡ್ಡ ಸವಾಲಾಗಬಲ್ಲದು ಎಂದು ಅವರು ಹೇಳಿದ್ದಾರೆ.
ಬೇಸಿಗೆ ಭಾರತಕ್ಕೆ ವರವಾಗುತ್ತಾ?
ಕೊರೋನಾ ವೈರಸ್ ಈಗಾಗಲೇ ಹರಡುತ್ತಿರುವ ಸ್ಥಳಗಳಿಗಿಂತ ಭಾರತ ಮತ್ತು ದಕ್ಷಿಣ ಏಷ್ಯಾದ ದೇಶಗಳಿಗೆ ಸದ್ಯಕ್ಕೆ ಅನುಕೂಲವಾಗುವಂತಹ ಒಂದೇ ಒಂದು ಅಂಶವೆಂದರೆ ಇಲ್ಲಿನ ಹವಾಮಾನ. ಎಲ್ಲಾ ರೀತಿಯ ಕೊರೋನಾ ವೈರಸ್ಗಳು ತಂಪಾದ, ಶುಷ್ಕ ಹವಾಮಾನದಲ್ಲಿ ಹೆಚ್ಚು ಸಕ್ರಿಯವಾಗುತ್ತವೆ. ಹಾಗಾಗಿಯೇ ಚಳಿಗಾಲದಲ್ಲಿ ಜ್ವರ ಹೆಚ್ಚು. ಭಾರತ ಸೇರಿದಂತೆ ಏಷ್ಯಾ ಉಪಖಂಡದಲ್ಲಿ ಬೇಸಿಗೆ ಸಮೀಪಿಸುತ್ತಿರುವುದರಿಂದ, ಸೂರ್ಯನ ಶಾಖವು ವೈರಸ್ಸನ್ನು ಹೊರಹಾಕುವಲ್ಲಿ ಸಹಾಯಕವಾಗಬಹುದು ಎಂಬುದು ಸಣ್ಣ ಸಮಾಧಾನ ತರುವ ವಿಷಯ.
ಹಾಗೆಯೇ ದೇಶಾದ್ಯಂತ ವೈರಸ್ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತದ ಆರೋಗ್ಯ ವ್ಯವಸ್ಥೆಯು ಅಷ್ಟೊಂದು ಸಮರ್ಪಕವಾಗಿಲ್ಲದಿದ್ದರೂ, ಭಾರತಕ್ಕೆ ಇಂಥ ವೈರಸ್ಗಳು ಹೊಸದೇನಲ್ಲ. ಮಲೇರಿಯಾ, ಡೆಂಘೀ, ಕ್ಷಯ ಮುಂತಾದ ರೋಗಗಳು ಇಲ್ಲಿ ಅಪ್ಪಳಿಸಿ ಲಕ್ಷಾಂತರು ಜನರು ಮೃತಪಟ್ಟಿದ್ದರು. ಆ ಎಲ್ಲಾ ಸೋಂಕುಗಳಿಂದ ಭಾರತ ಸಾಕಷ್ಟುಪಾಠ ಕಲಿತಿದೆ. ಇಂಥ ಸೋಂಕುಗಳ ವಿರುದ್ಧ ಹೋರಾಡುವ ಪರಿಣತಿಯನ್ನು ಪಡೆದಿದೆ. ಆದರೆ, ಅಷ್ಟಕ್ಕೇ ಸಮಾಧಾನ ಪಡುವಂತಿಲ್ಲ. ಚೀನಾದಂತೆ ಭಾರತದಲ್ಲಿ ಕೊರೋನಾ ವ್ಯಾಪಿಸಿದರೆ ಖಂಡಿತವಾಗಿಯೂ ದೇಶಕ್ಕೆ ದೊಡ್ಡ ಕಂಟಕವಾಗುವುದರಲ್ಲಿ ಸಂದೇಹವಿಲ್ಲ.
ಕೃಪೆ: ದಿ ಪ್ರಿಂಟ್