Asianet Suvarna News Asianet Suvarna News

New Parliament Building: ನೂತನ ಸಂಸತ್‌ ಭವನ ಉದ್ಘಾಟನೆಗೆ 19 ಪಕ್ಷಗಳ ಬಾಯ್ಕಾಟ್‌!

ಸೆಂಟ್ರಲ್‌ ವಿಸ್ಟಾ ಪ್ರಾಜೆಕ್ಟ್‌ನಲ್ಲಿ ನಿರ್ಮಾಣವಾಗಿರುವ ಹೊಸ ಸಂಸತ್‌ ಭವನ ಭಾನುವಾರ ಉದ್ಘಾಟನೆಯಾಗಲಿದೆ. ಆದರೆ, ಕಾಂಗ್ರೆಸ್‌ ನೇತೃತ್ವದ 19 ವಿರೋಧ ಪಕ್ಷಗಳು ಈ ಕಾರ್ಯಕ್ರಮವನ್ನು ಬಾಯ್ಕಾಟ್‌ ಮಾಡುವುದಾಗಿ  ಹೇಳಿದೆ. ಇನ್ನೊಂದೆಡೆ ಹೊಸ ಸಂಸತ್‌ ಭವನದಲ್ಲಿ ಐತಿಹಾಸಿಕ ರಾಜದಂಡವನ್ನು ಪ್ರತಿಷ್ಠಾಪನೆ ಮಾಡುವುದಾಗಿ ಸರ್ಕಾರ ತಿಳಿಸಿದೆ.
 

Controversy on New Parliament Building  19 parties will boycott the inauguration san
Author
First Published May 24, 2023, 1:39 PM IST

ನವದೆಹಲಿ (ಮೇ.24): ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾನುವಾರ ನೂತನ ಸಂಸತ್‌ ಭವನದ ಕಟ್ಟಡ ಉದ್ಘಾಟನೆಯಾಗಲಿದೆ. ಆದರೆ, ಕಾಂಗ್ರೆಸ್‌ ನೇತೃತ್ವದ 19 ವಿರೋಧ ಪಕ್ಷಗಳು ಈ ಉದ್ಘಾಟನೆ ಕಾರ್ಯಕ್ರಮವನ್ನು ಬಾಯ್ಕಾಟ್‌ ಮಾಡುವುದಾಗಿ ತಿಳಿಸಿದೆ ಬುಧವಾರ ಈ ಕುರಿತಾಗಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಬಾಯ್ಕಾಟ್‌ ನಿರ್ಧಾರವನ್ನು ಪ್ರಕಟಿಸಿದೆ. 'ಪ್ರಜಾಪ್ರಭುತ್ವದ ಆತ್ಮವನ್ನೇ ಸಂಸತ್ತಿನಿಂದ ಹೊರತೆಗೆದಿರುವಾಗ, ಹೊಸ ಕಟ್ಟಡದಲ್ಲಿ ನಮಗೆ ಯಾವುದೇ ಮೌಲ್ಯ ಕಾಣಿಸುತ್ತಿಲ್' ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹೊಸ ಸಂಸತ್‌ ಭವನವನ್ನು ಉದ್ಘಾಟಿಸಬೇಕು ಎಂದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಒತ್ತಾಯ ಮಾಡಿದ್ದಾರೆ. ಆದರೆ ಮೇ 28ರಂದು ನೂತನ ಸಂಸತ್ ಕಟ್ಟಡವನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ನಡುವೆ ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, '60,000 ಶ್ರಮ ಯೋಗಿಗಳು ಈ ಹೊಸ ಕಟ್ಟಡವನ್ನು ದಾಖಲೆ ಸಮಯದಲ್ಲಿ ನಿರ್ಮಾಣ ಮಾಡಲು ಕೊಡುಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಎಲ್ಲಾ ಶ್ರಮ ಯೋಗಿಗಳನ್ನು ಗೌರವಿಸಲಿದ್ದಾರೆ. ರಾಜಕಾರಣ ಮುಂದುವರಿಯುತ್ತದೆ. ಎಲ್ಲರನ್ನೂ ಆಹ್ವಾನಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕೇಳಿಕೊಳ್ಳುತ್ತೇವೆ' ಎಂದಿದ್ದಾರೆ.

ಇದೇ ವೇಳೆ ಹೊಸ ಸಂಸತ್ತಿನಲ್ಲಿ ಸ್ಪೀಕರ್‌ ಕೂರುವ ಸ್ಥಲದಲ್ಲಿ ಸೆಂಗೋಲ್‌ ಅಂದರೆ ರಾಜದಂಡವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ. ಸೆಂಗೋಲ್‌ ಎನ್ನುವ ಪದಕ್ಕೆ ಸಂಪತ್ತು ಎನ್ನುವ ಅರ್ಥವೂ ಇದೆ. ಸಂಸತ್ತು ರಾಷ್ಟ್ರಕ್ಕೆ ಸಮರ್ಪಿತವಾದ ದಿನದಂದು ತಮಿಳುನಾಡಿನ ವಿದ್ವಾಂಸರು ಸೆಂಗೋಲ್ ಅನ್ನು ಪ್ರಧಾನ ಮಂತ್ರಿಗೆ ಅರ್ಪಿಸುತ್ತಾರೆ. ಅದನ್ನು ಸಂಸತ್ತಿನಲ್ಲಿ ಇಡಲಾಗುವುದು. ಸೆಂಗೋಲ್ ಅನ್ನು ಮೊದಲು ಅಲಹಾಬಾದ್‌ನಲ್ಲಿ ಇರಿಸಲಾಗಿತ್ತು ಎಂದು ಶಾ ಹೇಳಿದರು.

ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ತೃಣಮೂಲ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಜನತಾ ದಳ-ಯುನೈಟೆಡ್ (ಜೆಡಿಯು), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಜಾರ್ಖಂಡ್ ಮುಕ್ತಿ ಮೋರ್ಚಾ, ಕೇರಳ ಕಾಂಗ್ರೆಸ್ ಮಣಿ, ವಿದುತಲೈ ಚಿರುತೈಗಲ್ ಕಚ್ಚಿ, ರಾಷ್ಟ್ರೀಯ ಲೋಕದಳ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಸೇರಿದಂತೆ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕಜಗಂ) ಕೂಡ ಈ ಕಾರ್ಯಕ್ರಮದ ಭಾಗವಾಗದೇ ಇರಲು ನಿರ್ಧರಿಸಿದೆ.

'ನಮ್ಮ ಸಂಸತ್ತು ಐತಿಹಾಸಿಕ. ಮುಂದಿನ 100 ವರ್ಷಗಳವರೆಗೆ ಇದು ಇರಲಿದೆ. ಇದರ ನಿರ್ಮಾಣದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ಸ್‌ನ ಯಾವುದೇ ಪಾತ್ರವಿಲ್ಲ. ಇದರ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಮಾಡಿದ್ದರೆ, ಉದ್ಘಾಟನೆಯನ್ನೂ ಕೂಡ ಅವರೇ ಮಾಡುತ್ತಿದ್ದಾರೆ. ಆದರೆ, ದೇಶದ ಮುಖ್ಯಸ್ಥರು ರಾಷ್‌ಟ್ರಪತಿ. ಆಕೆ ಬುಡಕಟ್ಟು ಮಹಿಳೆ. ಸಂಸತ್ತಿನ ಉಸ್ತುವಾರಿ ಆಕೆ. ಆದರೆ, ಅವರನ್ನು ಉದ್ಘಾಟನೆಗೆ ಕರೆಯುತ್ತಿಲ್ಲ. ಹೊಸ ಸಂಸತ್‌ ಭವನವನ್ನು ಅವರಿಂದಲೇ ಉದ್ಘಾಟಿಸುವುದು ಶಿಷ್ಟಾಚಾರ. ಆದರೆ, ಪ್ರಧಾನಿಯಿಂದ ಉದ್ಘಾಟನೆ ಮಾಡುವ ಮೂಲಕ ರಾಜಕೀಯ ಕಾರ್ಯಕ್ರಮ ಮಾಡುತ್ತಿದ್ದೀರಿ. ವಿರೋಧ ಪಕ್ಷಗಳು ಈ ಕಾರ್ಯಕ್ರಮಕ್ಕೆ ಹೋಗೋದಿಲ್ಲ ಎಂದು ಉದ್ದವ್‌ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.

 

Photos: ವಿಶ್ವದ ಬೃಹತ್‌ ಪ್ರಜಾಪ್ರಭುತ್ವದ ಹೊಸ ದೇಗುಲಕ್ಕೆ ನರೇಂದ್ರ ಮೋದಿ ಭೇಟಿ!

ಹೊಸ ಸಂಸತ್‌ ಭವನ ಬರೋಬ್ಬರಿ 862 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. 2020ರ ಡಿಸೆಂಬರ್‌ 10ಕ್ಕೆ ಇದರ ಶಿಲಾನ್ಯಾಸ ಮಾಡಲಾಗಿತ್ತು. 2021ರ ಜನವರಿ 15ರಂದು ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಕಳೆದ ವರ್ಷದ ನವೆಂಬರ್‌ಗೆ ಇದರ ಕಾಮಗಾರಿ ಮುಕ್ತಾಯವಾಗಬೇಕಿತ್ತು. 28 ತಿಂಗಳ ಅಂತರದಲ್ಲಿ ಇದರ ನಿರ್ಮಾಣವಾಗಗಿದೆ. ಸೆಂಟ್ರಲ್‌ ವಿಸ್ಟಾ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ.

ಮೇ 28ಕ್ಕೆ ನೂತನ ಸಂಸತ್‌ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ

Follow Us:
Download App:
  • android
  • ios