Asianet Suvarna News Asianet Suvarna News

ರಾಹುಲ್‌ ವಿಚಾರಣೆ ವಿರುದ್ಧ ಕಾಂಗ್ರೆಸ್‌ ಕಿಚ್ಚು: ದಿಲ್ಲಿ ಸೇರಿ ದೇಶದ ವಿವಿಧ ಕಡೆ ಪ್ರತಿಭಟನೆ

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸಿಲುಕಿಸಿ ರಾಜಕೀಯ ಸೇಡು ತೀರಿಸಿಕೊಳ್ಳಲು ಮೋದಿ ಸರ್ಕಾರ ಹೊರಟಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ದೆಹಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. 

Congress Protests against Rahul Gandhi Ed Investigation gvd
Author
Bangalore, First Published Jun 14, 2022, 5:25 AM IST

ನವದೆಹಲಿ (ಜೂ.14): ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸಿಲುಕಿಸಿ ರಾಜಕೀಯ ಸೇಡು ತೀರಿಸಿಕೊಳ್ಳಲು ಮೋದಿ ಸರ್ಕಾರ ಹೊರಟಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ದೆಹಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ‘ಸತ್ಯಾಗ್ರಹ ಯಾತ್ರೆ’ ಹೆಸರಿನ ಈ ಪ್ರತಿಭಟನೆ ವೇಳೆ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಖ್ಯ ಪ್ರತಿಭಟನೆ ದಿಲ್ಲಿಯಲ್ಲಿ ನಡೆಯಿತು. ಬೆಳಗ್ಗೆ 9 ಗಂಟೆಗೇ ಸಾಕಷ್ಟುಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಪ್ರಿಯಾಂಕಾ ವಾದ್ರಾ, ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಮುಖ್ಯ ಕಚೇರಿಗೆ ಆಗಮಿಸಿದರು. ಕೆಲವರನ್ನು ಕಚೇರಿಗೆ ಹೋಗುವ ಮಾರ್ಗ ಮಧ್ಯದಲ್ಲೇ ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡರು.

National Herald Case: ರಾಹುಲ್‌ ಗಾಂಧಿಗೆ ಇ.ಡಿ. ವಿಚಾರಣೆ: ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

‘ಇನ್‌ಕ್ವಿಲಾಬ್‌ ಜಿಂದಾಬಾದ್‌’, ‘ರಾಹುಲ್‌ ಗಾಂಧಿ ಸಂಘರ್ಷ ನಡೆಸಿ, ನಿಮ್ಮ ಜತೆ ನಾವಿದ್ದೇವೆ’, ‘ಸತ್ಯಮೇವ ಜಯತೆ’ ಎಂಬ ಘೋಷಣೆಗಳನ್ನು ಕೂಗಿದ್ದೇ ಅಲ್ಲದೆ, ಅವರ ಚಿತ್ರ ಇರುವ ಭಿತ್ತಿಚಿತ್ರ ಹಿಡಿದಿದ್ದ ಕಾಂಗ್ರೆಸ್ಸಿಗರು ಪ್ರತಿಭಟನೆಯ ಕಿಚ್ಚು ಹಚ್ಚಿದರು. ‘ಸಿಬಿಐ ಹಾಗೂ ಇಡಿ ಪಂಜರದ ಗಿಳಿ’ ಎಂದು ಬರೆದು ಗಿಳಿಯು ಪಂಜರದ ಒಳಗೆ ಕೂತಿದ್ದ ಭಿತ್ತಿಚಿತ್ರ ಗಮನ ಸೆಳೆಯಿತು.

ಈ ನಡುವೆ, ರಾಹುಲ್‌ ಜತೆಗೇ ಕಾಗ್ರೆಸ್ಸಿಗರು ಇ.ಡಿ. ಕಚೇರಿವರೆಗೆ ಸಾಗಿ ಬಂದು ಇ.ಡಿ. ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು. ಆದರೆ ಕಚೇರಿಯತ್ತ ಬರಲು ಯತ್ನಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌, ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್‌ ಹಾಗೂ ಅಧೀರ್‌ ರಂಜನ್‌ ಚೌಧರಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಈ ನಡುವೆ, ಈಗಷ್ಟೇ ಕೋವಿಡ್‌ನಿಂದ ಗುಣಮುಖರಾಗಿರುವ ವೇಣುಗೋಪಾಲ್‌ ಅವರ ಅಂಗಿಯು ಪ್ರತಿಭಟನೆ ವೇಳೆ ಹರಿದಿದ್ದು ಕಂಡುಬಂತು. ಪೊಲೀಸರು ವೇಣುಗೋಪಾಲ್‌ ಮೇಲೆ ದೌರ್ಜನ್ಯ ನಡೆಸಿದರು ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

ಈ ನಡುವೆ, ಸಾವಿರಾರು ಕಾರ್ಯಕರ್ತರು ಜಮಾಯಿಸಿದ ಕಾರಣ ರಾಹುಲ್‌ ಗಾಂಧಿ ಅವರು ನೇರವಾಗಿ ರಸ್ತೆ ಮೂಲಕ ಇ.ಡಿ. ಕಚೇರಿಗೆ ಬರಲಾಗಲಿಲ್ಲ. ಹೀಗಾಗಿ ಸುತ್ತಿ ಬಳಸಿ ಕಾರಿನಲ್ಲಿ ಇ.ಡಿ. ಕಚೇರಿಗೆ ಬಂದರು. ಜನಸಂದಣಿ ಕಾರಣ ಕೂಡಲೇ ಕಾರಿನಿಂದ ಇಳಿಯಲು ಆಗದೇ ಕೆಲ ಕಾಲ ಕಾರಲ್ಲೇ ಅವರು ಕೂರಬೇಕಾಯಿತು. ಇದಾದ ಬಳಿಕ ಠಾಣೆಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಅವರು ವೇಣುಗೋಪಾಲ್‌ ಹಾಗೂ ಇತರರನ್ನು ಭೇಟಿ ಮಾಡಿದರು.

ಪಠ್ಯ ಪರಿಷ್ಕರಣೆಗೆ ರಾಹುಲ್‌ ಗಾಂಧಿ ವಿರೋಧ: ಕನ್ನಡದಲ್ಲೇ ಸರಣಿ ಟ್ವೀಟ್‌!

ದೇಶದ ವಿವಿಧೆಡೆ ಕೂಡ ಪ್ರತಿಭಟನೆ: ಏತನ್ಮಧ್ಯೆ ಕಾಂಗ್ರೆಸ್‌ ಮುಖಂಡರು ದೇಶದ ವಿವಿಧ ರಾಜ್ಯಗಳಲ್ಲಿ ಇರುವ 25 ಇ.ಡಿ. ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios