Rahul Gandhi In Parliament : ರಾಹುಲ್ ಗಾಂಧಿ ಮಾತಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ಜೈಶಂಕರ್!
ಚೀನಾ ಹಾಗೂ ಪಾಕಿಸ್ತಾನವನ್ನು ಸರ್ಕಾರ ಒಟ್ಟಿಗೆ ತಂದಿದೆ ಎಂದ ರಾಹುಲ್ ಗಾಂಧಿ
ಜಮ್ಮು ಕಾಶ್ಮೀರದಲ್ಲಿ ಸರ್ಕಾರದಿಂದ ದೊಡ್ಡ ಪ್ರಮಾದ
ರಾಹುಲ್ ಆರೋಪಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಕಿಡಿ
ನವದೆಹಲಿ (ಫೆ.2): ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಬುಧವಾರ ಸಂಸತ್ ನಲ್ಲಿ ಆಡಿರುವ ಮಾತುಗಳು ಸಾಕಷ್ಟು ಟೀಕೆಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಾಕಿಸ್ತಾನ ಹಾಗೂ ಚೀನಾವನ್ನು ಒಟ್ಟಿಗೆ ತಂದಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರದ ರಣತಂತ್ರದಲ್ಲಿ ಸರ್ಕಾರ ದೊಡ್ಡ ಪ್ರಮಾದ ಮಾಡಿದೆ ಎಂದು ಆರೋಪ ಮಾಡಿದರು. ರಾಹುಲ್ ಗಾಂಧಿ ಈ ಆರೋಪ ಮಾಡುತ್ತಿದ್ದಂತೆಯೇ ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಚಿವ ಡಾ.ಎಸ್.ಜೈಶಂಕರ್, ಕಾಂಗ್ರೆಸ್ ಕಾಲದಲ್ಲಿ ಆದ ತಪ್ಪುಗಳನ್ನು ಟ್ವಿಟರ್ ನಲ್ಲಿ ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಎದುರೇಟು ನೀಡಿದರು.
ಬಿಜೆಪಿ-ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಭಾಷಣದಲ್ಲಿ, ರಾಹುಲ್ ಗಾಂಧಿ ದೇಶವು ಎಲ್ಲಾ ಕಡೆಗಳಲ್ಲಿ ಶತ್ರುಗಳಿಂದ ಸುತ್ತುವರಿದಿದೆ ಮತ್ತು ತನ್ನ ಪ್ರದೇಶದಲ್ಲಿ ಪ್ರತ್ಯೇಕವಾಗಿದೆ ಎಂದು ಹೇಳಿದರು. "ರಾಷ್ಟ್ರವು ಹೊರಗಿನಿಂದ ಮತ್ತು ಒಳಗಿನಿಂದ ಅಪಾಯದಲ್ಲಿದೆ. ಮತ್ತು ನಾನು ಅದನ್ನು ಇಷ್ಟಪಡುವುದಿಲ್ಲ. ಇದು ನನ್ನ ಚಿಂತೆಗೆ ಕಾರಣವಾಗಿದೆ" ಎಂದು ಹೇಳಿದರು.
"ಚೀನಾ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಇಡುವುದು ಭಾರತದ ಕಾರ್ಯತಂತ್ರದ ಗುರಿಯಾಗಬೇಕಿತ್ತು. ಆದರೆ ನೀವು ಮಾಡಿರುವುದು ಅವರನ್ನು ಒಟ್ಟಿಗೆ ಸೇರಿಸುವುದು. ಪ್ರಸ್ತುತ ನಾವು ಎದುರಿಸುತ್ತಿರುವ ಸನ್ನಿವೇಶವನ್ನು ನೀವು ಉಡಾಫೆ ಮಾಡಬೇಡಿ. ಭವಿಷ್ಯದ ದಿನಗಳಲ್ಲಿ ಇದು ಭಾರತಕ್ಕೆ ಗಂಭೀರ ಅಪಾಯ ತಂದೊಡ್ಡಲಿದೆ ಎಂದರು. ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರಾದರೂ ಇದು ಏನು ಎನ್ನುವುದರ ಬಗ್ಗೆ ಮಾಹಿತಿ ನೀಡಲಿಲ್ಲ. ರಾಜ್ಯಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪ ಮಾಡಿರುವ ಸಾಧ್ಯತೆ ಇದೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿದ ಉದಾಹರಣೆಗಳನ್ನು ಪಟ್ಟಿ ಮಾಡಿದ್ದಾರೆ. "ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದದ್ದು ಇದೇ ಸರ್ಕಾರ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದ್ದಾರೆ. ಬಹುಶಃ ಅವರಿಗೆ ತಿಳಿಯದೇ ಇದ್ದಲ್ಲಿ ಕೆಲವು ಇತಿಹಾಸದ ಪಾಠಗಳು ಕ್ರಮಬದ್ಧವಾಗಿ ಹೇಳುತ್ತೇನೆ" ಎಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಮಾಡಿದ ನಾಲ್ಕು ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
1963ರಲ್ಲಿ ಪಾಕಿಸ್ತಾನವು ಶಾಕ್ಸ್ಗಾಮ್ ಕಣಿವೆಯನ್ನು ಅಕ್ರಮವಾಗಿ ಚೀನಾಕ್ಕೆ ಹಸ್ತಾಂತರಿಸಿದರೆ, 1970 ರ ದಶಕದಲ್ಲಿ ಚೀನಾ ಪಿಒಕೆ ಮೂಲಕ ಕಾರಕೋರಂ ಹೆದ್ದಾರಿಯನ್ನು ನಿರ್ಮಿಸಿತು. 1970 ರ ದಶಕದಿಂದ, ಉಭಯ ದೇಶಗಳು ಸಹ ನಿಕಟ ಪರಮಾಣು ಸಹಯೋಗವನ್ನು ಹೊಂದಿದ್ದವು. ಅದರೊಂದಿಗೆ 2013 ರಲ್ಲಿ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾರಂಭವಾಯಿತು ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದ ತಪ್ಪುಗಳನ್ನು ಪಟ್ಟಿ ಮಾಡಿದ್ದಾರೆ.
Rahul Gandhi ನ್ಯಾಯಾಂಗ, ಆಯೋಗ, ಪೆಗಾಸಸ್ ಬಳಸಿ ರಾಜ್ಯಗಳ ಧ್ವನಿ ಹತ್ತಿಕ್ಕುತ್ತಿದೆ ಸರ್ಕಾರ, ರಾಹುಲ್ ಮಾತಿಗೆ ಖಂಡನೆ!
ಈ ವರ್ಷ ಗಣರಾಜ್ಯೋತ್ಸಕ್ಕೆ ಅತಿಥಿಗಳು ಇರಲಿಲ್ಲ: ಇದೇ ವೇಳೆ ಈ ವರ್ಷ ಗಣರಾಜ್ಯೋತ್ಸವ ಸಂಭ್ರಮದಲ್ಲಿ ವಿದೇಶದ ಅತಿಥಿಗಳು ಇರದ ಬಗ್ಗೆ ಪ್ರಸ್ತಾಪ ಮಾಡಿದ ರಾಹುಲ್ ಗಾಂಧಿ, "ನಾವು ಈ ಪ್ರದೇಶದಲ್ಲಿ ಸಂಪೂರ್ಣವಾಗಿ ಸುತ್ತುವರಿದಿದ್ದು ಮಾತ್ರವಲ್ಲದೆ ಏಕಾಂಗಿಯಾಗಿದ್ದೇವೆ. ನೇಪಾಳ, ಅಫ್ಘಾನಿಸ್ತಾ ಹಾಗೂ ಚೀನಾದಿಂದ ನಾವು ಸುತ್ತುವರಿದಿದ್ದೇವೆ ಎಂದರು. ಇದು ಒಟ್ಟಾರೆ ಭಾರತದ ಜನತೆಯ ಮೇಲೆ ಮಾಡಿರುವ ಅತಿದೊಡ್ಡ ಅಪರಾಧ ಎಂದು ರಾಹುಲ್ ಗಾಂಧಿ ಹೇಳಿದರು.
"ಚೀನೀಯರು ಮತ್ತು ಪಾಕಿಸ್ತಾನಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಖರೀದಿಸುತ್ತಿರುವ ಶಸ್ತ್ರಾಸ್ತ್ರಗಳನ್ನು ನೋಡಿ, ಅವರು ಮಾತನಾಡುವ ರೀತಿಯನ್ನು ನೋಡಿ. ನಾವು ಒಂದು ದೊಡ್ಡ ಪ್ರಮಾದವನ್ನು ಮಾಡಿದ್ದೇವೆ' ಎಂದರು.
Report on Pegasus :ಮತ್ತೆ ಭುಗಿಲೆದ್ದ ಪೆಗಾಸಸ್ ವಿವಾದ!
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಜೈಶಂಕರ್, ಭಾರತದಲ್ಲಿ ಇದ್ದ ಎಲ್ಲಾ ವ್ಯಕ್ತಿಗಳಿಗೂ ಕೊರೋನಾ ಕಾಲದಲ್ಲಿ ನಾವು ವಿದೇಶದ ಗಣ್ಯರನ್ನು ಆಹ್ವಾನ ಮಾಡಿಲ್ಲ ಎನ್ನುವುದು ತಿಳಿದಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದ ಸಮಯವನ್ನು ಟೀಕೆ ಮಾಡಿದರು. ಏಷ್ಯಾದ ಐದು ರಾಷ್ಟ್ರಗಳ ಅಧ್ಯಕ್ಷರು ಜನವರಿ 27 ರಂದು ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದರು. ಬಹುಶಃ ರಾಹುಲ್ ಗಾಂಧಿ ಇದನ್ನು ತಪ್ಪಿಸಿಕೊಂಡಿದ್ದಾರೆಯೇ ಎಂದು ಹೇಳುವ ಮೂಲಕ ಅವರ ಕಾಲೆಳೆದಿದ್ದಾರೆ.