Election Plan 2024ರ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊಸ ಸಮಿತಿ, ಪ್ರಶಾಂತ್ ಸೇರ್ಪಡೆಗೆ ಅಪಸ್ವರ!
- ‘ಉನ್ನತಾಧಿಕಾರ ಕಾರ್ಯಪಡೆ-2024’ ರಚನೆ ಘೋಷಣೆ
- ಮೇ 13ರಿಂದ ಉದಯ್ಪುರದಲ್ಲಿ 3 ದಿನಗಳ ಚಿಂತನ ಶಿಬಿರ
- ಚುನಾವಣಾ ತಂತ್ರಗಾರಗೆ ಮುಕ್ತ ಹಸ್ತಕ್ಕೆ ಹಲವರ ವಿರೋಧ
ನವದೆಹಲಿ(ಏ.26): ಸತತ 2 ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಹಲವು ರಾಜ್ಯಗಳಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡ ಕಾಂಗ್ರೆಸ್, ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಎದುರಾಗಬಹುದಾದ ರಾಜಕೀಯ ಸವಾಲುಗಳನ್ನು ಮೆಟ್ಟಿನಿಲ್ಲಲು ‘ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024’ ರಚಿಸಿದೆ. ಜೊತೆಗೆ ದೇಶದ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಮೇ 13ರಿಂದ ರಾಜಸ್ಥಾನದ ಉದಯ್ಪುರದಲ್ಲಿ 3 ದಿನಗಳ ಚಿಂತನ ಶಿಬಿರ ಆಯೋಜನೆಗೂ ನಿರ್ಧರಿಸಿದೆ. ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಆಹ್ವಾನಿತ ಸದಸ್ಯರು ಭಾಗಿಯಾಗಲಿದ್ದಾರೆ.
ವಿಶೇಷವೆಂದರೆ, 2024ರ ಚುನಾವಣೆ ಗೆಲ್ಲುವ ರಣತಂತ್ರಗಳ ಕುರಿತು, ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಒಳಗೊಂಡ ಪಕ್ಷದ ಹಿರಿಯ ನಾಯಕರ ತಂಡಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು. ಮತ್ತೊಂದೆಡೆ ಇಂಥದ್ದೇ ವಿಷಯದ ಕುರಿತು ವರದಿ ಸಲ್ಲಿಸಲು ಸ್ವತಃ ಸೋನಿಯಾ ಕೂಡಾ 8 ಜನರ ಸಮಿತಿ ರಚಿಸಿದ್ದು, ಅದು ಏ.21ರಂದು ತನ್ನ ವರದಿ ಸಲ್ಲಿಸಿತ್ತು.
ಹುಸೇನ್ ಪೇಂಟಿಂಗ್ನ್ನು 2 ಕೋಟಿ ನೀಡಿ ಖರೀದಿಸುವಂತೆ ಪ್ರಿಯಾಂಕಾ ಗಾಂಧಿ ಒತ್ತಡ ಹೇರಿದ್ದರು: ರಾಣಾ ಕಪೂರ್
ಈ ವರದಿಗಳ ಬಗ್ಗೆ ಚರ್ಚಿಸಲು ಸೋನಿಯಾ ನೇತೃತ್ವದಲ್ಲಿ ಮಂಗಳವಾರ ಪಕ್ಷದ ಹಿರಿಯ ನಾಯಕರು ಇಲ್ಲಿ ಸಭೆ ಸೇರಿದ್ದರು. ಅದರಲ್ಲಿ ಎರಡೂ ವರದಿಗಳ ಬಗ್ಗೆ ಚರ್ಚಿಸಿದ ಬಳಿಕ, ‘ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024’ ರಚನೆ ಮತ್ತು ಉದಯ್ಪುರದಲ್ಲಿ ಚಿಂತನ ಶಿಬಿರ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಸಭೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾ, ಮುಕುಲ್ ವಾಸ್ನಿಕ್, ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ಪಿ.ಚಿದಂಬರಂ ಉಪಸ್ಥಿತರಿದ್ದರು.
ಪ್ರಶಾಂತ್ ಸೇರ್ಪಡೆಗೆ ಕಾಂಗ್ರೆಸ್ನಲ್ಲೇ ಅಪಸ್ವರ
ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅವರಿಗೆ ಪಕ್ಷದ ನೀತಿ ನಿರ್ಧಾರ ಕೈಗೊಳ್ಳಲು ಮುಕ್ತ ಅವಕಾಶ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಅಪಸ್ವರ ವ್ಯಕ್ತವಾಗಿದೆ.
ಪ್ರಶಾಂತ್ ಸೇರ್ಪಡೆ ಬಗ್ಗೆ ಮಂಗಳವಾರ ಸೋನಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಈ ವೇಳೆ ಸತತ ಸೋಲಿನ ಹಿನ್ನೆಲೆಯಲ್ಲಿ, ಪಕ್ಷಕ್ಕೆ ಮತ್ತೆ ಜೀವ ತುಂಬಲು ಪ್ರಶಾಂತ್ ಕಿಶೋರ್ ಸೇರ್ಪಡೆ ಅಗತ್ಯ ಮತ್ತು ಅವರಿಗೆ ಮುಕ್ತ ಅವಕಾಶ ನೀಡುವ ಬಗ್ಗೆ ಪ್ರಿಯಾಂಕಾ ವಾದ್ರಾ ಮತ್ತು ಅಂಬಿಕಾ ಸೋನಿ ಒಲವು ವ್ಯಕ್ತಪಡಿಸಿದರು ಎನ್ನಲಾಗಿದೆ.
ರಾಜಸ್ಥಾನ ಕಾಂಗ್ರೆಸ್ನಲ್ಲಿ ತಳಮಳ, ರಾಜೀನಾಮೆ ಸೋನಿಯಾ ಗಾಂಧಿಗೆ ಸಲ್ಲಿಸಿದ್ದೇನೆ ಎಂದ ಸಿಎಂ ಗೆಹ್ಲೋಟ್!
ಆದರೆ ಪ್ರಶಾಂತ್ ಕಿಶೋರ್ ಈಗಾಗಲೇ ಬಂಗಾಳದಲ್ಲಿ ಮಮತಾ ಪರ, ತೆಲಂಗಾಣದಲ್ಲಿ ಟಿಆರ್ಎಸ್ ಪರ, ಆಂಧ್ರದಲ್ಲಿ ಜಗನ್ ಪರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಥವರ ಕೈಗೆ ಕಾಂಗ್ರೆಸ್ ಸಂಘಟನೆಯಲ್ಲೇ ಬದಲಾವಣೆ ಮಾಡುವ ಅವಕಾಶ ನೀಡಿದರೆ ಅದು ಪ್ರಮಾದವಾಗಬಹುದು ಎಂಬ ಆತಂಕವನ್ನು ವೇಣುಗೋಪಾಲ್, ಜೈರಾಂ ರಮೇರ್ಶ, ಸುರ್ಜೇವಾಲಾ, ದಿಗ್ವಿಜಯ್ ಸಿಂಗ್, ಮುಕುಲ್ ವಾಸ್ನಿಕ್ ಮೊದಲಾದವರು ವ್ಯಕ್ತಪಡಿಸಿದರು ಎನ್ನಲಾಗಿದೆ. ಹೀಗಾಗಿ ಮಂಗಳವಾರದ ಸಭೆಯಲ್ಲಿ ಪ್ರಶಾಂತ್ ಸೇರ್ಪಡೆ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗಲಿಲ್ಲ ಎನ್ನಲಾಗಿದೆ.