ಗಡಿ ಹಿಂಸೆ ಬಗ್ಗೆ ಅಮಿತ್ ಶಾಗೆ ದೂರು: ಮಹಾ ಡಿಸಿಎಂ ಫಡ್ನವೀಸ್
ಗಡಿಯಲ್ಲಿನ ಸ್ಥಿತಿ ಬಗ್ಗೆ ಅಮಿತ್ ಶಾ ಅವರಿಗೆ ಮಾಹಿತಿ ನೀಡಲಾಗುವುದು. ಇನ್ನು ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸಿಗೆ ‘ಜೈ ಮಹಾರಾಷ್ಟ್ರ’ ಎಂದು ಬರೆದಿದ್ದು ಕ್ರಿಯೆಗೆ ಪ್ರತಿಕ್ರಿಯೆ ಮಾತ್ರ. ಆದರೂ ಮರಾಠಿಗರು ಈ ರೀತಿ ಶಾಂತವಾಗಿರಬೇಕು: ದೇವೇಂದ್ರ ಫಡ್ನವೀಸ್
ಮುಂಬೈ(ಡಿ.08): ಮಹಾರಾಷ್ಟ್ರದ ವಾಹನಗಳಿಗೆ ಬೆಳಗಾವಿ ಗಡಿಯಲ್ಲಿ ಕನ್ನಡಪರ ಸಂಘಟನೆಗಳು ಕಲ್ಲು ತೂರಿ ಹಿಂಸಾಚಾರ ನಡೆಸಿದ ಘಟನೆ ಬಗ್ಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರಲಾಗುವುದು ಎಂದೂ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಸ್ವತಃ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕರೆ ಮಾಡಿದ್ದ ಫಡ್ನವೀಸ್, ‘ಇಂಥ ಘಟನೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಗಡಿ ವಿವಾದ ಭುಗಿಲೇಳಬಾರದು ಎನ್ನುವ ಕಾರಣಕ್ಕೆ ನಾವು ಸಾಕಷ್ಟು ತಾಳ್ಮೆ ವಹಿಸಿದ್ದೇವೆ. ಆದರೂ ಇಂಥ ದಾಳಿ ನಡೆದಿದೆ. ನೀವು ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಳಂಕ ತೊಳೆದುಕೊಳ್ಳಲು ಗಡಿ ವಿವಾದ ಸೃಷ್ಟಿ: ಡಿ.ಕೆ.ಶಿವಕುಮಾರ್
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗಡಿಯಲ್ಲಿನ ಸ್ಥಿತಿ ಬಗ್ಗೆ ಅಮಿತ್ ಶಾ ಅವರಿಗೆ ಮಾಹಿತಿ ನೀಡಲಾಗುವುದು. ಇನ್ನು ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸಿಗೆ ‘ಜೈ ಮಹಾರಾಷ್ಟ್ರ’ ಎಂದು ಬರೆದಿದ್ದು ಕ್ರಿಯೆಗೆ ಪ್ರತಿಕ್ರಿಯೆ ಮಾತ್ರ. ಆದರೂ ಮರಾಠಿಗರು ಈ ರೀತಿ ಶಾಂತವಾಗಿರಬೇಕು. ನಿಜಕ್ಕೆ ಹೇಳಬೇಕು ಎಂದರೆ ನಾವು ಗಡಿ ಕುರಿತ ಸಚಿವರ ಸಮಿತಿ ರಚಿಸಿದ ನಂತರ ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಹೇಳಿಕೆಯು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು’ ಎಂದಿದ್ದಾರೆ.