ಪಿಎಫ್ಐ ಸಂಘಟನೆಯೊಂದಿಗೆ ಬಜರಂಗದಳದ ಹೋಲಿಕೆ: ಖರ್ಗೆಗೆ ಕೋರ್ಟ್ ನೋಟೀಸ್
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಖುಷಿಯಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಪಂಜಾಬ್ ಕೋರ್ಟ್ 100 ಕೋಟಿ ಮೊತ್ತದ ಮಾನನಷ್ಟ ಕೇಸ್ಗೆ ಸಂಬಂಧಿಸಿದಂತೆ ನೋಟೀಸ್ ಜಾರಿ ಮಾಡಿದೆ.
ನವದೆಹಲಿ: ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವನ್ನು ವಿಶ್ವ ಹಿಂದೂ ಪರಿಷತ್ನ ಯುವ ಘಟಕವಾದ ಬಜರಂಗದಳದೊಂದಿಗೆ ಕಾಂಗ್ರೆಸ್ ನಾಯಕರು ಹೋಲಿಸಿದ್ದಕ್ಕೆ ಈಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ 100 ಕೋಟಿ ಮೊತ್ತದ ಮಾನಹಾನಿ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಂಜಾಬ್ ಕೋರ್ಟ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟೀಸ್ ನೀಡಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಾಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ಬ್ಯಾನ್ ಮಾಡುವುದಾಗಿ ಹೇಳಿದ್ದಲ್ಲದೇ ಬಜರಂಗದಳವನ್ನು ಕಾಂಗ್ರೆಸ್ ನಾಯಕರು ನಿಷೇಧಿತ ಪಿಎಫ್ಐ ಸಂಘಟನೆಗೆ ಹೋಲಿಕೆ ಮಾಡಿದ್ದರು.
'ಬಜರಂಗದಳ ಹಿಂದೂಸ್ತಾನ್' (Bajrang Dal Hindustan) ಎಂಬ ಸಂಘಟನೆಯ ಅಧ್ಯಕ್ಷ ಹಿತೇಶ್ ಭಾರದ್ವಾಜ್ (Hitesh Bhardwaj) ಅವರ ದೂರಿನ ನಂತರ ಪಂಜಾಬ್ನ ಸಂಗ್ರೂರ್ ಜಿಲ್ಲಾ ನ್ಯಾಯಾಲಯವು ಕಾಂಗ್ರೆಸ್ ಅಧ್ಯಕ್ಷರಿಗೆ ಸಮನ್ಸ್ ಜಾರಿ ನೀಡಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಸಿಮಿ ಮತ್ತು ಅಲ್-ಖೈದಾದಂತಹ ದೇಶ ವಿರೋಧಿ ಸಂಘಟನೆಗಳೊಂದಿಗೆ ಹೋಲಿಕೆ ಮಾಡಿದೆ ಎಂದು ಅರ್ಜಿದಾರರು ದೂರಿದ್ದಾರೆ. ಬಜರಂಗದಳ ಹೆಸರು ಹೇಳುತ್ತಾ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇಂತಹ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸಂಘಟನೆಗಳನ್ನು ನಿಷೇಧಿಸುವುದಾಗಿ ಭರವಸೆ ನೀಡಿತ್ತು.
ಕಾಂಗ್ರೆಸ್ ವಿರುದ್ಧ 20ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣ
ಅಲ್ಲದೇ ಕಾಂಗ್ರೆಸ್ನ ಈ ಬಜರಂಗದಳ ನಿಷೇಧ ವಿಚಾರವನ್ನೇ ದೊಡ್ಡ ಅಸ್ತ್ರವಾಗಿ ಬಳಸಿಕೊಂಡ ಆಗಿನ ಆಡಳಿತರೂಢ ಬಿಜೆಪಿ ಕಾಂಗ್ರೆಸ್ ವಿರುದ್ಧ ಅಬ್ಬರದ ಪ್ರಚಾರ ಮಾಡಿತ್ತು, ಬೆಂಗಳೂರಿನಲ್ಲಿ ನಡೆದ ರೋಡ್ ಶೋಗಳಲ್ಲಿ (Road show) ರೋಡ್ ಶೋ ವಾಹನದ ಮುಂದೆ ಭಜರಂಗಿಯ ದೊಡ್ಡ ಪ್ರತಿಮೆಯನ್ನು ಇರಿಸಿ ಬಿಜೆಪಿ ನಾಯಕರು ಕಾಂಗ್ರೆಸ್ಗೆ ಟಾಂಗ್ ನೀಡುವ ಪ್ರಯತ್ನ ಮಾಡಿದ್ದರು. ಜೊತೆಗೆ ಆಂಜನೇಯನ (Bajarangi) ಮುಖವಾಡ ಧರಿಸಿ ರೋಡ್ಶೋದಲ್ಲಿ ಅನೇಕರು ಭಾಗಿಯಾಗಿದ್ದರು.
ಇತ್ತ ಚುನಾವಣೆ ವೇಳೆ, ಭಜರಂಗಿಗೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ನಾಯಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡರೆ ಅತ್ತ ಸಿಎಂ ಆಗಿದ್ದ ಬೊಮ್ಮಾಯಿ ರಾಮನಿಗೂ ಆಂಜನೇಯನಿಗೂ ಇರುವ ಸಂಬಂಧವೇ ಆಂಜನೇಯನಿಗೂ ಭಜರಂಗಿಗೂ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಬಂದ ನರೇಂದ್ರ ಮೋದಿ ಸೇರಿದ್ದ ಜನಸ್ತೋಮಕ್ಕೆ ಜೈ ಭಜರಂಗ ಬಲಿ ಘೋಷಣೆ ಕೂಗಿಸುವ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡುವ ಪ್ರಯತ್ನ ಮಾಡಿದ್ದರು.
ಸ್ಪಷ್ಟ ಬಹುಮತದತ್ತ ಕಾಂಗ್ರೆಸ್: ಭಜರಂಗ್ ಬಲಿ ಘೋಷಣೆ ಮೂಲಕ ಬಿಜೆಪಿಗೆ ಟಾಂಗ್
ಆದರೆ ಈ ಹೋರಾಟ ಬಿಜೆಪಿ ಪಾಲಿಗೆ ಫಲ ನೀಡದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಕರ್ನಾಟಕದಲ್ಲಿ (Karnataka) ಭಜರಂಗದಳವನ್ನು ಬ್ಯಾನ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷರಿಗೆ ಈ ವಿಚಾರವಾಗಿ ಕೋರ್ಟ್ ನೋಟೀಸ್ ನೀಡಿದೆ. ಕಾಂಗ್ರೆಸ್ನ ಬಜರಂಗ ದಳ ಬ್ಯಾನ್ ನಿರ್ಧಾರಕ್ಕೆ ಕೆಲ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು.
ಬಿಜೆಪಿಯಿಂದ ಮತಕ್ಕಷ್ಟೆ ಬಜರಂಗಿ ಬಳಕೆ: ಮಲ್ಲಿಕಾರ್ಜುನ ಖರ್ಗೆ