ಜೈ ಬಜರಂಗಬಲಿ ತೋಡದೋ ಭ್ರಷ್ಟಾಚಾರ ಕೇ ನಲ್ಲಿ’ ಎಂಬ ಘೋಷಣೆಯೊಂದಿಗೆ ತಮ್ಮ ಪ್ರಚಾರ ಭಾಷಣ ಆರಂಭಿಸಿದ ಖರ್ಗೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟರು.

ಹುಬ್ಬಳ್ಳಿ(ಮೇ.07): ಬಿಜೆಪಿಯವರು ಬಜರಂಗ ಬಲಿ ಹೆಸರನ್ನು ಕೇವಲ ತಮ್ಮ ಮತ ಗಳಿಕೆಗೆ ಮಾತ್ರ ಬಳಸುತ್ತಾರೆ. ಆದರೆ, ನಾವು ಭ್ರಷ್ಟಾಚಾರ ತೊಲಗಿಸಲು ಈ ಘೋಷಣೆ ಕೂಗುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜೊತೆಗೆ, ‘ಜೈ ಬಜರಂಗ ಬಲಿ, ತೋಡದೋ ಭ್ರಷ್ಟಾಚಾರ ಕೇ ನಲ್ಲಿ’ (ಬಜರಂಗ ಬಲಿಗೆ ಜಯವಾಗಲಿ, ಭ್ರಷ್ಟಾಚಾರದ ನಳವನ್ನು ಕಿತ್ತು ಹಾಕಿ)’ ಎಂಬ ಘೋಷಣೆ ಕೂಗಿದ್ದಾರೆ. ಆ ಮೂಲಕ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಬಜರಂಗ ದಳ ನಿಷೇಧ ಕುರಿತ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಶನಿವಾರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಬೃಹತ್‌ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ‘ಜೈ ಬಜರಂಗಬಲಿ ತೋಡದೋ ಭ್ರಷ್ಟಾಚಾರ ಕೇ ನಲ್ಲಿ’ ಎಂಬ ಘೋಷಣೆಯೊಂದಿಗೆ ತಮ್ಮ ಪ್ರಚಾರ ಭಾಷಣ ಆರಂಭಿಸಿದ ಖರ್ಗೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟರು. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಚಕಾರ ಎತ್ತುತ್ತಿಲ್ಲ. ‘ನ ಖಾವುಂಗಾ, ನ ಖಾನೆ ದೂಂಗಾ’ ಎನ್ನುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಅವರ ಪಕ್ಕದಲ್ಲೇ ಇದ್ದವರು ಭಾರೀ ಭಾರೀ ತಿನ್ನುತ್ತಿದ್ದಾರೆ. ಅವರ ಪರವಾಗಿ ಇದೀಗ ಪ್ರಚಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಇರುವುದು 40% ಸರ್ಕಾರ. ಈ ಬಗ್ಗೆ ಗುತ್ತಿಗೆದಾರರೇ ದೂರು ನೀಡಿದರೂ ಮೋದಿಯವರು ಕ್ರಮ ಕೈಗೊಳ್ಳಲಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದರೂ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.

ವಿಧಾನಸಭೆ ಪ್ರಚಾರ ಅಖಾಡಕ್ಕೆ ಕಾಲಿಟ್ಟ ಸೋನಿಯಾಗಾಂಧಿ: ಬಿಜೆಪಿ ವಿರುದ್ಧ ವಾಗ್ದಾಳಿ!

ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಕೇಂದ್ರ ಸರ್ಕಾರದಲ್ಲೇ 30 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಾಗಿವೆ. 25-30 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದಲ್ಲೂ 2.5 ಲಕ್ಷ ಹುದ್ದೆಗಳು ಖಾಲಿಯಿವೆ. ಈ ಬಗ್ಗೆ ಮೋದಿ ಚಕಾರ ಎತ್ತುತ್ತಿಲ್ಲ. ಬಡವರಿಗೆ ಉದ್ಯೋಗ ನೀಡಿದರೆ ಆರ್ಥಿಕವಂತರಾಗುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿರಬಹುದು ಎಂದು ವ್ಯಂಗ್ಯವಾಡಿದರು.