* ಹಿಂದೆ ಕಲ್ಲಿ​ದ್ದಲು ಖರೀ​ದಿಸಿ ಎಂದರೆ ಕೇಳ​ಲಿ​ಲ್ಲ* ಈಗ ಕೇಂದ್ರವನ್ನು ದೂಷಿಸುವುದು ಸರಿಯಲ್ಲ* ಕಲ್ಲಿದ್ದಲು ಕೊರತೆಗೆ ರಾಜ್ಯಗಳೇ ಕಾರಣ* ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ

ನವದೆಹಲಿ(ಅ.13): ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ(Coal Crisis) ಸೃಷ್ಟಿಯಾಗಿ ವಿದ್ಯುತ್‌(Elrctricity) ಕ್ಷಾಮದ ಆತಂಕ ಹೆಚ್ಚಾದ ಬೆನ್ನಲ್ಲೇ, ಕೇಂದ್ರ ಸರ್ಕಾ​ರವು ಈ ಸಮ​ಸ್ಯೆಗೆ ರಾಜ್ಯ​ಗಳೇ ಹೊಣೆ ಎಂದು ಮಂಗ​ಳ​ವಾರ ಕಿಡಿ​ಕಾ​ರಿದೆ. ಈ ಮೂಲಕ ಕೇಂದ್ರ​ವನ್ನು ದೂಷಿ​ಸು​ತ್ತಿ​ರುವ ರಾಜ್ಯ​ಗ​ಳಿಗೆ ತಿರು​ಗೇಟು ನೀಡಿ​ದೆ.

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಕಲ್ಲಿ​ದ್ದಲು(Coal) ಹಾಗೂ ವಿದ್ಯುತ್‌ ಬಿಕ್ಕ​ಟ್ಟಿನ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಲ್ಲಿ​ದ್ದಲು ಸಚಿವ ಪ್ರಹ್ಲಾದ ಜೋಶಿ(Pralhad Joshi) ಅವರು ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ‘ಈ ಹಿಂದೆ ಕಲ್ಲಿ​ದ್ದಲು ದಾಸ್ತಾನು ನಮ್ಮ ಬಳಿ ಸಾಕ​ಷ್ಟಿ​ತ್ತು. ಕಳೆದ ಜೂನ್‌​ವ​ರೆ​ಗೂ ಕಲ್ಲಿ​ದ್ದಲು ತೆಗೆ​ದು​ಕೊಳ್ಳಿ ಎಂದು ನಾವು ಹೇಳಿ​ದರೂ ರಾಜ್ಯ​ಗಳು ತಮ್ಮ ದಾಸ್ತಾ​ನನ್ನು ಹೆಚ್ಚಿ​ಸಿ​ಕೊ​ಳ್ಳಲು ನಿರಾ​ಕ​ರಿ​ಸಿ​ದ​ವು. ‘ದ​ಯ​ವಿಟ್ಟು ಕಲ್ಲಿ​ದ್ದಲು ಕಳಿ​ಸ​ಬೇ​ಡಿ’ ಎಂದು ಗೋಗ​ರೆ​ದ​ವು. ಇದೇ ಈಗಿನ ಸಮ​ಸ್ಯೆಗೆ ನಾಂದಿ ಹಾಡಿ​ದೆ’ ಎಂದು ದೂರಿ​ದ​ರು.

‘ಹೀ​ಗಾಗಿ ಕೊರತೆ ನೀಗಿ​ಸಲು ರಾಜ್ಯ​ಗಳು ದಾಸ್ತಾನು ಹೆಚ್ಚಿ​ಸಿ​ಕೊ​ಳ್ಳ​ಬೇಕು. ರಾಜ್ಯ​ಗ​ಳಿಂದ ಬಾಕಿ ಹಣ ಬರು​ವು​ದಿ​ದ್ದರೂ ನಾವು ಪೂರೈಕೆ ಮುಂದು​ವ​ರಿ​ಸಿ​ದ್ದೇ​ವೆ. ದಾಸ್ತಾನು ಹೆಚ್ಚಿ​ಸಿ​ಕೊಂಡರೆ ಸಮಸ್ಯೆ ಇರ​ದು’ ಎಂದ​ರು. ಇದೇ ವೇಳೆ, ‘ವಿದ್ಯುತ್‌ ಕ್ಷಾಮದ ಭೀತಿ ಇಲ್ಲ’ ಎಂದು ಸ್ಪಷ್ಟ​ಪ​ಡಿ​ಸಿದ ಜೋಶಿ(Pralhad Joshi), ‘ಕಲ್ಲಿದ್ದಲು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಸದ್ಯ 22 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನಿದೆ’ ಎಂದ​ರು.

‘ಸೋಮವಾರ 19 ಲಕ್ಷ ಟನ್‌ ಕಲ್ಲಿದ್ದಲು ಪೂರೈಸಲಾಗಿದೆ. ಇದು ಈವ​ರೆ​ಗಿನ ದೇಶೀ ಕಲ್ಲಿ​ದ್ದಲು ಪೂರೈ​ಕೆಯ ಏಕ​ದಿ​ನದ ದಾಖ​ಲೆ. ಪೂರೈಕೆಯನ್ನು ವೇಗವಾಗಿ ಇನ್ನಷ್ಟುಹೆಚ್ಚಿಸಲಾಗುತ್ತದೆ. ಮುಂಗಾರು ಅಂತ್ಯದ ಬಳಿಕ ಕಲ್ಲಿದ್ದಲು ಸರಬರಾಜು ಹೆಚ್ಚಾಗಲಿದೆ. ಅ.21ರ ವೇಳೆಗೆ 20 ಲಕ್ಷ ಟನ್‌ ಕಲ್ಲಿದ್ದಲು ಪೂರೈಸಲು ಯತ್ನಿಸುತ್ತೇವೆ. ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ’ ಎಂದ​ರು.

‘ಮ​ಳೆ​ಯಿಂದಾಗಿ ಕಲ್ಲಿ​ದ್ದಲು ಉತ್ಖ​ನನ ಸಮ​ಸ್ಯೆ​ಗಾ​ಗಿದೆ. ಇದ​ರಿಂದ ಟನ್‌ಗೆ ಅಂತಾ​ರಾ​ಷ್ಟ್ರೀಯ ಕಲ್ಲಿ​ದ್ದಲು ಬೆಲೆ 60 ರು.ನಿಂದ 160 ರು.ಗೆ ಹೆಚ್ಚಿದೆ. ಹೀಗಾಗಿ ಆಮದಿನ ಮೇಲೇ ಅವ​ಲಂಬಿ​ತ​ವಾದ ವಿದ್ಯುತ ಸ್ಥಾವ​ರ​ಗಳು ಕೆಲಸ ಸ್ಥಗಿ​ತ​ಗೊ​ಳಿ​ಸಿ​ವೆ. ಇದು ದೇಶೀ ಕಲ್ಲಿ​ದ್ದ​ಲಿನ ಮೇಲೆ ಒತ್ತಡ ಹೆಚ್ಚಿ​ಸಿ​ದೆ. ಮಳೆ​ಗಾಲ ಮುಗಿ​ಯು​ತ್ತಿ​ದ್ದಂತೆಯೇ ಸಮಸ್ಯೆ ನೀಗ​ಲಿ​ದೆ’ ಎಂದು ಸ್ಪಷ್ಟ​ಪ​ಡಿ​ಸಿ​ದ​ರು.

ಮೂಲ​ಗಳು ಹೇಳೋ​ದೇ​ನು?:

‘ಉಷ್ಣ ವಿದ್ಯುತ್‌ ಸ್ಥಾವರಗಳು ಸಾಕಷ್ಟುಪ್ರಮಾಣದ ಕಲ್ಲಿದ್ದಲನ್ನು ದಾಸ್ತಾನು ಹೊಂದಿರಬೇಕು. ಆದರೆ ಬಹುತೇಕ ಘಟಕಗಳು ತಮ್ಮ ದಾಸ್ತಾನು ಖಾಲಿಯಾಗುತ್ತಾ ಬಂದರೂ ಅದನ್ನು ಮರುಭರ್ತಿ ಮಾಡಿಕೊಳ್ಳಲು ಮುಂದಾಗಲಿಲ್ಲ. ಇನ್ನೂ ಕಲ್ಲಿದ್ದಲು ಇದೆ, ಈಗಲೇ ಏಕೆ ಹಣ ತೆರಬೇಕು ಎಂಬ ಯೋಚನೆಗೆ ಮುಳುಗಿದವು. ಅದೇ ವೇಳೆಗೆ ಉತ್ಪಾದನೆ ಸಮಸ್ಯೆಯಾಯಿತು. ನ.1ರಿಂದ ಕಲ್ಲಿದ್ದಲು ಸ್ಥಾವರಗಳಿಗೆ ಹೆಚ್ಚು ದಾಸ್ತಾನು ಲಭ್ಯವಾಗಲಿದೆ’ ಎಂದು ಮೂಲಗಳು ತಿಳಿಸಿದ್ದು, ಜೋಶಿ ಹೇಳಿ​ಕೆ​ಯನ್ನು ಸಮ​ರ್ಥಿ​ಸಿ​ವೆ.

ಸ​ರ್ಕಾ​ರ​ದಿಂದ ಸೂಚ​ನೆ:

ಈ ನಡುವೆ, ದುರ್ಗಾ ಪೂಜೆಯ ಹೊತ್ತಿಗೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸಲು ಹಾಗೂ ಅ.20ರ ನಂತರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಲು ಸರ್ಕಾರದಿಂದ ತನಗೆ ಸೂಚನೆ ಬಂದಿದೆ ಎಂದು ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಕಂಪನಿ ಕೋಲ್‌ ಇಂಡಿಯಾ ಕೂಡ ಹೇಳಿದೆ.

ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಶೇ.69ರಷ್ಟು ಕಲ್ಲಿದ್ದಲು ಆಧರಿಸಿದ್ದಾಗಿದೆ. ತನ್ನ ಶೇ.80ರಷ್ಟುಪೂರೈಕೆಯನ್ನು ಕೋಲ್‌ ಇಂಡಿಯಾ ವಿದ್ಯುತ್‌ ಸ್ಥಾವರಗಳಿಗೇ ಸಾಗಿಸುತ್ತಿದೆ. ಕಲ್ಲಿದ್ದಲಿನ ಕೊರತೆಯಿಂದಾಗಿ ಈ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಕಡಿತವಾಗಿತ್ತು.

- ದೇಶದಲ್ಲಿ 22 ದಿನಕ್ಕಾಗುವಷ್ಟುಕಲ್ಲಿದ್ದಲು ದಾಸ್ತಾನು

- ಮಳೆ​ಯಿಂದ ಕಲ್ಲಿ​ದ್ದಲು ಉತ್ಖ​ನನ, ಪೂರೈ​ಕೆಗೆ ಸಮ​ಸ್ಯೆ

- ಆದ​ರೂ ಮೊನ್ನೆ ದಾಖಲೆಯ 19 ಲಕ್ಷ ಟನ್‌ ಕಲ್ಲಿದ್ದಲು ಸರಬರಾಜು

- ಅ.21ರ ವೇಳೆಗೆ 2 ಕೋಟಿ ಟನ್‌ ಪೂರೈಸಲು ಪ್ರಯತ್ನ

- ವಿದ್ಯುತ್‌ ಸಮಸ್ಯೆ ಆಗ​ದು: ಕೇಂದ್ರ ಸಚಿವ ಅಭ​ಯ