Tamil Nadu CM Vijay OSD controversy: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತಮ್ಮ ವೈಯಕ್ತಿಕ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ನೇಮಕ ಮಾಡಿದ್ದರು. ವಿಜಯ್ ಅವರ ನಿರ್ಧಾರಕ್ಕೆ ಮೈತ್ರಿಪಕ್ಷಗಳು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  

ಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ವಿಶೇಷ ಕರ್ತವ್ಯದ ಅಧಿಕಾರಿ (OSD) ಹುದ್ದೆಯಿಂದ ತೆಗೆದುಹಾಕಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ವಿಜಯ್ ಅವರು ಎದುರಿಸುತ್ತಿರುವ ಮೊದಲ ಪ್ರಮುಖ ರಾಜಕೀಯ ವಿವಾದ ಇದಾಗಿದೆ.

Add Asianetnews Kannada as a Preferred SourcegooglePreferred

ವಿವಾದದ ಹಿನ್ನೆಲೆ

ಮುಖ್ಯಮಂತ್ರಿ ವಿಜಯ್ ಅವರು ತಮ್ಮ ವೈಯಕ್ತಿಕ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಒಎಸ್‌ಡಿ (OSD) ಆಗಿ ನೇಮಕ ಮಾಡಿ ಮಂಗಳವಾರ ಸರ್ಕಾರಿ ಆದೇಶ ಹೊರಡಿಸಿದ್ದರು. ಒಎಸ್‌ಡಿ ಹುದ್ದೆಯು ಸರ್ಕಾರದ ನಿರ್ದಿಷ್ಟ ಕಾರ್ಯಯೋಜನೆಗಳು ಅಥವಾ ಸೂಕ್ಷ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ತಾತ್ಕಾಲಿಕ ಆಡಳಿತಾತ್ಮಕ ಹುದ್ದೆಯಾಗಿದ್ದು, ಇದಕ್ಕೆ ಸಾರ್ವಜನಿಕರ ತೆರಿಗೆ ಹಣದಿಂದ ಸಂಭಾವನೆ ನೀಡಲಾಗುತ್ತದೆ. ಒಬ್ಬ ಜ್ಯೋತಿಷಿಯನ್ನು ಇಂತಹ ಹುದ್ದೆಗೆ ನೇಮಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಯಿತು.

ಮೈತ್ರಿಪಕ್ಷಗಳಿಂದ ತೀವ್ರ ವಿರೋಧ

ಅಂದಹಾಗೆ ವಿಜಯ್ ಅವರ ನೇತೃತ್ವದ ಟಿವಿಕೆ (TVK) ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೈತ್ರಿಪಕ್ಷಗಳಾದ ಕಾಂಗ್ರೆಸ್, ವಿಸಿಕೆ (VCK) ಮತ್ತು ಎಡಪಕ್ಷಗಳು ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿವೆ.

ಕಾಂಗ್ರೆಸ್: ಸಂಸದ ಶಶಿಕಾಂತ್ ಸೆಂಥಿಲ್ ಅವರು "ಒಬ್ಬ ಜ್ಯೋತಿಷಿಗೆ ಒಎಸ್‌ಡಿ ಹುದ್ದೆಯ ಅಗತ್ಯವೇನಿದೆ?" ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಸಂಸದೆ ಜೋತಿಮಣಿ ಅವರು, ಪೆರಿಯಾರ್ ಅವರನ್ನು ಸೈದ್ಧಾಂತಿಕ ನಾಯಕ ಎಂದು ಕರೆದುಕೊಳ್ಳುವ ಟಿವಿಕೆ ಸರ್ಕಾರವು ಇಂತಹ ನೇಮಕಾತಿ ಮಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ.

ವಿಸಿಕೆ: ವಿಸಿಕೆ ಪ್ರಧಾನ ಕಾರ್ಯದರ್ಶಿ ಡಿ. ರವಿಕುಮಾರ್ ಅವರು ಇದು ಜಾತ್ಯತೀತ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲದ ನಿರ್ಧಾರ ಎಂದಿದ್ದಾರೆ. ಶಾಸಕ ವನ್ನಿ ಅರಸು ಅವರು ಸರ್ಕಾರವು ವೈಜ್ಞಾನಿಕ ಚಿಂತನೆಗೆ ಒತ್ತು ನೀಡಬೇಕೇ ಹೊರತು ಜ್ಯೋತಿಷ್ಯಕ್ಕಲ್ಲ ಎಂದು ಅಸೆಂಬ್ಲಿಯಲ್ಲಿ ಟೀಕಿಸಿದ್ದಾರೆ.

ಎಡಪಕ್ಷಗಳು: ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಅವರು ಸರ್ಕಾರವು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಯನ್ನು ಪ್ರೋತ್ಸಾಹಿಸಬೇಕೇ ಹೊರತು ಮೂಢನಂಬಿಕೆಯನ್ನಲ್ಲ ಎಂದು ತಿಳಿಸಿದ್ದಾರೆ.

ಯಾರು ಈ ರಾಧನ್ ಪಂಡಿತ್?

ರಾಧನ್ ಪಂಡಿತ್ ಕಳೆದ ನಾಲ್ಕು ದಶಕಗಳಿಂದ ವೇದ ಜ್ಯೋತಿಷ್ಯವನ್ನು ಅಭ್ಯಾಸ ಮಾಡುತ್ತಿರುವ ಪ್ರಸಿದ್ಧ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ. ಇವರು ಟಿಬಿಕೆ ಪಕ್ಷದ ವಕ್ತಾರರೂ ಆಗಿದ್ದಾರೆ. ಈ ಹಿಂದೆ ಇವರು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರೊಂದಿಗೂ ಗುರುತಿಸಿಕೊಂಡಿದ್ದರು. ಜಯಲಲಿತಾ ಅವರ ಹೆಸರಿನಲ್ಲಿ ಹೆಚ್ಚುವರಿಯಾಗಿ 'A' ಅಕ್ಷರವನ್ನು ಸೇರಿಸಲು ಇವರೇ ಸಲಹೆ ನೀಡಿದ್ದರು ಎಂದು ಹೇಳಲಾಗುತ್ತದೆ.

ತಪ್ಪು ತಿದ್ದಿಕೊಂಡ ವಿಜಯ್

ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ, ಮೈತ್ರಿಪಕ್ಷಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ಭಾರಿ ವಿರೋಧವನ್ನು ಗಮನಿಸಿದ ಮುಖ್ಯಮಂತ್ರಿ ವಿಜಯ್ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ತಿಳಿಸಿದರು. ಅಂತಿಮವಾಗಿ ಜ್ಯೋತಿಷಿಯನ್ನು ಸರ್ಕಾರಿ ಹುದ್ದೆಯಿಂದ ತೆಗೆದುಹಾಕುವ ಮೂಲಕ ತಮ್ಮ ಮೊದಲ ರಾಜಕೀಯ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದ್ದಾರೆ.