ರಾಜಕೀಯ ದ್ವೇಷದ ತಮಿಳ್ನಾಡಲ್ಲಿ ಸರ್ವಪಕ್ಷ ಸಮಿತಿ ರಚಿಸಿದ ಸ್ಟಾಲಿನ್!
* ರಾಜಕೀಯ ದ್ವೇಷದ ತಮಿಳ್ನಾಡಲ್ಲಿ ಸರ್ವಪಕ್ಷ ಸಮಿತಿ ರಚಿಸಿದ ಸ್ಟಾಲಿನ್
* ಎಲ್ಲ ಪಕ್ಷಗಳ ಸದಸ್ಯರಿರುವ ಸಮಿತಿ ಜತೆ ವಾರಕ್ಕೊಮ್ಮೆ ಸಭೆ
* ಬದಲಾಗುತ್ತಿದೆ ತಮಿಳುನಾಡಿನ ರಾಜಕೀಯ ಚಿತ್ರಣ
ಚೆನ್ನೈ(ಮೇ.24): ಅಧಿಕಾರಕ್ಕೆ ಬಂದಾಗ ವಿರೋಧಿಗಳನ್ನು ಜೈಲಿಗೆ ಕಳುಹಿಸುವ ಹಟ, ಮುಖ್ಯಮಂತ್ರಿ- ವಿಪಕ್ಷ ನಾಯಕರು ಮುಖ ನೋಡದಷ್ಟುವೈರತ್ವಕ್ಕೆ ಸಾಕ್ಷಿಯಾಗಿದ್ದ ತಮಿಳುನಾಡಿನಲ್ಲಿ ಇದೀಗ ಹೊಸ ಬಗೆಯ ರಾಜಕಾರಣವೊಂದು ಆರಂಭವಾಗುತ್ತಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು, ಎಲ್ಲ ರಾಜಕೀಯ ಪಕ್ಷಗಳ ಶಾಸಕರನ್ನು ಒಳಗೊಂಡ 13 ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರತಿವಾರ ಈ ಸಮಿತಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ತಮಿಳುನಾಡಲ್ಲಿ ಕಂಪ್ಲೀಟ್ ಲಾಕ್ಡೌನ್: ದಿನಸಿ, ತರಕಾರಿ ಅಂಗಡಿಯೂ ಬಂದ್
ಡಿಎಂಕೆ- ಅಣ್ಣಾಡಿಎಂಕೆ ದ್ವೇಷದ ರಾಜಕಾರಣವನ್ನು ಕಂಡಿದ್ದ ತಮಿಳುನಾಡಿನ ಜನಕ್ಕೆ ಸ್ಟಾಲಿನ್ರ ಈ ನಡೆ ಅಚ್ಚರಿಗೆ ಕಾರಣವಾಗಿದೆ. ಎಲ್ಲರನ್ನೂ ಒಳಗೊಳ್ಳುವಂತಹ ರಾಜಕಾರಣವನ್ನು ಸ್ಟಾಲಿನ್ ಆರಂಭಿಸಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಯಲಲಿತಾರನ್ನು ಬಂಧಿಸಿದ್ದರು. ಜಯಲಲಿತಾ ಸಿಎಂ ಆದ ಬಳಿಕ ಕರುಣಾನಿಧಿ ಅವರನ್ನು ಜೈಲಿಗಟ್ಟಿದ್ದರು. ಎರಡೂ ಪಕ್ಷಗಳ ನಡುವೆ ಬದ್ಧ ವೈರತ್ವ ಇತ್ತು. ಜಯಲಲಿತಾ ಸಿಎಂ ಆಗಿದ್ದಾಗ ಶಾಸಕರು ಇರಲಿ, ಸಚಿವರ ಜತೆಗೇ ಅವರ ಒಡನಾಟ ಇರಲಿಲ್ಲ. ಇಂತಹ ಹಿನ್ನೆಲೆ ಇರುವ ತಮಿಳುನಾಡಿನಲ್ಲಿ ಎಲ್ಲರ ಅಭಿಪ್ರಾಯ ಕೇಳುವ ಸ್ಟಾಲಿನ್ ಹೊಸ ರಾಜಕಾರಣ ಅಚ್ಚರಿಗೆ ಕಾರಣವಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona