* ದೇಶದಲ್ಲಿ ಭರದಿಂದ ಸಾಗಿದೆ ಲಸಿಕೆ ಅಭಿಯಾನ* ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಬದಲು ಸಿಎಂ ಫೋಟೋ: ಭುಗಿಲೆದ್ದ ವಿವಾದ* ಪ್ರಧಾನಿ ಮೋದಿ ಬದಲು ರಾಜ್ಯ ಸಿಎಂ ಭೂಪೇಶ್ ಭಗೇಲರ ಫೋಟೋ 

ರಾಯ್ಪುರ(ಮೇ.22): ಕೊರೋನಾ ಹಾವಳಿ ನಡುವೆ ಮುಂದುವರೆದ ಲಸಿಕೆ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದೆ. ಆದರೆ ಈ ಲಸಿಕೆ ಅಭಿಯಾನದಲ್ಲಿ ನೀಡಲಾಗುವ ವ್ಯಾಕ್ಸಿನ್ ಸರ್ಟಿಫಿಕೇಟ್‌ ಪ್ರಿಂಟ್‌ ಮಾಡಲಾದ ಪ್ರಧಾನಿ ಮೋದಿ ಫೋಟೋಗೆ ಆರಂಭದಿಂದಲೂ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೀಗ ಈ ವಿವಾದದ ಬೆನ್ನಲ್ಲೇ ಕಾಂಗ್ರೆಸ್‌ ಆಡಳಿತವಿರುವ ಛತ್ತಿಸ್‌ಗಢ ತನ್ನದೇ ಆದ ಲಸಿಕೆ ಪ್ರಮಾಣ ಪತ್ರ ನೀಡಲಾರಂಭಿಸಿದೆ. 18-44 ವಯೋಮಿತಿಯವರಿಗೆ ನೀಡಲಾಗುವ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ಮೋದಿ ಬದಲು ರಾಜ್ಯ ಸಿಎಂ ಭೂಪೇಶ್ ಭಗೇಲರ ಫೋಟೋ ಹಾಕಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

ಅಲ್ಲದೇ ಈಗಾಗಲೇ ಛತ್ತಿಸ್‌ಗಢ ಸರ್ಕಾರ 18-44 ವಯೋಮಿತಿಯವರು ಲಸಿಕೆಗಾಗಿ ನೋಂದಾವಣೆ ಮಾಡಲು CGTEEKA ಎಂಬ ನೂತನ ವೆಬ್ಸೈಟ್ ಆರಂಭಿಸಿದೆ. ಅಲ್ಲದೇ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಕೋವಿನ್ ಬದಲು, ರಾಜ್ಯ ಸರ್ಕಾರದ ಈ ನೂತನ ವೆಬ್‌ಸೈಟಿನಿಂದಲೇ ಲಸಿಕೆ ಪಡೆದವರಿಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರದ ವೆಬ್‌ಸೈಟ್‌ ಮೂಲಕ ನೀಡಲಾಗುವ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ಮಾಯವಾಗಿ ಸಿಎಂ ಭೂಪೇಶ್ ಭಗೇಲರ ಫೋಟೋ ಇರುವುದು ಸದ್ಯ ಭಾರೀ ಸದ್ದು ಮಾಡುತ್ತಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಛತ್ತೀಸ್‌ಗಢದ ಆರೋಗ್ಯ ಸಚಿವ ಟಿ. ಎಸ್. ಸಿಂಗ್ ಡಿಯೋ ಈ ಬಗ್ಗೆ ಯಾವುದೇ ಸಮಸ್ಯೆಯಾಗುತ್ತದೆ ಎಂದು ನನಗನಿಸುವುದಿಲ್ಲ. ಭಾರತ ಸರ್ಕಾರ ಲಸಿಕೆ ಹಾಗೂ ಹಣ ಒದಗಿಸುತ್ತಿದ್ದಾಗ ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯ ಫೋಟೋ ಇತ್ತು. ಆದರೀಗ ರಾಜ್ಯ ಸರ್ಕಾರ ಏನಾದರೂ ಮಾಡುತ್ತಿದ್ದರೆ, ಅಲ್ಲಿ ಪ್ರಧಾನಿ ಬದಲಾಗಿ ರಾಜ್ಯ ಸಿಎಂ ಫೋಟೋ ಇರುವುದು ಸಹಜ. ಲಸಿಕೆಯ ಹಣಕಾಸಿನ ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ಹೊರಿಸಿದೆ. ಅಲ್ಲದೇ ರಾಜ್ಯಗಳು ತಾವಾಗಿಯೇ ಲಸಿಕೆಯನ್ನು ಅರೇಂಜ್ ಮಾಡುತ್ತಿವೆ. ಹೀಗಿರುವಾಗ ರಾಜ್ಯಗಳು ತಮ್ಮದೇ ಆದ ಪ್ರಮಾಣ ಪತ್ರವನ್ನೇಕೆ ನೀಡಬಾರದು? ಮೋದಿ ಫೋಟೋ ಯಾಕೆ ಲಸಿಕೆ ಪ್ರಮಾಣ ಪತ್ರದಲ್ಲಿರಬೇಕೆಂದು ಪ್ರಶ್ನಿಸಿದ್ದಾರೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಆದರೆ ಕಾಂಗ್ರೆಸ್‌ ಆಡಳಿತವಿರುವ ಛತ್ತಿಸ್‌ಗಢ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿರುವ ಇಲ್ಲಿನ ಬಿಜೆಪಿ ಪಕ್ಷದ ನಾಯಕ ಧರ್ಮಲಾಲ್ ಕೌಶಿಕ್ ಕೇಂದ್ರ ಜಾರಿಗೊಳಿಸಿದ ಯೋಜನೆಗಳ ಲಾಭ ಪಡೆಯುವುದು ಛತ್ತೀಸ್‌ಗಢದ ಹಳೆ ಚಾಳಿ. ಲಸಿಕೆಯನ್ನು ರಾಜ್ಯ ಸರ್ಕಾರಗಳೇ ಖರೀದಿಸಬೇಕೆನ್ನುವುದು ಕೇಂದ್ರ ಸರ್ಕಾರದ ನಿರ್ಧಾರವಾದರೂ ಹದಿನೆಂಟಕ್ಕೂ ಮೇಲಿನವರಿಗೆ ಲಸಿಕೆ ಆರಂಭಿಸುವ ನಿರ್ಧಾರ ಕೇಂದ್ರದ್ದಾಗಿದೆ. ಹೀಗಾಗಿ ರಾಜ್ಯಗಳು ಮೋದಿ ಪೋಟೋವನ್ನೇ ಮುದ್ರಿಸಬೇಕೆಂದಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona