Asianet Suvarna News Asianet Suvarna News

ತೇಜಸ್ ಯುದ್ಧ ವಿಮಾನ: ಮಿತಿಗಳು ಮತ್ತು ಸವಾಲುಗಳು

ದೇಶೀಯವಾಗಿ ನಿರ್ಮಿತವಾದ ಹಗುರ ಯುದ್ಧ ವಿಮಾನವಾದ ತೇಜಸ್‌ಗೆ ತನ್ನದೇ ಆದ ಇತಿ ಮಿತಿಗಳಿವೆ. ಏನವು?

challenges limitations for teajas aircraft which crashed
Author
First Published Mar 13, 2024, 5:31 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ತೇಜಸ್ ವಿಮಾನ ಭಾರತದಲ್ಲಿ ದೇಶೀಯವಾಗಿ ನಿರ್ಮಿಸಿರುವ ಹಗುರ ಯುದ್ಧ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಬಳಗವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಡೆಲ್ಟಾ ವಿಂಗ್, ಒಂಟಿ ಇಂಜಿನ್‌ನ ಯುದ್ಧ ವಿಮಾನವನ್ನು 1980ರ ದಶಕದಲ್ಲಿ ಮಿಗ್-21 ಯುದ್ಧ ವಿಮಾನದ ಬದಲಿಗೆ ಅಳವಡಿಸಲು ಯೋಜಿಸಿದ್ದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಪ್ರೋಗ್ರಾಮ್ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿತ್ತು.

ತೇಜಸ್ ಯುದ್ಧ ವಿಮಾನವನ್ನು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು, ಈ ವಿಮಾನ ರಕ್ಷಣಾ ವೈಮಾನಿಕ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಬಯಕೆಯನ್ನು ಪ್ರತಿನಿಧಿಸುತ್ತದೆ. ದಶಕಗಳ ಅವಧಿಯ ವಿನ್ಯಾಸ, ಅಭಿವೃದ್ಧಿ ಮತ್ತು ಪರೀಕ್ಷೆಗಳ ಬಳಿಕ, 2011ರಲ್ಲಿ ತೇಜಸ್ ಯುದ್ಧ ವಿಮಾನಕ್ಕೆ ಕಾರ್ಯಾಚರಣಾ ಅನುಮತಿ ನೀಡಲಾಯಿತು. 'ಫ್ಲೈಯಿಂಗ್ ಡ್ಯಾಗರ್ಸ್' ಎಂದು ಕರೆಯಲಾದ ತೇಜಸ್ ಯುದ್ಧ ವಿಮಾನದ ಮೊದಲ ಸ್ಕ್ವಾಡ್ರನ್ 2016ರಿಂದ ಕಾರ್ಯಾಚರಣೆ ಆರಂಭಿಸಿ, ಭಾರತೀಯ ವಾಯುಪಡೆಯಲ್ಲಿ ಹೊಸ ಯುಗ ಆರಂಭಿಸಿತು.

ಪ್ರಸ್ತುತ, ತೇಜಸ್ ವಿಮಾನದ ಮೂರು ಆವೃತ್ತಿಗಳಾದ ಮಾರ್ಕ್ 1, ಮಾರ್ಕ್ 1ಎ, ಹಾಗೂ ತರಬೇತಿ ಆವೃತ್ತುಗಳು ಉತ್ಪಾದನಾ ಹಂತದಲ್ಲಿವೆ. ಈಗಾಗಲೇ 120 ಯುದ್ಧ ವಿಮಾನಗಳ ಖರೀದಿಗೆ ಆದೇಶ ನೀಡಲಾಗಿದ್ದು, ಭಾರತೀಯ ವಾಯುಪಡೆ ವಿವಿಧ ಆಧುನಿಕ ಆವೃತ್ತಿಗಳ ಸಹಿತ 300 ತೇಜಸ್ ಯುದ್ಧ ವಿಮಾನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದರಲ್ಲಿ 2026ರಲ್ಲಿ ನಿರ್ಮಾಣಗೊಳ್ಳಲಿರುವ ಆಧುನಿಕ ಮಾರ್ಕ್ 2 ವಿಮಾನವೂ ಸೇರಿದೆ. ತೇಜಸ್ ವಿಮಾನದಲ್ಲಿ ದೇಶೀಯ ಉತ್ಪನ್ನಗಳ ಪ್ರಮಾಣ ಹೆಚ್ಚುತ್ತಿರುವುದರೊಂದಿಗೆ, ತೇಜಸ್ ವಿಮಾನ ಅತ್ಯಾಧುನಿಕ ವೈಮಾನಿಕ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!

ಭಾರತೀಯ ತೇಜಸ್ ಯುದ್ಧ ವಿಮಾನ ಪತನ
ಮಾರ್ಚ್ 12, 2024ರಂದು, ಭಾರತೀಯ ವಾಯುಪಡೆಯ ಒಂದು ತೇಜಸ್ ಲಘು ಯುದ್ಧ ವಿಮಾನ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅಭ್ಯಾಸ ಹಾರಾಟದ ಸಂದರ್ಭದಲ್ಲಿನ ಅಪಘಾತದಲ್ಲಿ ಪತನಗೊಂಡಿತು.

ಭಾರತದ ಸ್ವದೇಶೀ ನಿರ್ಮಾಣದ ತೇಜಸ್ ಲಘು ಯುದ್ಧ ವಿಮಾನ ಕಳೆದ 23 ವರ್ಷಗಳಲ್ಲಿ 10,000ಕ್ಕೂ ಹೆಚ್ಚು ಅಪಘಾತ ರಹಿತ ಸಾರ್ಟಿಗಳನ್ನು ಪೂರೈಸಿದ್ದರೂ, ಈ ಮೊದಲ ಅಪಘಾತ ತೇಜಸ್ ಕಾರ್ಯಕ್ರಮಕ್ಕೆ ಹಿನ್ನಡೆ ಉಂಟುಮಾಡಿದೆ. ಪತನ ಹೊಂದಿದ ಯುದ್ಧ ವಿಮಾನ ತನ್ನ ಅಂತಿಮ ಕಾರ್ಯಾಚರಣಾ ಸಂರಚನೆಯಲ್ಲಿತ್ತು ಎನ್ನಲಾಗಿದ್ದು, ಎರಡನೇ ಎಲ್‌ಸಿಎ ತೇಜಸ್ ಸ್ಕ್ವಾಡ್ರನ್ ಆಗಿರುವ ನಂ 18 ಫ್ಲೈಯಿಂಗ್ ಬುಲೆಟ್ಸ್‌ಗೆ ಸೇರಿತ್ತು ಎನ್ನಲಾಗಿದೆ. ಇದು ಜೈಸಲ್ಮೇರ್‌ನಲ್ಲಿ ಕಾರ್ಯಾಚರಣಾ ತರಬೇತಿಯ ಸಾರ್ಟಿ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿತು. ವಿಮಾನದ ಪೈಲಟ್ ಯಶಸ್ವಿಯಾಗಿ ವಿಮಾನದಿಂದ ಹೊರ ಜಿಗಿದಿದ್ದರೂ, ಈ ಅಪಘಾತ ಇಲ್ಲಿಯತನಕ ಯಾವುದೇ ಕಳಂಕರಹಿತ ಸುರಕ್ಷತಾ ಇತಿಹಾಸ ಹೊಂದಿದ್ದ ತೇಜಸ್ ಯೋಜನೆಗೆ ಒಂದು ಹಿನ್ನಡೆ ಉಂಟುಮಾಡಿದೆ.

ಈ ಅಪಘಾತದ ವೀಡಿಯೋ ಚಿತ್ರಣದಲ್ಲಿ ಗಮನಿಸಿದಂತೆ, ವಿಮಾನದ ಲ್ಯಾಂಡಿಂಗ್ ಗೇರ್ ಬಿಡುಗೊಂಡಿತ್ತು. ಆದ್ದರಿಂದ, ವಿಮಾನದ ಪತನ ಬಹುಶಃ ಅದು ಟೇಕಾಫ್ ಆಗುವ ಸಂದರ್ಭದಲ್ಲಿ, ಅಥವಾ ತುರ್ತು ಲ್ಯಾಂಡಿಂಗ್ ನಡೆಸುವ ಸಂದರ್ಭದಲ್ಲಿ ಸಂಭವಿಸಿರಬಹುದು ಎನ್ನಬಹುದು. ಹೊಗೆ ಅಥವಾ ಇಂಜಿನ್ ಸದ್ದು ಇಲ್ಲದಿರುವುದರಿಂದ, ವಿಮಾನದ ನಿಯಂತ್ರಕಗಳು ಪ್ರತಿಕ್ರಿಯಿಸದಿರುವುದರಿಂದ, ಇಲೆಕ್ಟ್ರಿಕಲ್ ವೈಫಲ್ಯ ಅಥವಾ ಇಂಜಿನ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.

ಭಾರತೀಯ ವಾಯುಪಡೆ ತಕ್ಷಣವೇ ಒಂದು ವಿಚಾರಣಾ ಸಮಿತಿಯನ್ನು ರಚಿಸಿ, ಅಪಘಾತಕ್ಕೆ ಮೂಲ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಸೂಚಿಸಿದೆ. ಈ ಮೊದಲ ಅಪಘಾತ ದಶಕಗಳ ಕಾಲದ ತೇಜಸ್ ಯಶಸ್ವಿ ಪ್ರಯಾಣದ ಮೇಲೆ ಒಂದು ಕರಿನೆರಳಿನ ಛಾಯೆ ಮೂಡಿಸಿದೆ. ವಿಮಾನದ ಹಾರಾಟ ಯೋಗ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ಪಡೆಯಲು ಒಂದು ಕೂಲಂಕಷ ಪರಿಶೀಲನೆ ನಡೆಯುವ ಸಾಧ್ಯತೆಗಳಿವೆ.

ಭಾರತೀಯ ವಾಯುಪಡೆ ಅಪಘಾತದ ಕುರಿತು ಹೇಳಿಕೆ ನೀಡಿದ್ದು, ಜೈಸಲ್ಮೇರ್‌ನಲ್ಲಿ ಕಾರ್ಯಾಚರಣಾ ತರಬೇತಿಯ ಸಾರ್ಟಿ ನಡೆಸುತ್ತಿದ್ದ ತನ್ನ ಒಂದು ತೇಜಸ್ ಯುದ್ಧ ವಿಮಾನ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ಹೊರ ಜಿಗಿದು, ಅಪಾಯದಿಂದ ಪಾರಾಗಿದ್ದಾನೆ ಎಂದು ವಿವರಣೆ ನೀಡಿದೆ.

ತೇಜಸ್ ಯೋಜನೆಯ ಕಾರ್ಯಾಚರಣಾ ಮತ್ತು ತಾಂತ್ರಿಕ ಅಡಚಣೆಗಳು
ಬಹುತೇಕ ಏಳು ವರ್ಷಗಳ ಹಿಂದೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದರೂ, ತೇಜಸ್ ಯುದ್ಧ ವಿಮಾನ ಯೋಜನೆ ಆರಂಭಗೊಂಡ ಬಳಿಕ ಹಲವು ಕಾರ್ಯಾಚರಣಾ ಮತ್ತು ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ವಾಯು ಸೇನೆಗೆ ಸೇರ್ಪಡೆಗೊಂಡ ಬಳಿಕವೂ, ವಿಮಾನದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಹಲವು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸಿದೆ. ವಿಮಾನದ ಅಭಿವೃದ್ಧಿಯಾದ್ಯಂತ ಇದನ್ನು ಸಂಪೂರ್ಣ ಕಾರ್ಯಾಚರಣೆಗೊಳಿಸುವಂತೆ ಮಾಡಲು ಹಲವಾರು ಸವಾಲುಗಳು ಎದುರಾಗುತ್ತಾ ಬಂದಿವೆ.

ಐಐಎಸ್‌ಸಿ ಸ್ಥಾಪನೆ ಮತ್ತು ಮಹಿಳಾ ಸಬಲೀಕರಣದ ಹಿಂದಿನ ಶಕ್ತಿ ಮಹಾರಾಣಿ ಕೆಂಪನಂಜಮ್ಮಣ್ಣಿ

ತೇಜಸ್ ಯುದ್ಧ ವಿಮಾನ ಯೋಜನೆ ಭಾರತದ ಅತ್ಯಂತ ಮಹತ್ವಾಕಾಂಕ್ಷಿ, ದೇಶೀಯ ಯುದ್ಧ ವಿಮಾನ ಯೋಜನೆಯಾಗಿದ್ದು, ವಾಯು ಸೇನೆಗೆ ಸೇರ್ಪಡೆಯಾದ ಹಲವು ವರ್ಷಗಳ ಬಳಿಕವೂ ಕಾರ್ಯಾಚರಣಾ ಸವಾಲುಗಳನ್ನು ಮತ್ತು ನಿರ್ಬಂಧಗಳನ್ನು ಎದುರಿಸುತ್ತಿದೆ. ಇದರಲ್ಲಿನ ಇನ್ನೊಂದು ಪ್ರಮುಖ ಸವಾಲೆಂದರೆ, ಅದರ ಕಡಿಮೆ ಸೇವಾ ನಿರ್ಬಂಧಗಳು. ಅಪಾರ ಸಂಖ್ಯೆಯ ತೇಜಸ್ ಯುದ್ಧ ವಿಮಾನಗಳು ದೀರ್ಘ ಕಾಲದ ತನಕ ತರಬೇತಿ ಮತ್ತು ಕಾರ್ಯಾಚರಣೆಗೆ ಲಭಿಸದಿದ್ದು, ಭಾರತೀಯ ವಾಯುಪಡೆಯ ಕಾರ್ಯಾಚರಣಾ ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ. ಈ ವಿಮಾನ ಸಣ್ಣ ಗಾತ್ರದ್ದಾಗಿರುವುದರಿಂದ, ಇದರ ವ್ಯಾಪ್ತಿ ಮತ್ತು ಪೇಲೋಡ್ ಸಾಮರ್ಥ್ಯ ಕಡಿಮೆಯಿರುತ್ತದೆ. ಆದ್ದರಿಂದ ಇದು ದೀರ್ಘ ಹಾರಾಟದ ಸಂದರ್ಭದಲ್ಲಿ ನಿರಂತರವಾಗಿ ನಿಲುಗಡೆ ನಡೆಸಬೇಕಾಗುತ್ತದೆ.

ಅದರೊಡನೆ, ತೇಜಸ್ ಯುದ್ಧ ವಿಮಾನ ಆಧುನಿಕ ಆಯುಧಗಳು ಮತ್ತು ವ್ಯವಸ್ಥೆಗಳ ಅಳವಡಿಕೆಗಳಿಗೆ ಸಂಬಂಧಿಸಿದಂತೆ ಸಮಕಾಲೀನ ಯುದ್ಧ ವಿಮಾನಗಳಿಂದ ಹಿಂದುಳಿದಿದ್ದು, ಅದರ ಯುದ್ಧ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರುತ್ತದೆ. ವಿಮಾನದ ಖರ್ಚು ಮತ್ತು ಅದರ ಸಾಮರ್ಥ್ಯಗಳನ್ನು ಹೋಲಿಸಿ ನೋಡುವಾಗ, ತೇಜಸ್ ಒಂದು ವೆಚ್ಚದಾಯಕ ವಿಮಾನವಾಗಿ ಕಂಡುಬರುತ್ತದೆ. ತೇಜಸ್ ತನ್ನ ಮೂಲ ಯೋಜನಾ ವೆಚ್ಚದಿಂದ ಬಜಳಷ್ಟು ಹೆಚ್ಚೇ ವೆಚ್ಚದಾಯಕವಾಗಿದ್ದು, ಇದಕ್ಕೆ ನಿರಂತರ ವಿಳಂಬಗಳೂ ಕಾರಣವಾಗಿವೆ.

ಆಧುನಿಕ ವೈಮಾನಿಕ ಮಾರುಕಟ್ಟೆಯಲ್ಲಿ ತೇಜಸ್ ಯುದ್ಧ ವಿಮಾನ ಒಂದು ಕಾರ್ಯಸಾಧ್ಯವಾದ, ಉತ್ತಮ ಬೆಲೆಯ ಯುದ್ಧ ವಿಮಾನ ಎನಿಸಬೇಕಾದರೆ, ಮಹತ್ವದ ನವೀಕರಣಗಳು ಮತ್ತು ಅಭಿವೃದ್ಧಿಗಳು ಅವಶ್ಯಕವಾಗಿವೆ. ಈ ಯೋಜನೆಯ ದೀರ್ಘಾವಧಿಯ ಬಾಳ್ವಿಕೆ ಮತ್ತು ಯಶಸ್ಸಿಗಾಗಿ ತೇಜಸ್ ತನ್ನ ಕಾರ್ಯಾಚರಣಾ ಕೊರತೆಗಳನ್ನು ನಿವಾರಿಸಬೇಕಿದೆ. ತೇಜಸ್ ವಿಮಾನದ ಮೂಲದಲ್ಲಿ, ಅದಕ್ಕೆ ಶಕ್ತಿ ನೀಡುವ ಜಿಇ ಎಫ್404 ಇಂಜಿನ್ ಒಂದು ಸವಾಲಾಗಿದೆ. ಈ ಇಂಜಿನ್‌ಗಳು ನಿರಂತರವಾಗಿ ಅತಿಯಾಗಿ ಬಿಸಿಯಾಗುವುದು, ಜ್ವಾಲೆಗಳ ಸಮಸ್ಯೆಗಳನ್ನು ಹೊಂದಿ, ಯೋಜನೆಯ ವಿಳಂಬಕ್ಕೆ ಕಾರಣವಾಗಿದ್ದವು ಮತ್ತು ಹಾರಾಟದ ಸಂದರ್ಭದಲ್ಲಿ ಸುರಕ್ಷತಾ ಸವಾಲುಗಳನ್ನು ಉಂಟುಮಾಡಿದ್ದವು.

ಅದರೊಡನೆ, ತೇಜಸ್ ಯುದ್ಧ ವಿಮಾನದ ಏವಿಯಾನಿಕ್ಸ್‌ಗೆ ಹೊಸ ಆಯುಧ ವ್ಯವಸ್ಥೆಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಅಳವಡಿಸುವುದು ಕಷ್ಟಕರವಾಗಿತ್ತು. ಈ ಸಾಫ್ಟ್‌ವೇರ್‌ಗಳು ಹೆಚ್ಚುತ್ತಿರುವ ವಾಯು ಅಪಾಯಗಳನ್ನು ಎದುರಿಸಲು ಅವಶ್ಯಕವಾಗಿವೆ. ಈ ಸಮಸ್ಯೆಗಳ ಜೊತೆಗೆ, ವಿಮಾನದ ಚೌಕಟ್ಟಿನಲ್ಲಿರುವ ರಚನಾತ್ಮಕ ಕೊರತೆಗಳು, ವಿಮಾನದ ಹಾರಾಟ ಯೋಗ್ಯತೆ ಮತ್ತು ಕಾರ್ಯಾಚರಣಾ ಆಯುಷ್ಯದ ಅವಧಿಯಲ್ಲಿ ಅತ್ಯಂತ ತೀವ್ರವಾದ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯಗಳ ಕುರಿತು ಅನುಮಾನ ಮೂಡಿಸುತ್ತದೆ.

ಸೌರ ಚಟುವಟಿಕೆಗಳ ಅಧ್ಯಯನಕ್ಕೆ ಸಜ್ಜಾದ ಆದಿತ್ಯ ಎಲ್1 ಬಗ್ಗೆ ಒಂದಿಷ್ಟು..!

ಒಟ್ಟಾರೆಯಾಗಿ, ಇಂತಹ ತಾಂತ್ರಿಕ ಸಮಸ್ಯೆಗಳು ಯೋಜನೆಯನ್ನು ವಿಳಂಬವಾಗಿಸುವುದು ಮಾತ್ರವಲ್ಲದೆ, ತೇಜಸ್ ವಿಮಾನವನ್ನು ಒಂದು ಆಧುನಿಕ, ಬಹು ಪಾತ್ರಗಳ ಯುದ್ಧ ವಿಮಾನ ಎಂದು ಪರಿಗಣಿಸುವುದನ್ನು ಕಷ್ಟಕರವಾಗಿಸುತ್ತದೆ. ಅತ್ಯಂತ ಸ್ಪರ್ಧಾತ್ಮಕವಾದ ಜಾಗತಿಕ ವೈಮಾನಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು, ಇಂತಹ ಸಮಸ್ಯೆಗಳನ್ನು ನಿವಾರಿಸುವುದು ಅನಿವಾರ್ಯವಾಗಿದೆ.

ಇತ್ತೀಚಿನ ತೇಜಸ್ ವಿಮಾನದ ಪತನ ಯೋಜನೆಯ ಸಮಸ್ಯೆಗಳನ್ನು ಅತ್ಯಂತ ಕ್ಷಿಪ್ರವಾಗಿ ಮತ್ತು ನಿಖರವಾಗಿ ಪರಿಹರಿಸುವ ಅನಿವಾರ್ಯತೆಯನ್ನು ಪ್ರದರ್ಶಿಸಿದೆ. ವಿಮಾನದ ಕನಿಷ್ಠ ಸೇವಾ ದರ, ಕಡಿಮೆ ವ್ಯಾಪ್ತಿ ಮತ್ತು ಪೇಲೋಡ್ ಸಾಮರ್ಥ್ಯ, ಹಾಗೂ ಸಾಫ್ಟ್‌ವೇರ್ ಮತ್ತು ಆಯುಧ ಅಳವಡಿಕಾ ಸಮಸ್ಯೆಗಳನ್ನು ನಿವಾರಿಸಿದರೆ ಮಾತ್ರವೇ ತೇಜಸ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಬಹುದು. ಅದರೊಡನೆ, ಇಂಜಿನ್ ನಂಬಿಕಾರ್ಹತೆ, ಏವಿಯಾನಿಕ್ಸ್, ವೈಮಾನಿಕ ಚೌಕಟ್ಟಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಿದರೆ ಮಾತ್ರವೇ ವಿಮಾನದ ಯುದ್ಧದ ನಂಬಿಕಾರ್ಹತೆ ಮತ್ತು ದೀರ್ಘಾವಧಿ ಬಾಳಿಕೆ ಸಾಧಿಸಬಹುದು.

ಎಚ್ಎಎಲ್ ಹೊಂದಿರುವ ಸಮಸ್ಯೆಗಳು
ಎಚ್ಎಎಲ್ ಈಗಾಗಲೇ ಅತ್ಯಂತ ಪ್ರಭಾವಶಾಲಿ ವಿಮಾನಗಳ ಯಾದಿಯನ್ನೇ ಹೊಂದಿದ್ದು, ಅವುಗಳಲ್ಲಿ ಮಿಗ್-21 ಮತ್ತು ಆಧುನಿಕ ಸುಖೋಯಿ-30 ವಿಮಾನಗಳು ಸೇರಿವೆ. ಆದರೆ ಕಂಪನಿಯ ವಿಕಾಸ ಅಭಿವೃದ್ಧಿಗೆ ಸಮಾನಾರ್ಥಕವಾಗಿಯೇನೂ ಸಾಗಿ ಬಂದಿಲ್ಲ. ಎಚ್ಎಎಲ್ ಉತ್ಪಾದನಾ ದೈತ್ಯ ಸಂಸ್ಥೆ ಎಂಬ ಹೆಸರು ಹೊಂದಿದ್ದರೂ, ತಾಂತ್ರಿಕ ಅಭಿವೃದ್ಧಿಯೊಂದಿಗೆ ಸಾಗಬಲ್ಲ ಸಾಮರ್ಥ್ಯ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಬಲ್ಲ ಕಾರ್ಮಿಕ ಬಲದ ಕುರಿತು ಕಳವಳಗಳಿವೆ.

ಎಚ್ಎಎಲ್‌ನ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ, ನಿರ್ಧಾರ ಕೈಗೊಳ್ಳಬಲ್ಲ ನಾಯಕತ್ವ ಮತ್ತು ಕಾರ್ಯತಂತ್ರದ ಮಾರ್ಗದರ್ಶನದ ಕೊರತೆ. ಭಾರತೀಯ ವೈಮಾನಿಕ ಉದ್ಯಮ ಯಾವ ಪಥದಲ್ಲಿ ಸಾಗುತ್ತಿದೆ ಎಂಬ ಸ್ಪಷ್ಟ ಚಿತ್ರಣ ಎಚ್ಎಎಲ್ ಬಳಿ ಇಲ್ಲದಿರುವುದರಿಂದ, ಅದು ಪ್ರಕ್ಷುಬ್ಧ ಆಗಸದಲ್ಲಿ ಹಾರಾಡುತ್ತಿರುವ ವಿಮಾನದಂತಾಗಿದ್ದು, ಅದರ ಜಾಗತಿಕ ಪ್ರತಿಸ್ಪರ್ಧಿಗಳು ಅದನ್ನು ಸೋಲಿಸುವುದು ಸುಲಭ ಎನ್ನುವಂತಾಗಿದೆ.

ಎಚ್ಎಎಲ್ ಈಗ ನಿಶ್ಚಲವಾಗಿರುವುದರ ಪರಿಣಾಮಗಳಂತೂ ಭಾರತೀಯ ವಾಯುಪಡೆಯ ಮೇಲೆ ಗಂಭೀರವಾಗಿ ತಟ್ಟಿದೆ. ಭಾರತೀಯ ವಾಯುಪಡೆಯ ಬಳಿ ಈಗ ಯುದ್ಧ ವಿಮಾನಗಳ ಕೊರತೆಯೂ ಇದ್ದು, ಎಚ್ಎಎಲ್‌ನ ನಿಧಾನಗತಿ ಸ್ವದೇಶೀ ಯುದ್ಧ ವಿಮಾನಗಳ ಅಭಾವವೂ ಉಂಟಾಗುವಂತೆ ಮಾಡಿದೆ. ಜಾಗತಿಕ ರಾಜಕಾರಣದ ಚಿತ್ರಣ ದಿನೇ ದಿನೇ ಬದಲಾಗುತ್ತಿರುವ ಸಂದರ್ಭದಲ್ಲಿ, ಪ್ರಾದೇಶಿಕ ಭದ್ರತೆಯಲ್ಲೂ ನಿರಂತರ ಸವಾಲುಗಳು ಎದುರಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಅತ್ಯಂತ ಮುಖ್ಯವಾಗುತ್ತದೆ.

ಬಾಂಗ್ಲಾದೇಶದ ನೂತನ, ದಿಟ್ಟ ಹೆಜ್ಜೆಯೆಡೆಗೊಂದು ನೋಟ: ಬಿಎನ್ಎಸ್ ಶೇಖ್ ಹಸೀನಾ ಪರಿಚಯ

ಇಷ್ಟೊಂದು ಸವಾಲುಗಳ ಮಧ್ಯೆ, ಎಚ್ಎಎಲ್ ಮತ್ತು ಒಟ್ಟಾರೆಯಾಗಿ ವೈಮಾನಿಕ ಉದ್ಯಮ ವ್ಯವಸ್ಥೆಯ ಮುಂದಿನ ಹಾದಿಯನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಆಡಳಿತಗಾರರು ಮತ್ತು ಉದ್ಯಮ ಪಾಲುದಾರರ ಮುಂದಿದೆ. ಇದಕ್ಕಾಗಿ ಹಿಂದಿನ ತಪ್ಪುಗಳನ್ನು ಸರಿಪಡಿಸುವುದು ಮಾತ್ರವಲ್ಲದೆ, ಭವಿಷ್ಯದಲ್ಲೂ ನಾವೀನ್ಯತೆ, ಆವಿಷ್ಕಾರ, ಸಹಯೋಗ ಮತ್ತು ಸುಸ್ಥಿರ ಅಭಿವೃದ್ಧಿಗೆ ಸೂಕ್ತವಾದ ವ್ಯವಸ್ಥೆ ರೂಪಿಸಬೇಕಿದೆ.

ಭಾರತದ ಪ್ರಮುಖ ರಕ್ಷಣಾ ಸಂಸ್ಥೆಗಳಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಹಾಗೂ ಆರ್ಡ್‌ನನ್ಸ್ ಫ್ಯಾಕ್ಟರಿಗಳು ತಮ್ಮ ಭರವಸೆಗಳನ್ನು ಉಳಿಸಿಕೊಳ್ಳಲು ವಿಫಲವಾಗಿದ್ದು, ಭಾರತದ ಮಿಲಿಟರಿ ಸಾಮರ್ಥ್ಯ ಹಿಂದೇಟು ಹಾಕುವಂತೆ ಮಾಡಿದೆ.

ಒಂದು ಅತ್ಯಾಧುನಿಕ ಟ್ಯಾಂಕ್ ಮತ್ತು ಜಾಗತಿಕ ಗುಣಮಟ್ಟದ ಯುದ್ಧ ವಿಮಾನದ ನಿರ್ಮಾಣ ಡಿಆರ್‌ಡಿಓ ಮತ್ತು ಎಚ್ಎಎಲ್‌ಗಳ ಹುಸಿ ಭರವಸೆಗಳಂತೆ ತೋರುತ್ತಿದೆ. ಇಂತಹ ಪ್ರಯತ್ನಗಳು ಯಶಸ್ವಿಯಾಗಲು ಹಲವು ವರ್ಷಗಳ ನಿರಂತರ ಪರಿಶ್ರಮ, ಅಪಾರ ಪ್ರಮಾಣದ ಹೂಡಿಕೆಯ ಅವಶ್ಯಕತೆ ಇದೆ. ಆದರೆ ಇದು ಕಾರ್ಯಾಚರಣಾ ಸಾಮರ್ಥ್ಯವಿಲ್ಲದ, ಕೇವಲ ಮೂಲಮಾದರಿಯ ವಿನ್ಯಾಸಕ್ಕೆ ಸೀಮಿತವಾಗುವಂತೆ ಕಾಣುತ್ತಿದೆ.

ಎಲ್‌ಸಿಎ ಯೋಜನೆಯ ಅನಿಶ್ಚಿತ ಹಾದಿ
ಮೇಲೆ ವಿವರಿಸಿದ ಸಮಸ್ಯೆಗಳಿಗೆ ಜ್ವಲಂತ ಉದಾಹರಣೆಯ ರೀತಿಯಲ್ಲಿ ನಮ್ಮ ಮುಂದಿರುವುದು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ಯೋಜನೆ. ಮಹತ್ವಾಕಾಂಕ್ಷಿ ಯೋಜನೆ ಮತ್ತು ಅಪಾರ ಪ್ರಮಾಣದ ಹೂಡಿಕೆಯ ಹೊರತಾಗಿಯೂ, ವಿಮಾನದ ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಎಲ್‌ಸಿಎ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಲಾಗಿದ್ದರೂ, ಅವುಗಳ ಅಭಿವೃದ್ಧಿ ಮತ್ತು ಪೂರೈಕೆಯ ವೇಗ ಅತ್ಯಂತ ನಿಧಾನವಾಗಿದೆ. ಅನವಶ್ಯಕ ವಿಳಂಬಗಳು ಮತ್ತು ಅನಿಶ್ಚಿತತೆಗಳು ಯೋಜನೆಗೆ ತೊಡರುಗಾಲು ಹಾಕುತ್ತಿವೆ.

ಎಲ್‌ಸಿಎಯ ಹೆಚ್ಚು ಸಮರ್ಥ ಆವೃತ್ತಿ ಎನ್ನಲಾದ ಎಲ್‌ಸಿಎ ಎಂಕೆ1ಎಯ 83 ವಿಮಾನಗಳ ಪೂರೈಕೆಗೆ ಆದೇಶ ಸಲ್ಲಿಸಲಾಗಿದ್ದು, ಇದು ಕೊಂಚ ಭರವಸೆ ಮೂಡಿಸಿದೆ. ಆದರೆ, ಈ ಪೂರೈಕೆಯ ಸಮಯಾವಧಿ ಮಾತ್ರ ಇಂದಿಗೂ ಅಸ್ಪಷ್ಟವಾಗಿದೆ. ಎಚ್ಎಎಲ್ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ವೇಳಾಪಟ್ಟಿಯನ್ನು ಇಂದಿಗೂ ಒದಗಿಸಿಲ್ಲ. ಅದರೊಡನೆ, ಎಲ್‌ಸಿಎ ಇಂದಿಗೂ ಪ್ರಿಸಿಷನ್ ಗೈಡೆಡ್ ಆಯುಧಗಳು ಮತ್ತು ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳು ಸೇರಿದಂತೆ, ಹಲವು ಬಿಡಿಭಾಗಗಳ ಆಮದಿನ ಮೇಲೆ ಅವಲಂಬಿತವಾಗಿದೆ. ಇದು ಭಾರತ ಇಂದಿಗೂ ಪ್ರಮುಖ ರಕ್ಷಣಾ ಉತ್ಪನ್ನಗಳಿಗಾಗಿ ವಿದೇಶೀ ಪೂರೈಕೆದಾರರ ಮೇಲೆ ಅವಲಂಬನೆ ಹೊಂದಿರುವುದನ್ನು ಸೂಚಿಸುತ್ತದೆ.

ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವ!

ಭಾರತ ಆಂತರಿಕ ಇಲೆಕ್ಟ್ರಾನಿಕ್ ಕೌಂಟರ್ ಮೆಷರ್ ವ್ಯವಸ್ಥೆ ಮತ್ತು ಭಾರತೀಯ ವಿಮಾನ ಇಂಜಿನ್ ಹೊಂದಿಲ್ಲದಿರುವುದು ಎಲ್‌ಸಿಎ ಯೋಜನೆಗೆ ಇನ್ನಷ್ಟು ಅನನುಕೂಲತೆ ಉಂಟುಮಾಡಿದೆ. ಈ ಪ್ರಮುಖ ಬಿಡಿಭಾಗಗಳ ಹೊರತಾಗಿ, ಎಲ್‌ಸಿಎಯ ಕಾರ್ಯಾಚರಣಾ ಪರಿಣಾಮಕಾರಿತ್ವ ಮತ್ತು ದೀರ್ಘ ಬಾಳಿಕೆಯ ಕುರಿತು ಸವಾಲುಗಳು ಎದ್ದಿದ್ದು, ಅದರ ದೀರ್ಘಾವಧಿಯ ಬಳಕೆಯ ಕುರಿತು ಅನುಮಾನಗಳನ್ನು ಸೃಷ್ಟಿಸಿವೆ.

ಹಾಗೆಂದು ಎಲ್‌ಸಿಎ ಯೋಜನೆಗೆ ಸಂಬಂಧಿಸಿದ ಸವಾಲುಗಳು ಕೇವಲ ವಾಯುಪಡೆಗೆ ಮಾತ್ರವೇ ಸೀಮಿತವಾಗಿಲ್ಲ. ಯಾಕೆಂದರೆ, ಎಲ್‌ಸಿಎಯ ನೌಕಾಪಡೆಯ ಆವೃತ್ತಿ ಮತ್ತು ಟ್ಯಾಕ್ಟಿಕಲ್ ಇಲೆಕ್ಟ್ರಾನಿಕ್ ವಾರ್‌ಫೇರ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಟಿಇಡಿಬಿಎಫ್) ಯೋಜನೆಗಳ ಮಾಹಿತಿಗಳೂ ಅನಿಶ್ಚಿತವಾಗಿವೆ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಇನ್ನೂ ಒಂದು ಸ್ಪಷ್ಟ ಚಿತ್ರಣ ಇಲ್ಲದಿರುವುದರಿಂದ, ಮುಂದಿನ ವರ್ಷಗಳಲ್ಲಿ ಭಾರತ ನಂಬಿಕಾರ್ಹ ನೌಕಾಪಡೆಯ ವೈಮಾನಿಕ ಸಾಮರ್ಥ್ಯ ಹೊಂದುವುದೂ ಅನುಮಾನಾಸ್ಪದವಾಗಿ ತೋರುತ್ತಿದೆ.
 

Follow Us:
Download App:
  • android
  • ios