ಜಡ್ಜ್ಗಳ ಮೇಲೆ ದಾಳಿ ನಡೆದರೂ, ಗುಪ್ತಚರ, ಸಿಬಿಐ ನೆರವಿಲ್ಲ: ಸುಪ್ರೀಂ
* ನ್ಯಾಯಾಧೀಶರಿಗೆ ಜೀವ ಬೆದರಿಕೆ, ಹಲ್ಲೆ, ನಿಂದನೆಯ ಕರೆಗಳು
* ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್
* ಗುಪ್ತಚರ ಇಲಾಖೆ ಹಾಗೂ ಸಿಬಿಐ ನ್ಯಾಯಾಂಗಕ್ಕೆ ಸಹಾಯ ಮಾಡುತ್ತಿಲ್ಲ
ನವದೆಹಲಿ(ಜು.07): ನ್ಯಾಯಾಧೀಶರಿಗೆ ಜೀವ ಬೆದರಿಕೆ, ಹಲ್ಲೆ, ನಿಂದನೆಯ ಕರೆಗಳು ಬರುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂತಹ ಪ್ರಕರಣಗಳಲ್ಲಿ ಗುಪ್ತಚರ ಇಲಾಖೆ ಹಾಗೂ ಸಿಬಿಐ ನ್ಯಾಯಾಂಗಕ್ಕೆ ಸಹಾಯ ಮಾಡುತ್ತಿಲ್ಲ. ಅಲ್ಲದೇ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ಈ ರೀತಿಯ ಘಟನೆಗಳ ಬಗ್ಗೆ ದೂರು ನೀಡುವ ಸ್ವಾತಂತ್ರ್ಯವೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಜಾರ್ಖಂಡ್ನಲ್ಲಿ ವಾಹನ ಹರಿಸಿ ನ್ಯಾಯಾಧೀಶರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ, ಫೇಸ್ಬುಕ್, ವಾಟ್ಸಾಪ್ ಸಂದೇಶಗಳ ಮೂಲಕ ಹೈಕೋರ್ಟ್ ಹಾಗೂ ಕೆಳ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಬೆದರಿಕೆ ಸಂದೇಶಗಳು ಬರುತ್ತಿವೆ. ನಿಂದನೆ ಸಂದೇಶಗಳ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ.
ಒಂದೆರಡು ಕಡೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಆದರೆ ವರ್ಷ ಕಳೆದರೂ ಸಿಬಿಐ ಏನೂ ಮಾಡದಿರುವುದು ಬೇಸರ ಮೂಡಿಸಿದೆ. ದೇಶದಲ್ಲೀಗ ನ್ಯಾಯಾಧೀಶರಿಗೆ ದೂರು ಕೊಡಲೂ ಸ್ವಾತಂತ್ರ್ಯವಿಲ್ಲ. ಅಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.