ಪಶ್ಚಿಮ ಬಂಗಾಳದಲ್ಲಿ ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರು ವಧೆ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿದೆ. ಗೋವಧೆಯು ಈದ್ ಹಬ್ಬದ ಅವಿಭಾಜ್ಯ ಅಂಗವಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆಗೆ ಅವಕಾಶ ನೀಡಿದೆ.
ಕೋಲ್ಕತಾ(ಮೇ.22): ಪಶ್ಚಿಮ ಬಂಗಾಳ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾದ ಬಕ್ರೀದ್ ಗೋವಧೆ ವಿಚಾರದಲ್ಲಿ ಈಗ ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರು ವಧೆ ನಡೆಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಬೆಂಬಲ ಸೂಚಿಸಿದೆ.

ಗೋವಧೆ ಈದ್ನ ಭಾಗವಲ್ಲ ಹೈಕೋರ್ಟ್ ಸ್ಪಷ್ಟನೆ
ತೀರ್ಪಿನ ವೇಳೆ ನ್ಯಾಯಾಲಯ, 'ಗೋವಧೆ ಈದ್ ಅಲ್-ಅಧಾ ಹಬ್ಬದ ಅವಿಭಾಜ್ಯ ಅಂಗವಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳನ್ನು ವಧೆ ಮಾಡಲು ಅವಕಾಶ ನೀಡಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದೆ. ಈ ಮಾತು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಮೇ 13ರ ಆದೇಶಕ್ಕೆ ನ್ಯಾಯಾಲಯ ಮುದ್ರೆ
ಮೇ 13ರಂದು ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ, ಹಸು, ಕರು, ಎಮ್ಮೆ, ಎತ್ತು ಮತ್ತು ಹೋರಿಗಳನ್ನು 'ಅನರ್ಹ' ಎಂದು ಪ್ರಮಾಣೀಕರಿಸಿದ ಬಳಿಕ ಮಾತ್ರ ವಧೆ ಮಾಡಬಹುದು ಎಂದು ಹೇಳಲಾಗಿತ್ತು.
ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಹಾಗೂ ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ನೇತೃತ್ವದ ಪೀಠ, 'ಈ ಅಧಿಸೂಚನೆ 2018ರ ಹೈಕೋರ್ಟ್ ಆದೇಶದ ಅನುಸಾರವೇ ಹೊರಡಿಸಲಾಗಿದೆ” ಎಂದು ಹೇಳಿ ಅರ್ಜಿಗಳನ್ನು ವಜಾಗೊಳಿಸಿದೆ.
ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆಗೆ ಅವಕಾಶ
ನ್ಯಾಯಾಲಯ ಮತ್ತೊಂದು ಮಹತ್ವದ ಸೂಚನೆ ನೀಡಿದ್ದು, ಸರ್ಕಾರ ಮಾನ್ಯತೆ ನೀಡಿದ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ನಡೆಸಬೇಕು ಎಂದು ಹೇಳಿದೆ.
ಅಕ್ರಮ ಗೋವಧೆ ತಡೆಯಲು ಅಧಿಕಾರಿಗಳಿಗೆ ಪರಿಶೀಲನೆ ನಡೆಸುವ ಅಧಿಕಾರವೂ ನೀಡಲಾಗಿದೆ.
ಧಾರ್ಮಿಕ ಹಕ್ಕುಗಳ ಪ್ರಶ್ನೆ ಎತ್ತಿದ ಟಿಎಂಸಿ ಶಾಸಕ
ಈ ಪ್ರಕರಣದಲ್ಲಿ ಟಿಎಂಸಿ ಶಾಸಕ ಅಖ್ರುಝಮಾನ್, 'ಬಕ್ರೀದ್ ವೇಳೆ ದೊಡ್ಡ ಪ್ರಾಣಿಗಳ ಬಲಿ ಅನೇಕ ಮುಸ್ಲಿಮರ ಧಾರ್ಮಿಕ ಆಚರಣೆಯ ಭಾಗ. ಸರ್ಕಾರ ಸೆಕ್ಷನ್ 12 ಅಡಿಯಲ್ಲಿ ವಿನಾಯಿತಿ ನೀಡಿಲ್ಲ' ಎಂದು ವಾದಿಸಿದ್ದರು. ಅವರ ಪ್ರಕಾರ, ಬಡ ಮುಸ್ಲಿಂ ಕುಟುಂಬಗಳಿಗೆ ಎಮ್ಮೆ ಅಥವಾ ಎತ್ತು ಬಲಿ ನೀಡುವುದು ಧಾರ್ಮಿಕ ಹಾಗೂ ಆರ್ಥಿಕವಾಗಿ ಅನುಕೂಲಕರ ಮಾರ್ಗವಾಗಿದೆ.
ರಾಜಕೀಯ ವಲಯದಲ್ಲಿ ಭಾರೀ ಚರ್ಚೆ
ಈ ತೀರ್ಪಿನ ನಂತರ ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಆಚರಣೆ, ಕಾನೂನು ಮತ್ತು ರಾಜಕೀಯದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ವಿಶೇಷವಾಗಿ ಸುವೇಂದು ಅಧಿಕಾರಿ ಪ್ರಭಾವ ಹೆಚ್ಚುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.


