ಕೇಂದ್ರ ಬಜೆಟ್ 2026 ಅನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಟೀಕಿಸಿದ್ದಾರೆ. ಇದೊಂದು ಪ್ರಾಯೋಗಿಕವಲ್ಲದ, ಮಹಿಳಾ ವಿರೋಧಿ ಮತ್ತು ಬಂಗಾಳಕ್ಕೆ ತಾರತಮ್ಯ ಮಾಡಿದ ಬಜೆಟ್ ಎಂದು ಆರೋಪಿಸಿದ್ದಾರೆ. 

ಕೋಲ್ಕತ್ತಾ (ಫೆ. 1): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026ರ ಬಜೆಟ್ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಈ ಬಜೆಟ್ ಕೇವಲ ಮಾತಿನಲ್ಲಿ ಮಂಟಪ ಕಟ್ಟುವ ಬಜೆಟ್‌ನಂತಿದೆ, ಇದರಲ್ಲಿ ಯಾವುದೇ ಪ್ರಾಯೋಗಿಕ ದೂರದೃಷ್ಟಿಯಿಲ್ಲ. ಇದು ದೇಶದ ಆರ್ಥಿಕತೆಯನ್ನು ಬಲಪಡಿಸುವ ಬದಲು ಸಂಪೂರ್ಣವಾಗಿ ನಾಶಪಡಿಸುತ್ತದೆ' ಎಂದು ಅವರು ಕಿಡಿಕಾರಿದ್ದಾರೆ. ಬಜೆಟ್ ಘೋಷಣೆಗಳು ಬರೀ ಕಾಗದಕ್ಕೆ ಸೀಮಿತವಾಗಿದ್ದು, ಸಾಮಾನ್ಯ ಜನರ ಬದುಕಿಗೆ ಯಾವುದೇ ಭರವಸೆ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಮಹಿಳಾ ಸಬಲೀಕರಣ ಕೇವಲ ಘೋಷಣೆಗಷ್ಟೇ ಸೀಮಿತ

ಬಜೆಟ್‌ನಲ್ಲಿ ಮಹಿಳೆಯರ ಕುರಿತಾದ ಪ್ರಸ್ತಾಪಗಳನ್ನು ಟೀಕಿಸಿದ ಮಮತಾ ಬ್ಯಾನರ್ಜಿ, 'ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಬೊಬ್ಬೆ ಹೊಡೆಯುತ್ತದೆ, ಆದರೆ ಬಜೆಟ್‌ನಲ್ಲಿ ಅವರಿಗೆ ಪೂರಕವಾದ ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲ. ಮಹಿಳೆಯರ ಅಗತ್ಯಗಳನ್ನು ಈ ಬಜೆಟ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ' ಎಂದಿದ್ದಾರೆ. ಸರ್ಕಾರದ ನಿಲುವು ಕೇವಲ ತೋರಿಕೆಯದ್ದಾಗಿದ್ದು, ಮಹಿಳೆಯರ ಆರ್ಥಿಕ ಭದ್ರತೆಗೆ ಯಾವುದೇ ಒತ್ತು ನೀಡಿಲ್ಲ ಎಂಬುದು ಬ್ಯಾನರ್ಜಿಯವರ ವಾದ.

ಬಂಗಾಳಕ್ಕೆ ಸಿಕ್ಕಿದ್ದು 'ಶೂನ್ಯ'; ಕೇಂದ್ರದ ತಾರತಮ್ಯಕ್ಕೆ ಆಕ್ರೋಶ

ಈ ಬಾರಿಯ ಬಜೆಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಒಂದೇ ಒಂದು ಪೈಸೆಯನ್ನೂ ಮೀಸಲಿಟ್ಟಿಲ್ಲ' ಎಂದು ಮುಖ್ಯಮಂತ್ರಿಗಳು ದೂರಿದ್ದಾರೆ. ಕೇಂದ್ರ ಸರ್ಕಾರವು ಬಂಗಾಳದ ವಿರುದ್ಧ ವ್ಯವಸ್ಥಿತವಾಗಿ ತಾರತಮ್ಯ ಎಸಗುತ್ತಿದೆ ಮತ್ತು ರಾಜ್ಯದ ನ್ಯಾಯಯುತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಯಾವುದೇ ಸ್ಥಾನ ನೀಡದಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಥೆಗಳ ದುರುಪಯೋಗ ಮತ್ತು ರಾಜಕೀಯ ಒತ್ತಡ

ಬಂಗಾಳದ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಒತ್ತಡದ ತಂತ್ರಗಳ ಬಗ್ಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಕೇವಲ ಎಸ್‌ಐಆರ್ (SIR) ದಾಳಿಗಳನ್ನು ನಡೆಸಲಾಗುತ್ತಿದೆ. ಚುನಾವಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧ ರಾಜಕೀಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ" ಎಂದು ಗಂಭೀರ ಆರೋಪ ಮಾಡಿದರು. ಸ್ವತಂತ್ರ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮೂರು ಕಾರಿಡಾರ್‌ ಯೋಜನೆ ಕೇವಲ 'ವಿಂಡೋ ಡ್ರೆಸ್ಸಿಂಗ್'

ಬಜೆಟ್‌ನಲ್ಲಿ ಘೋಷಿಸಲಾದ ಮೂರು ಕಾರಿಡಾರ್‌ಗಳ ಕುರಿತಾದ ಪ್ರಸ್ತಾಪವನ್ನು ಮಮತಾ ಬ್ಯಾನರ್ಜಿ ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ. 'ಇದು ಕೇವಲ ಕಣ್ಣೊರೆಸುವ ತಂತ್ರ (Window Dressing). ಯಾವುದೇ ಸ್ಪಷ್ಟ ಮಾರ್ಗಸೂಚಿ ಅಥವಾ ಬದ್ಧತೆ ಈ ಯೋಜನೆಯಲ್ಲಿ ಕಾಣುತ್ತಿಲ್ಲ. ಒಟ್ಟಾರೆಯಾಗಿ ಇದು ದೇಶದ ಅರ್ಥವ್ಯವಸ್ಥೆ ಹಾಳುಮಾಡುವ ಬಜೆಟ್, ಸಾಮಾನ್ಯ ಜನರ ಸಂಕಷ್ಟಕ್ಕೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.