ರೋಗಿಯನ್ನು ದೆಹಲಿ ಆಸ್ಪತ್ರೆ ಸಾಗಿಸುತ್ತಿದ್ದ ಮೆಡಿಕಲ್ ಚಾರ್ಟೆಡ್ ವಿಮಾನ ಪತನ, ರಾಂಚಿಯಲ್ಲಿ ವಿಮಾನ ರೇಡಾರ್ ಸಂಪರ್ಕ ಕಡಿದುಕೊಂಡು ಪತನಗೊಂಡಿದೆ. ಈ ವಿಮಾನದಲ್ಲಿ ರೋಗಿ, ವೈದ್ಯರು , ಪೈಲೆಟ್ ಸೇರಿ 7 ಮಂದಿ ಇದ್ದರು. 

ರಾಂಚಿ (ಫೆ.23) ರಾಂಚಿಯಿಂದ ದೆಹಲಿ ಆಸ್ಪತ್ರೆಗೆ ರೋಗಿಯನ್ನು ಸ್ಥಳಾಂತರಿಸುತ್ತಿದ್ದ ಚಾರ್ಟೆಡ್ ವಿಮಾನ ಪತನಗೊಂಡ ಘಟನೆ ರಾಂಚಿಯ ಸಿಮಾರಿಯಾ ಬಳಿ ನಡೆದಿದೆ. ರಾಂಚಿಯಿಂದ ಸಂಜೆ 7.07ಕ್ಕೆ ಹೊರಟ ಚಾರ್ಟೆಡ್ ವಿಮಾನ 10ಗಂಟೆಗೆ ದೆಹಲಿ ತಲುಪಬೇಕಿತ್ತು. ಆದರೆ 7.34ರ ವೇಳೆಗೆ ವಿಮಾನ ರೇಡಾರ್ ಸಂಪರ್ಕ ಕಡಿತಗೊಂಡಿದೆ. ಇದೇ ವೇಳೆ ಸಿಮಾರಿಯಾ ಬಳಿಯ ಕಸಿಯಾಟು ಅರಣ್ಯದಲ್ಲಿ ವಿಮಾನ ಪತನಗೊಂಡ ಮಾಹಿತಿ ಲಭ್ಯವಾಗಿದೆ. ಈ ವಿಮಾನದಲ್ಲಿ ರೋಗಿ, ಇಬ್ಬರು ವೈದ್ಯರು, ಪೈಲೆಟ್ ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. 7 ಮಂದಿಯೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿಯ ರೆಡ್‌ಬರ್ಡ್ ಏರ್‌ವೇಸ್ ಪ್ರೈ.ಲಿ ಕಂಪನಿಯ ಬೀಚ್ ಕ್ರಾಫ್ಟ್ ಕಿಂಗ್ ಏರ್ BE9L ಚಾರ್ಟೆಡ್ ವಿಮಾನ ಪತನಗೊಂಡಿದೆ. ರಾಂಚಿಯ ಬಿರ್ಸಾ ಮುಂಡಾ ವಿಮಾನ ನಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ವಿಮಾನ ನಿಯಂತ್ರಣ ಕಳೆದುಕೊಂಡು ದುರ್ಘಟನೆ ಸಂಭವಿಸಿದೆ. ಈ ವಿಮಾನದಲ್ಲಿ ಪೈಲೆಟ್ ಆಗಿ ವಿವೇಕ್ ವಿಕಾಸ್ ಭಗತ್ ಹಾಗೂ ಸವರಾಜ್‌ದೀಪ್ ಸಿಂಗ್ ಕರ್ತವ್ಯದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 41 ವರ್ಷದ ರೋಗಿ ಸಂಜಯ್ ಕುಮಾರ್‌ನನ್ನು ರಾಂಚಿಯಿಂದ ದೆಹಲಿಗೆ ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು

ಅರಣ್ಯ ಪ್ರದೇಶದಲ್ಲಿ ವಿಮಾನ ಪತನಗೊಂಡಿರುವ ಕಾರಣ ಸ್ಥಳಕ್ಕೆ ಧಾವಿಸಲು ಕೆಲ ಹೊತ್ತು ಬೇಕಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅರಣ್ಯದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಇದು ನಾಪತ್ತೆಯಾಗಿರುವ ಬೀಚ್ ಕ್ರಾಫ್ಟ್ ಕಿಂಗ್ ಏರ್ BE9L ಚಾರ್ಟೆಡ್ ವಿಮಾನದ್ದೇ ಎಂದು ಹೇಳಲಾಗುತ್ತಿದೆ. ಇತ್ತ ವಿಮಾನ ಪತನ ಕುರತು ತನಿಖೆಗೆ ಆದೇಶ ನೀಡಲಾಗಿದೆ. ಪ್ರತಿಕೂಲ ಹವಾಮಾನ ಕಾರಣದಿಂದ ವಿಮಾನ ಪತನಗೊಂಡರುವ ಸಾಧ್ಯತೆ ಇದೆ ಎಂದು ಹೇಳಲಾಗತ್ತಿದೆ.

ಕಾಡಿನಲ್ಲಿ ವಿಮಾನ ಪತನಗೊಂಡಿರುವ ಕಾರಣ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಸ್ಥಳಕ್ಕೆ ಧಾವಿಸಲು ಮಾರ್ಗ ಇಲ್ಲದಂತಾಗಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಪತನಕ್ಕೆ ಸ್ಪಷ್ಟ ಕಾರಣ, ವಿಮಾನದಲ್ಲಿದ್ದ ಪ್ರಯಾಣಿಕರ ನಿಖರ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.