Asianet Suvarna News Asianet Suvarna News

ಬಿಜೆಪಿ ಸೇರಿದರೆ ನಿಮ್ಮ ಕೇಸ್‌ಗಳು ಖುಲಾಸೆಯಾಗುತ್ತದೆ ಎಂದು ಸಂದೇಶ ಬಂದಿದೆ: ಮನೀಶ್‌ ಸಿಸೋಡಿಯಾ

ಬಿಜೆಪಿಗೆ ಸೇರಿದರೆ ನಿಮ್ಮ ವಿರುದ್ಧದ ಕೇಸ್‌ಗಳನ್ನು ಖುಲಾಸೆಗೊಳಿಸಲಾಗುತ್ತದೆ ಎಂದು ಎಎಪಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಆರೋಪಿಸಿದ್ದಾರೆ. ಆದರೆ, ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ. 

break aap and join bjp manish sisodia claims he got message from saffron party ash
Author
Bangalore, First Published Aug 22, 2022, 1:55 PM IST

ದೆಹಲಿ ಮದ್ಯ ನೀತಿ ಹಗರಣದ ಸಿಬಿಐ ಕೇಸ್‌ನಲ್ಲಿ ಪ್ರಮುಖ ಆರೋಪಿ ಎನಿಸಿಕೊಂಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ತನಗೆ ಬಿಜೆಪಿಯಿಂದ ಆಫರ್‌ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ತಾನು ಆಮ್‌ ಆದ್ಮಿ ಪಕ್ಷ (ಎಎಪಿ) ತೊರೆದು ಬಿಜೆಪಿ ಸೇರಿದರೆ, ತನ್ನ ವಿರುದ್ಧದ ಎಲ್ಲ ಕೇಸ್‌ಗಳನ್ನು ಕೈ ಬಿಡುವುದಾಗಿ ಬಿಜೆಪಿ ತನಗೆ ಆಹ್ವಾನ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಮನೀಶ್‌ ಸಿಸೋಡಿಯಾ ಅವರ ಆರೋಪವನ್ನು ಬಿಜೆಪಿ ನಾಯಕ ಮನೋಜ್‌ ತಿವಾರಿ ನಿರಾಕರಿಸಿದ್ದು, ಎಎಪಿ ನಾಯಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಹಿನ್ನೆಲೆ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. "ನಾವು ಬೆಳಗ್ಗೆ ಎದ್ದಾಗ ಅವರು ಯಾವ ಹೊಸ ಕಥೆಗಳನ್ನು ತಿರುಗಿಸುತ್ತಾರೆ ಎಂದು ನಾವು ಆಶ್ಚರ್ಯ ಪಡುತ್ತೇವೆ" ಎಂದೂ ಅವರು ಹೇಳಿದರು.

ದೆಹಲಿಯ ಮದ್ಯ ಹಗರಣ ಪ್ರಕರಣದಲ್ಲಿ ಸಿಬಿಐ ರೇಡ್‌ ಮಾಡಿ, ಚಾರ್ಜ್‌ಶೀಟ್‌ನಲ್ಲಿ ತನ್ನ ಹೆಸರು ದಾಖಲಾದ ಬಳಿಕ ಸೋಮವಾರ ಬೆಳಗ್ಗೆ ಈ ಸಂಬಂಧ ಟ್ವೀಟ್‌ ಮಾಡಿರುವ ಮನೀಶ್‌ ಸಿಸೋಡಿಯಾ, ‘’ನನಗೆ ಬಿಜೆಪಿಯಿಂದ ಸಂದೇಶ ಬಂದಿದೆ - ಎಎಪಿಯನ್ನು ವಿಭಜಿಸಿ ಬಿಜೆಪಿಗೆ ಬನ್ನಿ. ನಂತರ, ನಾವು, ಸಿಬಿಐ ಹಾಗೂ ಇಡಿಯ ನಿಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಬಂದ್‌ ಆಗುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಆರೋಪಿಸಿದ್ದಾರೆ. ಅಲ್ಲದೆ, ತನ್ನ ವಿರುದ್ಧದ ಎಲ್ಲ ಕೇಸ್‌ಗಳು ಸುಳ್ಳಾಗಿದ್ದು, ಈ ಹಿನ್ನೆಲೆ ನೀವು ಏನಾದರೂ ಮಾಡಿಕೊಳ್ಳಿ ಎಂದು ಬಿಜೆಪಿಗೆ ಮನೀಶ್‌ ಸಿಸೋಡಿಯಾ ಸವಾಲು ಹಾಕಿದ್ದಾರೆ. 

ದೆಹಲಿ ಅಬಕಾರಿ ಹಗರಣ: 8 ಆರೋಪಿಗಳ ವಿರುದ್ಧ ಲುಕ್‌ಔಟ್‌ ನೋಟಿಸ್‌

ಅಲ್ಲದೆ, "ಬಿಜೆಪಿಗೆ ನನ್ನ ಪ್ರತ್ಯುತ್ತರ - ನಾನು ಮಹಾರಾಣಾ ಪ್ರತಾಪ್ ವಂಶಸ್ಥ ಹಾಗೂ ಒಬ್ಬ ರಜಪೂತ್‌. ನಾನು ಶಿರಚ್ಛೇದ ಮಾಡಿಸಿಕೊಳ್ಳಲು ಸಿದ್ಧನಿದ್ದೇನೆ, ಆದರೆ ಪಿತೂರಿಗಾರರು ಮತ್ತು ಭ್ರಷ್ಟರ ಮುಂದೆ ಎಂದಿಗೂ ತಲೆಬಾಗಲು ಸಾಧ್ಯವಿಲ್ಲ. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು. ನೀವು ಏನು ಬೇಕಾದರೂ ಮಾಡಿಕೊಳ್ಳಿ’’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮನೀಶ್‌ ಸಿಸೋಡಿಯಾ ವಿರುದ್ಧ ಮನೋಜ್‌ ತಿವಾರಿ ವಾಗ್ದಾಳಿ
ಮನೀಶ್‌ ಸಿಸೋಡಿಯಾ ವಿರುದ್ಧ ವಾಗ್ದಾಳಿ ನಡೆಸಿದ ಮನೋಜ್ ತಿವಾರಿ ಅವರು ತಮ್ಮನ್ನು ಮಹಾರಾಣಾ ಪ್ರತಾಪ್‌ಗೆ ಹೋಲಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. "ತನ್ನನ್ನು ಮಹಾರಾಣಾ ಪ್ರತಾಪ್‌ಗೆ ಹೋಲಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಹಾರಾಣಾ ಪ್ರತಾಪ್ ಜನರಿಗೆ ಮದ್ಯಪಾನ ಸೇವನೆ ಮಾಡಿಸುತ್ತಿದ್ದರಾ..? ನೀವು ಮೂಲೆ ಮೂಲೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದೀರಿ, ನೀವು ದೆಹಲಿಯ ಮಹಿಳೆಯರ ಕೂಗನ್ನು ನಿರ್ಲಕ್ಷಿಸುತ್ತಿದ್ದೀರಿ. ಮಹಾರಾಣಾ ಪ್ರತಾಪ್ ಒಂದು ಕಾಲದಲ್ಲಿ ಮಹಿಳೆಯರಿಗಾಗಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಿದ್ದರು" ಎಂದು ಅವರು ಹೇಳಿದರು.

ಹಾಗೂ, ಮಹಾರಾಣಾ ಪ್ರತಾಪ್ ಅವರನ್ನು ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಯೊಂದಿಗೆ ಹೋಲಿಕೆ ಮಾಡುತ್ತದ್ದೀರಾ..?  ಅಂತಹ ಭ್ರಷ್ಟರಿಗೆ ಆಪ್‌ನಲ್ಲಿ ಮಾತ್ರ ಸ್ಥಾನ ಸಿಗುತ್ತದೆ. ಅವರ ತಪ್ಪಿಗೆ ಅವರಿಗೆ ಶಿಕ್ಷೆಯಾಗುತ್ತದೆ. ಮನೀಶ್ ಸಿಸೋಡಿಯಾ ಅವರಂತಹ ತಪ್ಪಿತಸ್ಥರನ್ನು ಶಿಕ್ಷಿಸಲು ಬಿಜೆಪಿ ಕೆಲಸ ಮಾಡುತ್ತದೆ. ಬಿಜೆಪಿಯಲ್ಲಿ ಭ್ರಷ್ಟರಿಗೆ ಸ್ಥಾನವಿಲ್ಲ’’ ಎಂದೂ ಮನೋಜ್‌ ತಿವಾರಿ ಹೇಳಿದ್ದಾರೆ.  

ಸಿಬಿಐನಿಂದ ಲುಕ್‌ಔಟ್‌ ನೋಟಿಸ್‌, ಇದೇನಿದು ಗಿಮಿಕ್ ಮೋದಿಜೀ ಎಂದ ಮನೀಶ್‌ ಸಿಸೋಡಿಯಾ

ಈ ಮಧ್ಯೆ, ಮನೀಶ್‌ ಸಿಸೋಡಿಯಾ ಆಪಾದನೆಯನ್ನು ಬೆಂಬಲಿಸಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, ಬಿಜೆಪಿಯು ಪ್ರತಿಸ್ಪರ್ಧಿ ಪಕ್ಷಗಳ ನಾಯಕರ ಮೇಲೆ ತನಿಖೆಯ ಮೂಲಕ ಒತ್ತಡ ಹೇರಿದ 3 ಡಜನ್ ಉದಾಹರಣೆಗಳಿವೆ ಮತ್ತು ಅವರು ಪಕ್ಷವನ್ನು ಬದಲಿಸಿದ ನಂತರ ಪ್ರಕರಣಗಳನ್ನು ಕೈಬಿಟ್ಟಿದ್ದಾರೆ ಎಂದು ಹೇಳಿದರು. ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ಮತ್ತು ನಂತರ ಅದನ್ನು ಹಿಂದಕ್ಕೆ ತೆಗೆದುಕೊಂಡ ದೆಹಲಿಯ ಮದ್ಯ ನೀತಿಯಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಇತ್ತೀಚೆಗೆ ಹಿರಿಯ ಎಎಪಿ ನಾಯಕನ ನಿವಾಸ ಸೇರಿ ಹಲವು ಪ್ರದೇಶಗಳಲ್ಲಿ ರೇಡ್‌ ಮಾಡಿತ್ತು. 

Follow Us:
Download App:
  • android
  • ios