Iran - China ಪ್ರಯಾಣಿಕ ವಿಮಾನಕ್ಕೆ ಬಾಂಬ್ ಬೆದರಿಕೆ: ಭಾರತದಲ್ಲಿ ಲ್ಯಾಂಡಿಂಗ್ ನಿರಾಕರಣೆ
ಇರಾನ್ನಿಂದ ಚೀನಾಗೆ ಹೋಗುತ್ತಿದ್ದ ಪ್ರಯಾಣಿಕ ವಿಮಾನ ಭಾರತ ವಾಯು ಪ್ರದೇಶದಲ್ಲಿದ್ದಾಗ ಬಾಂಬ್ ಬೆದರಿಕೆ ಕರೆ ಬಂದಿದೆ. ಆದರೆ, ಭಾರತದಲ್ಲಿ ವಿಮಾನ ಲ್ಯಾಂಡ್ ಮಾಡಲು ನಿರಾಕರಿಸಿದ್ದು, ವಿಮಾನ ಚೀನಾಗೆ ತನ್ನ ಪ್ರಯಾಣ ಮುಂದುವರಿಸಿದೆ.
ಇರಾನಿನ ಪ್ರಯಾಣಿಕ ವಿಮಾನವು ಭಾರತದ ರಾಷ್ಟ್ರ ರಾಜಧಾನಿ ದೆಹಲಿಯನ್ನು ಸಮೀಪಿಸುತ್ತಿರುವಾಗ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ಹಾಗೂ, ಭಾರತದಲ್ಲಿ ಈ ವಿಮಾನವನ್ನು ಲ್ಯಾಂಡ್ ಮಾಡಲು ಅನುಮತಿ ನಿರಾಕರಿಸಿದೆ. ತಾಂತ್ರಿಕ ಕಾರಣಗಳಿಂದ ದೆಹಲಿ ಮತ್ತು ಜೈಪುರದಲ್ಲಿ ಇಳಿಯಲು ಅವಕಾಶವಿಲ್ಲದ ಕಾರಣ ಚೀನಾಕ್ಕೆ ತೆರಳುತ್ತಿದ್ದ ವಿಮಾನವು ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ತನ್ನ ಪ್ರಯಾಣವನ್ನು ಚೀನಾ ಕಡೆಯೇ ಮುಂದುವರಿಸಿದೆ ಎಂದು ತಿಳಿದುಬಂದಿದೆ.
ಇರಾನ್ ರಾಜಧಾನಿ ಟೆಹ್ರಾನ್ನಿಂದ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆಯ ಕುರಿತು ಬೆಳಿಗ್ಗೆ 9:20 ಕ್ಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆ ಭಾರತೀಯ ವಾಯುಪ್ರದೇಶದಲ್ಲಿದ್ದ ಕಾರಣ ಏರ್ ಟ್ರಾಫಿಕ್ ಕಂಟ್ರೋಲ್ ಇರಾನ್ - ಚೀನಾ ವಿಮಾನದೊಂದಿಗೆ ಮಾಹಿತಿ ಹಂಚಿಕೊಂಡಿದೆ. ಇನ್ನು, ಪಂಜಾಬ್ ಮತ್ತು ಜೋಧ್ಪುರ ವಾಯುನೆಲೆಗಳಿಂದ ಫೈಟರ್ ಜೆಟ್ಗಳು ವಿಮಾನವನ್ನು ಇಂಟರ್ಸೆಪ್ಟ್ ಮಾಡಲು ಹರಸಾಹಸ ಪಟ್ಟವು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇನ್ನು, ಬಾಂಬ್ ಬೆದರಿಕೆ ಕರೆ ಬಂದ ತಕ್ಷಣ ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಕ್ಷಣ ಅಲರ್ಟ್ ಆಗಿದ್ದು, ಲ್ಯಾಂಡಿಂಗ್ಗೆ ಅನುಮತಿ ಕೇಳಿದರು. ಆದರೆ ತಾಂತ್ರಿಕ ಕಾರಣಗಳಿಂದ ಅನುಮತಿ ಸಿಗದೆ ಆ ವಿಮಾನ ಜೈಪುರಕ್ಕೆ ತೆರಳಿದೆ. ಆದರೆ ಜೈಪುರದಲ್ಲೂ ಲ್ಯಾಂಡಿಂಗ್ಗೆ ಅನುಮತಿ ನೀಡಲಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿ: ಹಾರುತ್ತಿದ್ದ ಫ್ಲೈಟ್ಗೆ ಗುಂಡಿಕ್ಕಿದ ಬಂಡುಕೋರರು: ವಿಮಾನ ಸೀಳಿ ಬಂದು ವ್ಯಕ್ತಿಗೆ ತಾಗಿದ ಗುಂಡು
ಈ ಹಿನ್ನೆಲೆ ಟೆಹ್ರಾನ್ನಿಂದ ಚೀನಾಗೆ ಪ್ರಯಾಣಿಸುತ್ತಿರುವ ಪ್ರಯಾಣಿಕ ವಿಮಾನ ಈಗ ಚೀನಾದತ್ತ ಸಾಗುತ್ತಿದೆ ಎಂದು ಹೇಳಲಾಗಿದೆ.
ಈ ಘಟನೆಯ ಬಗ್ಗೆ ವಾಯುಸೇನೆ ಮಾಹಿತಿ ನೀಡಿದ್ದು, ‘’03 ಅಕ್ಟೋಬರ್ 2022 ರಂದು, ಇರಾನ್ ನೋಂದಣಿಯನ್ನು ಹೊಂದಿರುವ ವಿಮಾನಯಾನವು ಭಾರತೀಯ ವಾಯುಪ್ರದೇಶದ ಮೂಲಕ ಸಾಗುತ್ತಿರುವಾಗ ಬಾಂಬ್ ಭೀತಿಯ ಸೂಚನೆಯನ್ನು ಸ್ವೀಕರಿಸಲಾಯಿತು. ಈ ಹಿನ್ನೆಲೆ IAF ಫೈಟರ್ ವಿಮಾನಗಳಿಗೆ ತುರ್ತು ಆದೇಶ ನೀಡಲಾಯಿತು, ಅದು ವಿಮಾನವನ್ನು ಸುರಕ್ಷಿತ ದೂರದಲ್ಲಿ ಹಿಂಬಾಲಿಸಿತು. ಆ ವಿಮಾನಕ್ಕೆ ಜೈಪುರದಲ್ಲಿ ಮತ್ತು ನಂತರ ಚಂಡೀಗಢದಲ್ಲಿ ಇಳಿಯುವ ಆಯ್ಕೆಯನ್ನು ನೀಡಲಾಯಿತು. ಆದರೂ, ಪೈಲಟ್ ಎರಡು ವಿಮಾನ ನಿಲ್ದಾಣಗಳಲ್ಲಿ ಯಾವುದಾದರೂ ಒಂದು ಮಾರ್ಗವನ್ನು ಸಹ ತಿರುಗಿಸಲು ಇಷ್ಟವಿಲ್ಲ ಎಂದು ಘೋಷಿಸಿದರು’’ ಎಂದು ಹೇಳಿದೆ.
ಆದರೆ, ಸ್ವಲ್ಪ ಸಮಯದ ನಂತರ, ಬಾಂಬ್ ಭಯವನ್ನು ನಿರ್ಲಕ್ಷಿಸುವಂತೆ ಟೆಹ್ರಾನ್ನಿಂದ ಸೂಚನೆಯನ್ನು ಸ್ವೀಕರಿಸಲಾಯಿತು, ಅದರ ನಂತರ, ವಿಮಾನವು ತನ್ನ ಅಂತಿಮ ಗಮ್ಯಸ್ಥಾನದ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿತು. ನಾಗರಿಕ ವಿಮಾನಯಾನ ಸಚಿವಾಲಯ (MoCA) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ನೊಂದಿಗೆ ಜಂಟಿಯಾಗಿ ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ IAF ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ವಿಮಾನವು ಭಾರತೀಯ ವಾಯುಪ್ರದೇಶದಲ್ಲಿದ್ದಾಗ ವಾಯುಪಡೆಯೊಂದಿಗೆ ನಿಕಟವಾದ ರಾಡಾರ್ ಕಣ್ಗಾವಲು ಅಡಿಯಲ್ಲಿತ್ತು’’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿಗೆ ತೆರಳುತ್ತಿದ್ದ ಇಂಡಿಗೋ ಫ್ಲೈಟ್ನಲ್ಲಿ ಸ್ಮಾರ್ಟ್ಫೋನ್ಗೆ ಬೆಂಕಿ: DGCA ಮಾಹಿತಿ