Asianet Suvarna News Asianet Suvarna News

ಲಾಕ್ಡೌನ್‌ ವೇಳೆ ಬಿಜೆಪಿಯದ್ದು ಸೇವಾಯಜ್ಞ: ಮೋದಿ

ಲಾಕ್ಡೌನ್‌ ವೇಳೆ ಬಿಜೆಪಿಯದ್ದು ಸೇವಾಯಜ್ಞ: ಮೋದಿ| ಕಾರ್ಯಕರ್ತರ ಬಗ್ಗೆ ಮೋದಿ ಮೆಚ್ಚುಗೆ| ಹಬ್ಬಗಳು ಬರುತ್ತಿವೆ ಎಚ್ಚರದಿಂದಿರಿ ಎಂದು ಸಲಹೆ

BJP relief work during lockdown was biggest seva yagya says PM Modi
Author
Bangalore, First Published Jul 5, 2020, 9:52 AM IST

ನವದೆಹಲಿ(ಜು.05): ಕೊರೋನಾ ಹಿನ್ನೆಲೆ ದೇಶಾದ್ಯಂತ ಘೋಷಿಸಲಾಗಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೈಗೊಂಡ ಸೇವಾ ಕಾರ್ಯಗಳು ಇತಿಹಾಸದಲ್ಲೇ ಅತಿದೊಡ್ಡ ಸೇವಾಯಜ್ಞ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇದೇ ವೇಳೆ ಕೊರೋನಾ ಆತಂಕ ಇನ್ನೂ ದೂರವಾಗಿಲ್ಲ ಎಂದು ಎಚ್ಚರಿಸಿರುವ ಅವರು, ಹಬ್ಬದ ದಿನಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟುಎಚ್ಚರವಾಗಿರುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಲಾಕ್ಡೌನ್‌ ಅವಧಿಯಲ್ಲಿ ವಿವಿಧ ರಾಜ್ಯಗಳ ಬಿಜೆಪಿ ಘಟಕಗಳು ಹಮ್ಮಿಕೊಂಡಿದ್ದ ಸೇವಾ ಕಾರ್ಯಗಳ ಮಾಹಿತಿ ಪಡೆಯಲು ಹಮ್ಮಿಕೊಂಡಿದ್ದ ‘ಸೇವಾ ಹೀ ಸಂಘಟನ್‌’ ಆನ್‌ಲೈನ್‌ ಸಂವಾದದಲ್ಲಿ ಶನಿವಾರ ಮಾತನಾಡಿದ ಮೋದಿ, ‘ಎಲ್ಲರೂ ತಮ್ಮನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಗ, ಬಿಜೆಪಿ ಕಾರ್ಯಕರ್ತರು ತಮ್ಮನ್ನು ತಾವು ಬಡವರು ಮತ್ತು ಅಗತ್ಯವಿದ್ದವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇಂಥ ಕೆಲಸದಲ್ಲಿ ಹಲವರು ಪ್ರಾಣಾರ್ಪಣೆ ಕೂಡ ಮಾಡಿದ್ದಾರೆ’ ಎಂದು ಸ್ಮರಿಸಿದರು.

ಕೊರೋನಾ: ರಾಜ್ಯ ಬಿಜೆಪಿ ಸೇವೆಗೆ ಮೋದಿ ಭೇಷ್‌!

ಪಕ್ಷದ ಕಾರ್ಯಕರ್ತರು ದೇಶವ್ಯಾಪಿ ಹಮ್ಮಿಕೊಂಡಿದ್ದ ಪರಿಹಾರ ಮತ್ತು ನೆರವಿನ ಕೆಲಸಗಳು ಅದೆಷ್ಟುವಿಸ್ತಾರ ಮತ್ತು ಅಗಾಧವೆಂದರೆ ಅದು ಇತಿಹಾಸದಲ್ಲೇ ಅತಿದೊಡ್ಡ ಸೇವಾ ಯಜ್ಞವಾಗಿತ್ತು. ಸೇವೆ ಎಂಬುದು ಪಕ್ಷದ ಸಿದ್ಧಾಂತದಲ್ಲೇ ಅಡಕವಾಗಿದೆ. ಬಿಜೆಪಿಗೆ ಅಧಿಕಾರವೆಂಬುದು ಸೇವೆಗೆ ಒಂದು ಮಾಧ್ಯಮವೇ ಹೊರತೂ ಲಾಭದ್ದಲ್ಲ. ಪಕ್ಷವು ಬಡವರು ಮತ್ತು ಹಿಂದುಳಿದ ವರ್ಗದ ಸಬಲೀಕರಣಕ್ಕೆ ಶ್ರಮಿಸಿದೆ. 53 ದಲಿತ, 43 ಪರಿಶಿಷ್ಟಪಂಗಡ ಮತ್ತು 113ಕ್ಕೂ ಹೆಚ್ಚು ಒಬಿಸಿ ಸಂಸದರೇ ಇದಕ್ಕೆ ಉದಾಹರಣೆ ಎಂದರು.

ಇದೇ ವೇಳೆ ವಿವಿಧ ರಾಜ್ಯಗಳ ಬಿಜೆಪಿ ಘಟಕಗಳು, ತಾವು ಕೈಗೊಂಡ ಸೇವಾ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜ್‌ನಾಥ್‌ಸಿಂಗ್‌, ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಪಿಯೂಷ್‌ ಗೋಯಲ್‌ ಸೇರಿದಂತೆ ವಿವಿಧ ನಾಯಕರಿಗೆ ವಿವರಿಸಿದರು.

ಕೊರೋನಾ ಸೋಂಕಿನ ಅಬ್ಬರ: ದೇಶದಲ್ಲೀಗ ಕರ್ನಾಟಕ ನಂ.7 ರಾಜ್ಯ!

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಂಕಷ್ಟದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತೋರಿದ ಅಭೂತಪೂರ್ವ ನಾಯಕತ್ವವನ್ನು ಸ್ಮರಿಸಿದರು. ಈ ಸಮಯದಲ್ಲಿ ಕೈಗೊಂಡ ಕ್ರಮಗಳ ಮೂಲಕ ಮೋದಿ ಅವರು ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರರಾದರು ಎಂದು ಹೇಳಿದರು. ಜೊತೆಗೆ ದೇಶಾದ್ಯಂತ 4 ಲಕ್ಷ ಬಿಜೆಪಿ ಕಾರ್ಯಕರ್ತರು ವಿವಿಧ ಸೇವಾ ಕಾರ್ಯಗಳನ್ನು ಕೈಗೊಂಡಿದ್ದರು ಎಂದು ತಿಳಿಸಿದರು.

Follow Us:
Download App:
  • android
  • ios