ಹರಿಯಾಣ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕಿಯ ಪತಿ ಬಿಡುಗಡೆ ಮಾಡಿದ ವಾಟ್ಸಾಪ್ ಚಾಟ್ಗಳನ್ನು ಆಧರಿಸಿ, ಗಾಂಧಿ ಕುಟುಂಬ ಮತ್ತು ಕೆ.ಸಿ. ವೇಣುಗೋಪಾಲ್ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನವದೆಹಲಿ (ಮಾ.3): ಹರಿಯಾಣ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವದ್ರಾ ಅವರು ಕೆ.ಸಿ. ವೇಣುಗೋಪಾಲ್ ಅವರನ್ನು ಮುಂದಿಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಹರಿಯಾಣ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಪತಿ ಗೌರವ್ ಕುಮಾರ್ ಅವರು ಬಿಡುಗಡೆ ಮಾಡಿರುವ ವಾಟ್ಸಾಪ್ ಚಾಟ್ಗಳು ಈಗ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿವೆ. ಹರಿಯಾಣದ ಬಾವಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ಭರವಸೆಯ ಮೇಲೆ ಸುಮಾರು 7 ಕೋಟಿ ರೂಪಾಯಿಗೂ ಅಧಿಕ ಹಣದ ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಹುಲ್ ಗಾಂಧಿಗೆ ಅತ್ಯಂತ ಆಪ್ತರಾಗಿರುವ ಕೆ.ಸಿ. ವೇಣುಗೋಪಾಲ್ ಮತ್ತು ಪ್ರಿಯಾಂಕಾ ವದ್ರಾ ಅವರ ಆಪ್ತ ಸಹಾಯಕ (PA) ಸಾದಪ್ ಖಾನ್ ಅವರನ್ನು ಈ ವ್ಯವಹಾರಕ್ಕೆ 'ಫ್ರಂಟ್' ಆಗಿ ಬಳಸಿಕೊಳ್ಳಲಾಗಿದೆ ಎಂದು ಭಂಡಾರಿ ದೂರಿದ್ದಾರೆ.
"ಇದು ಗಾಂಧಿ ಕುಟುಂಬದ ಭ್ರಷ್ಟ ಸಿಂಡಿಕೇಟ್"
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್ ಭಂಡಾರಿ, "ಕಳೆದ ಕೆಲವು ದಿನಗಳಿಂದ ಇಡೀ ದೇಶವು ಕಾಂಗ್ರೆಸ್ನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಈ ಭ್ರಷ್ಟಾಚಾರದ ಕಿಂಗ್ಪಿನ್ ಗಾಂಧಿ-ವಾದ್ರಾ ಕುಟುಂಬವೇ ಆಗಿದೆ. ಸಾಮಾನ್ಯ ಕಾರ್ಯಕರ್ತರಲ್ಲದೆ, ತನ್ನದೇ ಪಕ್ಷದ ಹಿರಿಯ ನಾಯಕರಿಂದಲೂ ಹಣ ವಸೂಲಿ ಮಾಡುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ" ಎಂದು ಕಿಡಿಕಾರಿದರು.
ಚುನಾವಣಾ ಟಿಕೆಟ್ ನೀಡುವುದಕ್ಕಾಗಿ ದೊಡ್ಡ ಮೊತ್ತದ 'ಕಟ್ ಮನಿ' ಪಡೆಯಲಾಗುತ್ತಿದೆ. ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಐಷಾರಾಮಿ ಜೀವನಶೈಲಿಗೆ ಹಣ ಹೊಂದಿಸಲು ಈ ರೀತಿಯ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಹಗರಣದ ಪುರಾವೆಗಳು ಸಾರ್ವಜನಿಕವಾಗಿ ಲಭ್ಯವಿದ್ದರೂ, ಗಾಂಧಿ ಕುಟುಂಬದ ಸದಸ್ಯರು ಮೌನವಾಗಿರುವುದು ಅವರ ತಪ್ಪೊಪ್ಪಿಗೆಯ ಸಂಕೇತವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ವಾಟ್ಸಾಪ್ ಚಾಟ್ಸ್ ಬಹಿರಂಗ
ಹರಿಯಾಣ ಕಾಂಗ್ರೆಸ್ ನಾಯಕಿಯ ಪತಿ ಗೌರವ್ ಕುಮಾರ್ ಅವರು ಬಹಿರಂಗಪಡಿಸಿರುವ ಚಾಟ್ಗಳಲ್ಲಿ ಹಣದ ವ್ಯವಹಾರದ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ ಎಂದು ಹೇಳಲಾಗಿದೆ. ಇದು ಕೇವಲ ಒಬ್ಬ ಕಾರ್ಯಕರ್ತರಿಗೆ ಸಂಬಂಧಿಸಿದ ವಿಷಯವಲ್ಲ, ಇಡೀ ಕಾಂಗ್ರೆಸ್ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಸಾಕ್ಷಿ ಎಂದು ಬಿಜೆಪಿ ಹೇಳಿದೆ.


