ಬಿಜೆಪಿ ಕಚೇರಿ, ಅಭ್ಯರ್ಥಿ ಮನೆಗೆ ಬೆಂಕಿ, ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ!
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಆದರೆ ನಂದಿಗ್ರಾಮದಲ್ಲಿನ ಮಮತಾ ಸೋಲು ಹಾಗೂ ಟಿಎಂಸಿ ಭದ್ರಕೋಟೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಪರಿಣಾಣ ಇದೀಗ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಕಚೇರಿ, ಅಭ್ಯರ್ಥಿ ಮನೆಗೆ ಬೆಂಕಿ ಇಡಲಾಗಿದೆ.
ಕೋಲ್ಕತಾ(ಮೇ.02): ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನೇರಾನೇರಾ ಸ್ಪರ್ಧೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಬರೋಬ್ಬರಿ 218 ಸ್ಥಾನಗಳನ್ನು ಗೆದ್ದುಕೊಂಡು 3ನೇ ಬಾರಿಗೆ ಅಧಿಕಾರಕ್ಕೇರಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸೋಲು ಕಂಡಿದ್ದಾರೆ. ಇತ್ತ ಕೆಲ ಪ್ರದೇಶಗಳಲ್ಲಿ ಟಿಎಂಸಿ ಗೆಲುವನ್ನು ಬಿಜೆಪಿ ಕಸಿದುಕೊಂಡಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಬಂಗಾಳದ ಕೆಲ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಮಮತಾ ಬ್ಯಾನರ್ಜಿಗೆ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರ ಶುಭಾಶಯ!
ನಂದಿಗ್ರಾಮದಲ್ಲಿ ಮೊದಲು ಮಮತಾ ಬ್ಯಾನರ್ಜಿಗೆ ಗೆಲುವು ಎಂದಿದ್ದ ಚುನಾವಣಾ ಆಯೋಗ ಬಳಿಕ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ಗೆಲುವು ಎಂದು ಘೋಷಿಸಿತ್ತು. ಈ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಗರಂ ಆದ್ರು. ಇತ್ತ ಟಿಎಂಸಿ ಕಾರ್ಯಕರ್ತರ ಆಕ್ರೋಶ ಕೂಡ ಹೆಚ್ಚಾಯಿತು. ಪರಿಣಾಮ ಅರಂಬಾಗ್ನಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಇಡಲಾಗಿದೆ. ಈ ಹಿಂಸಾಚಾರಕ್ಕೆ ಟಿಎಂಸಿ ಗೂಂಡಾಗಳೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಇನ್ನು ಬೇಲಾಘಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ವಕೀಲ ಕೃಷ್ಣನಾಥ್ ಬಿಸ್ವಾಸ್ ಮನೆಗೂ ಬೆಂಕಿ ಇಡಲಾಗಿದೆ. ಬೆಜೆಪಿ ಏಳಿಗೆ ಸಹಿಸದ ತೃಣಮೂಲ ಕಾಂಗ್ರೆಸ್ ಗೂಂಡಾಗಳು ಹಿಂಸಾಚಾರ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಫಲಿತಾಂಶದ ಬಳಿಕ ಟಿಎಂಸಿ ಗೂಂಡಾಗಳು ಅರಂಬಾಗ್ನಲ್ಲಿರುವ ಬಿಜೆಪಿಯ ಪಕ್ಷದ ಕಚೇರಿಯನ್ನು ಸುಟ್ಟುಹಾಕಿದ್ದಾರೆ .. ಮುಂದಿನ 5 ವರ್ಷಗಳ ಕಾಲ ಬಂಗಾಳ ಅನುಭವಿಸಬೇಕಾಗಿರುವುದು ಇದೇನಾ ? ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವೀಟ್ ಮಾಡಿದ್ದಾರೆ.