'ನನ್ನ ಚಪ್ಪಲಿ ಎತ್ತೋಕೆ ಲಾಯಕ್ಕಿಲ್ಲದವರೆಲ್ಲ ಇಂದು ಸಚಿವರಾಗಿದ್ದಾರೆ..' ಸಂಸದ ವರುಣ್ ಗಾಂಧಿ ಮಾತು!
ಫಿಲಿಬಿಟ್ನ ಬಿಜೆಪಿ ಸಂಸದ ವರುಣ್ ಗಾಂಧಿ ಮತ್ತೊಮ್ಮೆ ಅಹಂಕಾರದ ಮಾತುಗಳಿಂದ ಸುದ್ದಿಯಾಗಿದ್ದಾರೆ. ಭ್ರಷ್ಟಾಚಾರ ಹಾಗೂ ರಾಜ್ಯ ನಾಯಕರನ್ನು ಟೀಕೆ ಮಾಡುವ ಭರದಲ್ಲಿ ಟೀಕಾತ್ಮಕ ಮಾತುಗಳನ್ನಾಡಿದ್ದಾರೆ.
ಲಕ್ನೋ (ಏ.18): ಫಿಲಿಬಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಮತ್ತೊಮ್ಮೆ ತಮ್ಮ ಮಾತುಗಳಿಂದ ಸುದ್ದಿಯಾಗಿದ್ದಾರೆ. ಉತ್ತರ ಪ್ರದೇಶದ ಫಿಲಿಬಿಟ್ನಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವರುಣ್ ಗಾಂಧಿ ರಾಜ್ಯ ನಾಯಕರು ಹಾಗೂ ಭ್ರಷ್ಟಾಚಾರವನ್ನು ಟೀಕೆ ಮಾಡಿದರು. ನನ್ನ ಚಪ್ಪಲಿಯನ್ನು ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಇಂದು ಐದೈದು ವಾಹಗಳನ್ನು ಹೊಂದಿರುವ ಬೆಂಗಾವಲು ಪಡೆಗಳಲ್ಲಿ ತಿರುಗಾಡುತ್ತಿದ್ದಾರೆ. ನಾವು ಕಳೆದ 35 ವರ್ಷಗಳಿಂದ ಫಿಲಿಬಿಟ್ನಲ್ಲಿ ರಾಜಕಾರಣ ಮಾಡುತ್ತಿದ್ದೇವೆ. ನನ್ನ ತಾಯಿ (ಮನೇಕಾ ಗಾಂಧಿ) ದೇಶದ ಅಗ್ರ ಸಂಸದರಲ್ಲಿ ಒಬ್ಬರು. ನಾನು ಮೂರು ಬಾರಿಯ ಸಂಸದ. ನಾನೇನಾದರೂ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆಯೇ? ನಮಗೇನಾದರೂ ದೊಡ್ಡ ಮನೆಗಳಿವೆಯೇ? ಎಂದು ಜನರನ್ನು ಪ್ರಶ್ನೆ ಮಾಡಿದ್ದಾರೆ. ಇಂದು ನನ್ನ ಚಪ್ಪಲಿ ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಐದೈದು ವಾಹಗಳಿರುವ ಬೆಂಗಾವಲು ಪಡೆಯೊಂದಿಗೆ ತಿರುಗಾಡುತ್ತದ್ದಾರೆ. ಈ ಎಲ್ಲಾ ಸಚಿವರುಗಳು ತಮಗೆ ಬೆಂಬಲ ನೀಡಿ ಎಂದು ಭಿಕ್ಷೆ ಬೇಡುತ್ತಿದ್ದರು. ತಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿಕೊಲ್ಳುತ್ತಿದ್ದರು. ಈಗ ಅವರಿಗೆಲ್ಲ ನನ್ನ ಮುಂದೆ ಮಾತನಾಡುವ ಧೈರ್ಯ ಕೂಡ ಇರಲಿಕ್ಕಿಲ್ಲ ಎಂದು ವರುಣ್ ಗಾಂಧಿ ಹೇಳಿದ್ದಾರೆ.
ಇತ್ತೀಚೆಗೆ ಹಲವಾರು ವಿಚಾರಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶವನ್ನು ತೀವ್ರವಾಗಿ ಟೀಕಿಸಿರುವ ವರುಣ್ ಗಾಂಧಿ, ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಇಂದು ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ಜನರನ್ನು ಲೂಟಿ ಮಾಡಲು ಇಳಿದಿವೆ ಎಂದು ಹೇಳಿದ್ದಾರೆ.
ಇಂದು ಕೆಲವರಿಗೆ ಮೂರು ಅಂತಸ್ತಿನ ಮನೆಗಳನ್ನು ಉಳಿದುಕೊಳ್ಳಲು ನೀಡಲಾಗಿದೆ. ಇನ್ನುಳಿದ ಕೆಲವರು ಈಗಲೂ ಕೂಡ ತಮ್ಮ ಮನೆಗಳಿಗಾಗಿ ಕಾಯುತ್ತಿದ್ದಾರೆ. ಇದಕ್ಕೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣ ಎಂದಿದ್ದಾರೆ.ಇದೆಲ್ಲವೂ ಗುಲಾಮಗಿರಿಗಿಂತ ಕಡಿಮೆಯಿಲ್ಲ, ಚುನಾವಣೆಗಳು ಬಂದಾಗ ಜಾತಿ, ಧರ್ಮದ ಭಾವನೆಗಳಿಗೆ ಮಣಿದು ಮತ ಹಾಕುತ್ತಾರೆ.ಅವರು [ರಾಜಕಾರಣಿಗಳು] ನಿಮ್ಮ ಜೇಬು ದೋಚುತ್ತಿದ್ದಾರೆ,''ಎಂದು ಸಂಸದರು ಹೇಳಿದರು.
ಬಡವರ ಅನ್ನ ಕಸಿದು ರಾಷ್ಟ್ರಧ್ವಜ ಕೊಳ್ಳಲು ಒತ್ತಾಯಿಸುವುದು ನಾಚಿಕೆಗೇಡು: ವರುಣ್ ಗಾಂಧಿ ಟೀಕೆ
35 ವರ್ಷವಾಗಿ ಇಂದಿಗೂ ನಾವು ಒಂದು ಕೋಣೆಯ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಹಾಗೇನಾದರೂ ನನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಇಷ್ಟು ಹೊತ್ತಿಗೆ ದೊಡ್ಡ ದೊಡ್ಡ ಮನೆ ಕಟ್ಟಿಕೊಂಡಿರುತ್ತಿದ್ದ. ನಾನು ಹೇಳುತ್ತಿರುವುದರಲ್ಲಿ ಸತ್ಯ ಇದೆಯೋ? ಇಲ್ಲವೋ? ಎನ್ನುವುದನ್ನು ನೀವೇ ನೋಡಿ ಎಂದು ಹೇಳಿದರು.
ಬಿಜೆಪಿ ತೊರೆವ ವದಂತಿ ನಡುವೆಯೇ ನೆಹರೂ ಹೊಗಳಿದ ವರುಣ್ ಗಾಂಧಿ
ಇಂದು ಒಂದು ಸಮಾಜವನ್ನು ಬೆದರಿಸುತ್ತಿದ್ದಾರೆ: ಭಾರತ ಯಾವಾಗ ಗಟ್ಟಿಯಾಗುತ್ತದೆ ಎಂದರೆ, ಹಿಂದು ಹಾಗೂ ಮುಸ್ಲಿಮರು ಒಟ್ಟಾಗಬೇಕು. ನಾನೊಬ್ಬ ಹಿಂದು. ಚುನಾವಣೆ ಬಂದಾಗ ತಲೆ ಮೇಲೆ ಟೋಪಿ ಹಾಕಿಕೊಂಡು ವೋಟ್ ಕೇಳುವವರ ಪೈಕಿ ನಾನಲ್ಲ. ಹಾಗಿದ್ದರೂ ನಾನು ಬಹಳ ವಿಶ್ವಾಸದಿಂದ ಇಲ್ಲಿ ಹೇಳುತ್ತಿದ್ದೇನೆ. ಇಂದು ದೇಶದಲ್ಲಿ ಒಂದು ಸಮಾಜವನ್ನು ಬೆದರಿಸಲಾಗುತ್ತಿದೆ. ಇದು ಸರಿಯಲ್ಲ. ದೇಶದ ಹಿತಕ್ಕೆ ಒಳ್ಳೆಯದಲ್ಲ. ನಾನು ಯಾವುದೇ ಅತೀಕ್ ಅಹ್ಮದ್ನ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಾಮಾನ್ಯ ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಎಲ್ಲರೂ ಒಟ್ಟಾಗಿ ಬಂದಾಗ ಮಾತ್ರವೇ ಹಿಂದುಸ್ತಾನ ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ.