Asianet Suvarna News Asianet Suvarna News

ಬಿಜೆಪಿ ಲಿಂಗಾಯಿತ ಕೇಂದ್ರಿತ ಪಕ್ಷವಲ್ಲ: ಸಿಎಂ ಬೊಮ್ಮಾಯಿ

*  ಇಂಡಿಯಾ ಟುಡೇ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ
*  ನನ್ನ ನೇತೃತ್ವದಲ್ಲೇ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವೆ
*  ಬಿ.ಎಸ್‌.ಯಡಿಯೂರಪ್ಪ ಏಕಾಂಗಿಯಾಗಿ ಪಕ್ಷದ ಕಟ್ಟಿದ ನಾಯಕ
 

BJP is Not a  Lingayat Centric Party in Karnataka Says CM Basavaraj Bommai grg
Author
Bengaluru, First Published Oct 9, 2021, 8:07 AM IST

ನವದೆಹಲಿ(ಅ.09): ಕರ್ನಾಟಕದಲ್ಲಿ(Karnataka) ಭಾರತೀಯ ಜನತಾ ಪಕ್ಷ(ಬಿಜೆಪಿ) ಲಿಂಗಾಯಿತ ಆಧಾರಿತ ಪಕ್ಷವಾಗಿ ಉಳಿದಿಲ್ಲ. ಬದಲಾಗಿ ಅದು ಎಲ್ಲಾ ಸಮುದಾಯಗಳನ್ನು ಒಳಗೊಂಡ ಪಕ್ಷವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಭಿಪ್ರಾಯಪಟ್ಟಿದ್ದಾರೆ.

2021ನೇ ಸಾಲಿನ ಇಂಡಿಯಾ ಟುಡೇ ಸಮಾವೇಶದಲ್ಲಿ(India Today Conference) ಭಾಗಿಯಾಗಿ ಶುಕ್ರವಾರ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಲ್ಲಿ(North Karnataka) ಬಿಜೆಪಿಯಿಂದ ಆಯ್ಕೆಯಾಗುವ ಶಾಸಕರು ಮತ್ತು ಸಂಸದರು ಲಿಂಗಾಯಿತರಾಗಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ(BJP) ಲಿಂಗಾಯಿತ(Lingayat) ಕೇಂದ್ರಿತ ಪಕ್ಷ ಎಂಬ ಹಣೆಪಟ್ಟಿ ಅಂಟಿಕೊಂಡಿದೆ. ಆದರೆ ಯಾವುದೇ ಒಂದು ಸಮುದಾಯದ ಬೆಂಬಲದಿಂದ ಪಕ್ಷವೊಂದು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪಕ್ಷವೊಂದು ಅಧಿಕಾರಕ್ಕೆ ಬರಲು ಆ ಪಕ್ಷಕ್ಕೆ ಪರಿಶಿಷ್ಟ ಜಾತಿ, ಪಂಗಡ, ಒಕ್ಕಲಿಗರು ಸೇರಿದಂತೆ ಎಲ್ಲಾ ಸಮುದಾಯದ ಬೆಂಬಲ ಬೇಕೇಬೇಕು. ಹೀಗಾಗಿ ಬಿಜೆಪಿಯು ಎಲ್ಲಾ ಸಮುದಾಯಗಳನ್ನು ಒಳಗೊಂಡ ಪಕ್ಷವಾಗಿದೆ’ ಎಂದರು.

ದಿಲ್ಲಿ ಅಪ್ಪಣೆ ತಪ್ಪಲ್ಲ:

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ತಮ್ಮ ನಿರ್ಧಾರಗಳಿಗೆ ದೆಹಲಿಯತ್ತ ಮುಖಮಾಡುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ ‘ಬಿಜೆಪಿಯಲ್ಲಿ ಪ್ರಜಾಪ್ರಭುತ್ವದ(Democracy) ಶ್ರೇಷ್ಠತೆ ಗಟ್ಟಿಯಾಗಿದೆ. ಪ್ರಬಲ ಕೇಂದ್ರ ಮತ್ತು ಪ್ರಬಲ ರಾಜ್ಯ ಎಂಬುದು ನಮ್ಮ ಪಕ್ಷದ ಸಿದ್ಧಾಂತ. ಆಡಳಿತಕ್ಕೆ ಸಂಬಂಧಿಸಿದ ವಿಷಯದಲ್ಲಿ ದೆಹಲಿಯತ್ತ ನೋಡುವ ಪ್ರಶ್ನೆಯೇ ಇಲ್ಲ. ಆದರೆ ಕೆಲವೊಂದು ವಿಷಯ ಸಂಬಂಧ ನಾವು ಸಮಾಲೋಚನೆ ನಡೆಸಲೇಬೇಕಾಗುತ್ತದೆ. ಸಮಾಲೋಚನೆ ನಡೆಸುವುದು, ನೀವು ಎಲ್ಲದಕ್ಕೂ ದೆಹಲಿಯತ್ತ(Delhi) ಮುಖ ಮಾಡುತ್ತೀರಿ ಎಂಬುದರ ಸೂಚಕವಲ್ಲ. ಜೊತೆಗೆ ಸಮಾಲೋಚನೆ ನಿರಂತರ ಪ್ರಕ್ರಿಯೆ ಎಂದರು.

ಬೊಮ್ಮಾಯಿ ಮೂಲಕ ಕೇಂದ್ರ ಸಚಿವರ ಮುಂದೆ ಮಹತ್ವದ ಬೇಡಿಕೆ ಇಟ್ಟ ಸುಧಾಕರ್!

ಬಿ.ಎಸ್‌.ವೈ ಗುಣಗಾನ:

ಕರ್ನಾಟಕದಲ್ಲಿ ಏಕಾಂಗಿಯಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ(BS Yediyurappa) ಅವರು, ಪಕ್ಷಕ್ಕಾಗಿ ಹಲವು ಹೋರಾಟಗಳನ್ನು ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸ್ಥಾನ ತ್ಯಾಗದ ಮೂಲಕ ಅವರು ಮುಂದಿನ ಪೀಳಿಗೆಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಸಂಸ್ಕೃತಿಯನ್ನು ಬಿಎಸ್‌ವೈ ಅವರು ಪಕ್ಷದಲ್ಲಿ ಜಾರಿಗೆ ತಂದರು ಎಂದು ಬೊಮ್ಮಾಯಿ ಬಣ್ಣಿಸಿದರು.

ಅಧಿಕಾರ ಪೂರೈಸುವೆ:

ನಾನು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸುವೆ. ಅಷ್ಟುಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ(Narendra Modi), ಗೃಹ ಸಚಿವ ಅಮಿತ್‌ ಶಾ(Amit Shah) ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಈ ಹಿಂದೆಲ್ಲಾ ನಡೆಯುತ್ತಿದ್ದಂತೆ ರಾತ್ರೋರಾತ್ರಿ ಸರ್ಕಾರವನ್ನು(Government) ಪತನಗೊಳಿಸುವ ಭೀತಿ ಈಗ ರಾಜ್ಯದಲ್ಲಿ ಇಲ್ಲ ಎಂದರು.

ಲಾಬಿ ಇಲ್ಲ:

ಈ ಹಿಂದೆ ರಾಜ್ಯದಲ್ಲಿ ಅಬಕಾರಿ, ಗ್ರಾನೈಟ್‌, ಶಿಕ್ಷಣ, ಗಣಿ ಲಾಬಿ ಇತ್ತು. ಈ ಎಲ್ಲಾ ಲಾಬಿಳು ಹಣಬಲದ ಮೂಲಕ ಸರ್ಕಾರವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿದ್ದವು. ಆದರೆ ಅಂಥ ಯತ್ನ ನಡೆದಾಗಲೆಲ್ಲಾ ರಾಜ್ಯದ ಜನತೆ ಅಂಥ ಸರ್ಕಾರಗಳನ್ನು ಉರುಳಿಸಿ ಹೊಸ ಪ್ರಜಾಪ್ರಭುತ್ವ ಪರ ಸರ್ಕಾರವನ್ನು ಸ್ಥಾಪಿಸಿದ್ದಾರೆ. ಅದುವೆ ಕರ್ನಾಟಕ ರಾಜಕೀಯದಲ್ಲಿ ಬೆಳ್ಳಿ ಕಿರಣ ಎಂದು ಅವರು ವಿಶ್ಲೇಷಿಸಿದ್ದಾರೆ.

ಯಡಿಯೂರಪ್ಪ ಆಪ್ತನಿ​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ

ನೀಟ್‌ಗೆ ಬೊಮ್ಮಾಯಿ ಬಹುಪರಾಕ್‌:

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)ಯು(NEET) ಮುಂದುವರಿಯಬೇಕು ಎಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈ ವೈದ್ಯಕೀಯ ಪರೀಕ್ಷೆಯನ್ನು ವಿರೋಧಿಸುತ್ತಿರುವ ತಮಿಳುನಾಡು(Tamilnadu) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ಕಾಲೇಜು ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಪ್ರವೇಶಾತಿ ಪರೀಕ್ಷೆಯನ್ನು ಕರ್ನಾಟಕದಂಥ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಆದರೆ ತಮಿಳುನಾಡು ರಾಜ್ಯ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದೇ ಇಲ್ಲ. ನೀಟ್‌ ಪರೀಕ್ಷೆಯು ಕರ್ನಾಟಕದ ಸಿಇಟಿಯ ಮುಂದುವರಿದ ಭಾಗವಾಗಿದೆ ಅಷ್ಟೇ ಎಂದು ಹೇಳಿದರು.

ಜಿಎಸ್‌ಟಿಗೆ ವಿರೋಧ ಸರಿಯಲ್ಲ:

ತೆರಿಗೆ ಸುಧಾರಣೆ ನೀತಿಯಾದ ಸರಕು ಮತ್ತು ಸೇವಾ ತೆರಿಗೆಯಿಂದ(GST) ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ನಿರ್ಬಂಧಿಸಿದೆ ಎಂಬ ವಿಪಕ್ಷಗಳ ಆರೋಪ ನಿರಾಧಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ತೆರಿಗೆ ವ್ಯವಸ್ಥೆಯಲ್ಲಿ ಏಕರೂಪತೆ ತರಲು ಈ ಸುಧಾರಣೆ ಮಾಡಲಾಗಿದೆ. ಪ್ರತಿಯೊಂದು ಆರ್ಥಿಕ ಚಟುವಟಿಕೆಗಳಿಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಈ ಹಿಂದೆ ಕೇಂದ್ರೀಯ ತೆರಿಗೆ ನೀತಿಗಳ ಬಗ್ಗೆ ಪ್ರಸ್ತಾಪಿಸಲು ಅಥವಾ ಧ್ವನಿ ಎತ್ತಲು ವೇದಿಕೆಯಿರಲಿಲ್ಲ. ಆದರೆ ಇದೀಗ ಆ ವೇದಿಕೆ ಇದೆ ಎಂದು ಹೇಳಿದರು.
 

Follow Us:
Download App:
  • android
  • ios