ಭರ್ಜರಿ ಮೀನೂಟಕ್ಕೆ ಕೇವಲ 5 ರೂಪಾಯಿ ಮಾತ್ರ. ಇನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ 3000 ರೂಪಾಯಿ ಜಮೆ ಆಗಲಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಬಂಪರ್ ಕೊಡುಗೆ ಘೋಷಿಸಿದ್ದಾರೆ.
ಕೋಲ್ಕತಾ (ಮೇ.25) ಕರ್ನಾಟಕದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ, ತೆಲಂಗಾಣ ಸೇರಿದಂತೆ ಹಲವೆಡೆ ಮಹಿಳೆಯರಿಗೆ ಪ್ರತಿ ತಿಂಗಳು ಇಂತಿಷ್ಟು ಹಣ ಸರ್ಕಾರ ನೀಡುತ್ತಿದೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರದಿ. ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರಮುಖ ಸಭೆ ನಡೆಸಿದ ಮಹತ್ವದ ಆದೇಶ ಹೊರಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇನ್ನು ಭರ್ಜರಿ ಮೀನು ಊಟಕ್ಕೆ ಕೇವಲ 5 ರೂಪಾಯಿ ಮಾತ್ರ. ಇತ್ತ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 3000 ರೂಪಾಯಿ ಜಮೆ ಮಾಡಲಾಗುತ್ತದೆ.

ಬಂಗಾಳದಲ್ಲಿ ಎಲ್ಲೆ ಹೋದರೂ 5 ರೂಪಾಯಿ
ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 400 ಕ್ಯಾಂಟೀನ್ ಮೂಲಕ ಮೀನೂಟ ನೀಡಲಾಗುತ್ತದೆ. ಸರ್ಕಾರದ ಕ್ಯಾಂಟೀನ್ಗಳಲ್ಲಿ ಕೇವಲ 5 ರೂಪಾಯಿಗೆ ಮೀನೂಟ ನೀಡಲು ಸುವೇಂದು ಅಧಿಕಾರಿ ಆದೇಶಿಸಿದ್ದಾರೆ. ಇದರಿಂದ ಬಡವರು , ಜನಸಾಮಾನ್ಯರಿಗೆ ಅತೀ ಕಡಿಮೆ ದರದಲ್ಲಿ ಮೀನೂಟ ಲಭ್ಯವಾಗಲಿದೆ. ಮೀನೂಟದಲ್ಲಿ ಕನಿಷ್ಠ 2 ಮೀನು ಇರಲಿದೆ.
ಅನ್ನಪೂರ್ಣಯೋಜನೆ
ಬಂಗಾಳದಲ್ಲಿ ಸುವೇಂದು ಅದಿಕಾರಿ ಅನ್ನಪೂರ್ಣ ಯೋಜನೆ ಆರಂಭಿಸಿದ್ದಾರೆ. ವಿಶೇಷ ಅಂದರೆ ಮಮತಾ ಬ್ಯಾನರ್ಜಿ ಸರ್ಕಾರ ನೀಡುತ್ತಿದ್ದ ಲಕ್ಷ್ಮಿ ಬಂದರ್ ಯೋಜನೆ ಮುಂದುವರಿಯಲಿದೆ ಎಂದಿದ್ದಾರೆ. ಸದ್ಯ ಅನ್ನಪೂರ್ಣ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಲಾಗುತ್ತದೆ. ಇದಕ್ಕಾಗಿ ಮಹಿಳೆಯರು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಮುಖ್ಯಮಂತ್ರಿ ಬೋಲೋ ಕಾರ್ಯಕ್ರಮ ಬಂದ್
ಮಮತಾ ಬ್ಯಾನರ್ಜಿ ಸರ್ಕಾರದ ಮುಖ್ಯಮಂತ್ರಿ ಬೋಲೋ ಕಾರ್ಯಕ್ರಮ ಬಂದ್ ಮಾಡಲಾಗಿದೆ. ಇದರ ಬದಲು ಅಪ್ನಾರ್ ಸರ್ಕಾರ್ಕೆ ಬೊಲುನ್ ( ನಿಮ್ಮ ಸರ್ಕಾರಕ್ಕೆ ಹೇಳಿ) ಹೊಸ ಕಾರ್ಯಕ್ರಮ ಆರಂಭಿಸಲಾಗಿದೆ. ಇದೇ ರೀತಿ ಹಲವು ಕಾರ್ಯಕ್ರಮಗಳ ರೂಪುರೇಶ್ ಬದಲಿಸಿ ಆಡಳಿತಕ್ಕೆ ಚುರುಕು ನೀಡಲಾಗಿದೆ.
ಯೋಗಾ ಉತ್ಸವಕ್ಕೆ ತಯಾರಿ
ಮಮತಾ ಬ್ಯಾನರ್ಜಿ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಹೆಚ್ಚಿನ ಒತ್ತು ನೀಡಿರಲಿಲ್ಲ ಎಂಬ ಆರೋಪ ಬಿಜೆಪಿ ಮಾಡುತ್ತಲೇ ಬಂದಿದೆ. ಇದೀಗ ಸುವೇಂದು ಅಧಿಕಾರಿ ಯೋಗಾ ದಿನಾಚರಣೆಯನ್ನು ಉತ್ಸವ ಮಾಡಲು ಮುಂದಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಹಾಗೂ ಎಲ್ಲಾ ತಾಲೂಕುಗಳಲ್ಲೂ ಯೋಗ ದಿನಾಚರಣೆ ಆಚರಿಸಲು ಮುಂದಾಗಿದ್ದಾರೆ.


