Loudspeaker Ban in Mosque ಮುಂಬೈನಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಬಿಜೆಪಿ ಆಗ್ರಹ!
ಮುಂಬೈನ ಮಸೀದಿಗಳಲ್ಲಿ ಅಜಾನ್ ವೇಳೆ ಧ್ವನಿವರ್ಧಕ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಹೋರಾಟ ಆರಂಭಿಸಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿಯನ್ನೂ ಮಾಡಿದೆ. ಆದರೆ, ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಈ ವಿಚಾರದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಮಾತ್ರವೇ ಬದ್ಧ ಎಂದಿದ್ದಾರೆ.
ಮುಂಬೈ (ಏ.1): ಮುಂಬರುವ ಬಿಎಂಸಿ ಚುನಾವಣೆಯ (BMC elections) ವೇಳೆ ಹಿಂದುತ್ವದ ವಿಚಾರದಲ್ಲಿ ಅದರ ಹಿಂದಿನ ಮಿತ್ರ ಪಕ್ಷವಾದ ಶಿವಸೇನೆಯ (Shiv Sena) ಅಗ್ನಿಪರೀಕ್ಷೆ ಮಾಡಲು ಮುಂದಾಗಿರುವ ಬಿಜೆಪಿ, ಮುಂಬೈನ ಮಸೀದಿಗಳಲ್ಲಿ (Mumbai) ಅಜಾನ್ ಗೆ (Azan) ಧ್ವನಿವರ್ಧಕ ಬಳಕೆ ಮಾಡಲು ನಿಷೇಧಿಸುವಂತೆ ಆಗ್ರಹಿಸಿದೆ. ಈ ಕುರಿತಂತೆ ಬಿಜೆಪಿ ಶಾಸಕ ಪ್ರಸಾದ್ ಲಾಡ್ (BJP legislator Prasad Lad ) ಗುರುವಾರ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಪದ್ಧತಿಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Deputy Chief Minister and veteran NCP leader Ajit Pawar), ನಮ್ಮ ಸರ್ಕಾರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಮಾತ್ರವೇ ಪಾಲಿಸುತ್ತದೆ. ಹಾಗೇನಾದರೂ ಅಗತ್ಯವಿದ್ದಲ್ಲಿ ನಾವು ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಪ್ರಸ್ತುತ ಸನ್ನಿವೇಶದಲ್ಲಿ ಅಜಾನ್ ಕುರಿತಾಗಿ ನಾನು ಯಾವುದೇ ಕೋರ್ಟ್ ಆದೇಶವನ್ನು ಓದಿಲ್ಲ. ಈ ಕುರಿತಾಗಿ ನಾನು ಮಾಹಿತಿಯನ್ನು ಪಡೆದುಕೊಳ್ಳಲಿದ್ದು, ನ್ಯಾಯಾಂಗ ನಿಂದನೆ ಆಗದೇ ಇರುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ತಮ್ಮ ವಾದವನ್ನು ಪುಷ್ಟೀಕರಿಸಲು, ಮಾಜಿ ಎನ್ಸಿಪಿ ನಾಯಕ ಲಾಡ್, ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ (Devendra Fadnavis) ಅವರ ವಿಶ್ವಾಸ ಗಳಿಸಿದ್ದು, ಹಳೆಯ ದಿನಗಳಲ್ಲಿ 'ಆಜಾನ್' ಮೂಲಕ ಸಮಯವನ್ನು ತಿಳಿಲಾಗುತ್ತಿತ್ತು. ಅದಕ್ಕಾಗಿ ಧ್ವನಿವರ್ಧಕಗಳನ್ನು ಬಳಕೆ ಮಾಡುತ್ತಿದ್ದರು. ಆದರೆ, ಪ್ರಸ್ತುತ ಸಮಯವನ್ನು ನೋಡಲು ಪ್ರತಿಯೊಬ್ಬರೂ ಕೈಗಡಿಯಾರಗಳು ಮತ್ತು ಮೊಬೈಲ್ಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಹಿಂದೂ ಹಬ್ಬಗಳನ್ನು ಮಾತ್ರ ಎಲ್ಲರೂ ಏಕೆ ವಿರೋಧಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಧ್ವನಿವರ್ಧಕಗಳ ಮೂಲಕ ಆಜಾನ್ ಮಾಡುವ ಸಾಂಪ್ರದಾಯಿಕ ಕರೆಯನ್ನು ಬಿಜೆಪಿ ಕೊನೆಗೊಳಿಸುತ್ತದೆ ಎಂದು ಪುನರುಚ್ಚರಿಸಿದರು. ಈ ಉದ್ದೇಶಕ್ಕಾಗಿ ಈಗ ಧ್ವನಿವರ್ಧಕಗಳ ಬಳಕೆ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳೆದ ವಾರ ತಮ್ಮ ಹಿಂದುತ್ವವನ್ನು ಪ್ರಶ್ನಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ಚುನಾವಣೆ ಗೆಲ್ಲಲು ಬಿಜೆಪಿ ಹಿಂದುತ್ವವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು. ಠಾಕ್ರೆ ಅವರು ಬಿಜೆಪಿಯಿಂದ ದೂರವಾಗಿದ್ದಾರೆಯೇ ಹೊರತು ಹಿಂದುತ್ವದಿಂದಲ್ಲ ಎಂದು ಹೇಳಿಕೊಂಡಿದ್ದರು. ಮುಂಬೈನಲ್ಲಿ ‘ಆಜಾನ್’ ಸ್ಪರ್ಧೆಗಳನ್ನು ಬೆಂಬಲಿಸಿದ್ದಕ್ಕಾಗಿ ಬಿಜೆಪಿ, ಶಿವಸೇನೆಯನ್ನು ಟಾರ್ಗೆಟ್ ಮಾಡಿತ್ತು. ಲಾಡ್ ಘೋಷಣೆ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
'ಅಜಾನ್ನಿಂದ ದಿನಾ ನಿದ್ರೆ ಭಂಗ, ತಲೆನೋವು' ಧ್ವನಿವರ್ಧಕ ಬ್ಯಾನ್
ಎಲ್ಲಾ ರಾಜಕೀಯ ಪಕ್ಷಗಳು ಕೋಮು ಸೌಹಾರ್ದತೆ ಕಾಪಾಡಲು ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಹಿರಿಯ ಎನ್ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. ಶಿವಸೇನೆಯ ಶಾಸಕಿ ಮನಿಶಾ ಕಯಾಂಡೆ ಅವರು ಪ್ರಸಾದ್ ಲಾಡ್ ಅವರು ಈ ವಿಷಯವನ್ನು ಎತ್ತಿದ ಸಮಯವನ್ನು ಪ್ರಶ್ನಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ವಿಚಾರವನ್ನು ಮುನ್ನಲೆಗೆ ತಂದಿರಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮಸೀದಿ, ದರ್ಗಾದಲ್ಲಿ ಧ್ವನಿವರ್ಧಕ ನಿರ್ಬಂಧ.. ಮಹತ್ವದ ಸುತ್ತೋಲೆ
“ನಾನು ಲಾಡ್ ಅವರ ಮಾತುಗಳನ್ನು ಕೇಳಿದ್ದೇನೆ. ವಾಸ್ತವವೆಂದರೆ ‘ಆಜಾನ್’ ಎಂಬುದು ಪ್ರಾರ್ಥನೆಯ ಕರೆ. ಈಗ, ಇದು ಕೇವಲ ಧ್ವನಿವರ್ಧಕಗಳ ವಿಷಯವಾಗಿದೆ, ”ಎಂದು ಅವರು ಹೇಳಿದರು. “ಯುಪಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ವಿಷಯವನ್ನು ಏಕೆ ಪ್ರಸ್ತಾಪಿಸಲಿಲ್ಲ? ಯುಪಿಯಲ್ಲಿ ಮಸೀದಿಗಳು ಇಲ್ಲವೇ? ಯುಪಿ ಚುನಾವಣೆಗೆ ಮೊದಲು ಲಾಡ್ (ಅಥವಾ ಬಿಜೆಪಿ) ಇದನ್ನು ಏಕೆ ಸೂಚಿಸಲಿಲ್ಲ?' ಎಂದು ಪ್ರಶ್ನೆ ಮಾಡಿದ್ದಾರೆ. ಕೋಮು ಸೌಹಾರ್ದತೆ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಈ ವಿಷಯವನ್ನು ಎತ್ತಲಾಗಿದೆ ಎಂದು ಕಯಂಡೆ ಆರೋಪಿಸಿದ್ದಾರೆ. "ಬಿಜೆಪಿ ಗಲಭೆಯಿಂದ ಲಾಭ ಪಡೆಯಲು ಆಶಿಸುತ್ತಿದೆ ಮತ್ತು ಅದು ಅದರ ಏಕೈಕ ಉದ್ದೇಶವಾಗಿದೆ" ಎಂದು ಅವರು ಆರೋಪಿಸಿದರು.