ಅಯೋಧ್ಯೆ ಮಸೀದಿ ನೀಲನಕ್ಷೆ ಅನಾವರಣ : ಶೀಘ್ರ ಶಂಕು ಸ್ಥಾಪನೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವ ಬೆನ್ನಲ್ಲೇ ಮಸೀದಿ ನಿರ್ಮಾಣಕ್ಕೂ ನೀಲನಕ್ಷೆ ಸಿದ್ಧ ಮಾಡಲಾಗುತ್ತಿದೆ. ಶೀಘ್ರವೇ ಅನಾವರಣವಾಗುತ್ತಿದೆ.
ಅಯೋಧ್ಯೆ (ಡಿ.18): ಬಾಬ್ರಿ ಮಸೀದಿಗೆ ಬದಲಿಯಾಗಿ ನಿರ್ಮಾಣಗೊಳ್ಳಲಿರುವ ಅಯೋಧ್ಯೆ ಮಸೀದಿಗೆ ನೀಲನಕ್ಷೆ ಸಿದ್ಧವಾಗುತ್ತಿದ್ದು, ಇದೇ ಡಿ.19ರಂದು ಅನಾವರಣಗೊಳ್ಳಲಿದೆ. ಮಸೀದಿ ನಿರ್ಮಾಣದ ಶಂಕುಸ್ಥಾಪನೆಯು ಜನವರಿ 26ರ ಗಣರಾಜ್ಯೋತ್ಸವ ದಿನ ನೆರವೇರಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ.
ನಮ್ಮ ಸಂವಿಧಾನ ಬಹುತ್ವವನ್ನು ಆಧರಿಸಿದೆ. ಹಾಗಾಗಿ ಸಂವಿಧಾನ ಅಸ್ತಿತ್ವಕ್ಕೆ ಬಂದ ಜನವರಿ 26ರ ಗಣರಾಜ್ಯೋತ್ಸವದ ದಿನ ಅಯೋಧ್ಯೆ ಮಸೀದಿಯ ಶಂಕುಸ್ಥಾಪನೆಗೆ ಟ್ರಸ್ಟ್ ನಿರ್ಧರಿಸಿದೆ’ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಕಾರ್ಯದರ್ಶಿ ಅಥಾರ್ ಹುಸೇನ್ ತಿಳಿಸಿದ್ದಾರೆ. ಮಸೀದಿಯ ನೀಲನಕ್ಷೆಯು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡುಗೆ ಮನೆ ಮತ್ತು ಗ್ರಂಥಾಲಯವನ್ನು ಒಳಗೊಂಡಿರಲಿದೆ. ಮಸೀದಿಯೊಳಗೆ ಒಂದು ಬಾರಿಗೆ 2 ಸಾವಿರ ಮಂದಿ ಸೇರುವ ಸಾಮರ್ಥ್ಯವಿರುತ್ತದೆ. ಅಲ್ಲದೆ ಮಸೀದಿಯ ವಿನ್ಯಾಸವು ದುಂಡಾಕಾರದಲ್ಲಿ ಇರಲಿದೆ ಎಂದು ಮುಖ್ಯ ವಾಸ್ತುಶಿಲ್ಪಿ ಪ್ರೊ.ಎಸ್.ಎಂ ಅಖ್ತರ್ ತಿಳಿಸಿದ್ದಾರೆ.
ರಾಮಮಂದಿರಕ್ಕಾಗಿ ಕರ್ನಾಟಕದ ರಾಜ್ಯಪಾಲರರನ್ನ ಭೇಟಿಯಾದ ಪೇಜಾವರ ಶ್ರೀ .
ಕಳೆದ ವರ್ಷ ನ.9ರಂದು ಅಯೋಧ್ಯೆ ವಿವಾದ ಕುರಿತಂತೆ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಮತ್ತು ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿಯೇ 5 ಎಕರೆ ಜಾಗವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಬಳಿಕ ರಾಜ್ಯ ಸರ್ಕಾರ ಇಲ್ಲಿನ ದನ್ನಿಪುರದಲ್ಲಿ 5 ಎಕರೆ ಜಾಗವನ್ನು ಮಸೀದಿ ನಿರ್ಮಾಣಕ್ಕೆ ನೀಡಿತ್ತು.