ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಮತ್ತು ಮಹಾರಾಷ್ಟ್ರವನ್ನು ನಿಂದಿಸಿದ ಆಟೋ ಚಾಲಕನಿಗೆ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಥಳಿಸಿದ್ದಾರೆ. ಈ ಘಟನೆಯನ್ನು ಶಿವಸೇನಾ ಸ್ಥಳೀಯ ಮುಖಂಡರು ಸಮರ್ಥಿಸಿಕೊಂಡಿದ್ದಾರೆ.

ಪಾಲಘರ್ (ಜುಲೈ.14): ಮಹಾರಾಷ್ಟ್ರದಲ್ಲಿ ಮರಾಠಿಯೇತರ ಭಾಷಿಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಮಹಾರಾಷ್ಟ್ರ ಹಾಗೂ ಮರಾಠಿ ಭಾಷೆಯನ್ನು ನಿಂದಿಸಿದ್ದಕ್ಕಾಗಿ ಆಟೋರಕ್ಷಾ ಚಾಲಕನ ಮೇಲೆ ಶಿವಸೇನಾ (UBT) ಕಾರ್ಯಕರ್ತರು ಥಳಿಸಿದ ಘಟನೆ ನಡೆದಿದೆ.

ಘಟನೆಯನ್ನು ಶಿವಸೇನಾ (ಯುಬಿಟಿ) ಸ್ಥಳೀಯ ಮುಖಂಡ ಉದಯ್ ಜಾಧವ್ ಸಮರ್ಥಿಸಿಕೊಂಡಿದ್ದು, ‘ಆತನಿಗೆ ತಕ್ಕ ಪಾಠ ಕಲಿಸಿದ್ದೇವೆ. ಮರಾಠಿ ಭಾಷೆ, ಮಹಾರಾಷ್ಟ್ರ ಅಥವಾ ಮಹಾರಾಷ್ಟ್ರದ ಜನರನ್ನು ಯಾರಾದರೂ ನಿಂದಿಸಿದರೆ ಅವರಿಗೆ ಶಿವಸೇನಾ ಸ್ಟೈಲ್‌ನಲ್ಲಿ ಉತ್ತರ ನೀಡಲಾಗುವುದು’ ಎಂದಿದ್ದಾರೆ.

ಆಗಿದ್ದೇನು?:

ವಿರಾರ್ ಪ್ರದೇಶದಲ್ಲಿ ಆಟೋ ಓಡಿಸಿಕೊಂಡಿದ್ದ ಬೇರೆ ರಾಜ್ಯದ ಚಾಲಕ ಕೆಲ ದಿನಗಳ ಹಿಂದೆ ಮರಾಠಿ ಹಾಗೂ ಮರಾಠಿ ಸಾಧಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ, ಒಬ್ಬ ಮಹಿಳೆ ಸೇರಿದಂತೆ ಶಿವಸೇನಾ ಕಾರ್ಯಕರ್ತರು ರಸ್ತೆಯಲ್ಲಿಯೇ ಆಟೋ ಚಾಲಕನಿಗೆ ಥಳಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದ ಜನತೆಯಲ್ಲಿ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ.

ಕೆಲದಿನಗಳ ಹಿಂದಷ್ಟೆ ಎಂಎನ್‌ಎಸ್ ಕಾರ್ಯಕರ್ತರು ಮರಾಠಿ ಮಾತಾಡದ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು. ಶಿವಸೇನಾ (ಯುಬಿಟಿ) ನಾಯಕ ರಾಜನ್ ವಿಚಾರೆ ಹಿಂದಿಭಾಷಿಕ ವ್ಯಾಪಾರಿಗಳನ್ನು ಕಚೇರಿಗೆ ಕರೆಸಿ ಕಪಾಳಮೋಕ್ಷ ಮಾಡಿದ್ದರು.