ಗಡಿ ಯಥಾಸ್ಥಿತಿ ಬದಲಿಸಿದರೆ ಹುಷಾರ್‌| ಚೀನಾಕ್ಕೆ ಭಾರತದ ಕಟು ಎಚ್ಚರಿಕೆ| ಗಡಿಯಲ್ಲಿ ಸೇನೆ ನಿಯೋಜಿಸಿ ಶಾಂತಿ ಕದಡಿದ್ದು ಚೀನಾ ಸರ್ಕಾರ

ಬೀಜಿಂಗ್(ಜೂ.27)‌: ವಾಸ್ತವ ಗಡಿ ರೇಖೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಜೊತೆ ಸಂಘರ್ಷಕ್ಕಿಳಿದಿರುವ ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನಿಸಿದೆ. ಗಡಿರೇಖೆಯಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳದೆ ಸೇನಾಪಡೆಗಳನ್ನು ನಿಯೋಜಿಸುವ ಮೂಲಕ ಚೀನಾ ಕೇವಲ ಶಾಂತಿಯನ್ನಷ್ಟೇ ಅಲ್ಲದೆ, ಉಭಯ ರಾಷ್ಟ್ರಗಳ ಮಧ್ಯೆಯ ಬಾಂಧವ್ಯವನ್ನು ಸಹ ಕದಡುತ್ತಿದೆ. ಹೀಗಾಗಿ, ಪೂರ್ವ ಲಡಾಖ್‌ನಲ್ಲಿ ಚೀನಾ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಚೀನಾಕ್ಕೆ ಭಾರತ ಎಚ್ಚರಿಸಿದೆ.

Add Asianetnews Kannada as a Preferred SourcegooglePreferred

ಚೀನಿಯರಿಂದ ಮತ್ತೆ ರಾಡ್‌ ರೌಡಿಸಂ: ಒಪ್ಪಂದದ ಉಲ್ಲಂಘನೆ ಸ್ಪಷ್ಟ!

ಈ ಬಗ್ಗೆ ಶುಕ್ರವಾರ ಪಿಟಿಐಗೆ ಸಂದರ್ಶನ ನೀಡಿದ ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಂ ಮಿಸ್ರಿ ಅವರು, ‘ಲಡಾಖ್‌ನ ಪೂರ್ವದಲ್ಲಿ ತಾನು ಸೇನೆ ನಿಯೋಜಿಸಿರುವುದು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದೇ ಬಿಕ್ಕಟ್ಟು ಶಮನದ ಉತ್ತಮ ಮಾರ್ಗ’ ಎಂದು ಪ್ರತಿಪಾದಿಸಿದ್ದಾರೆ. ಚೀನಾ ಸೇನೆಯ ಕ್ರಮಗಳಿಂದ ಈಗಾಗಲೇ ಉಭಯ ರಾಷ್ಟ್ರಗಳ ಬಾಂಧವ್ಯದ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ.

ಗಡಿ ಯಥಾಸ್ಥಿತಿ ಬದಲಿಸಿದರೆ ಹುಷಾರ್‌: ಚೀನಾಕ್ಕೆ ಭಾರತದ ಕಟು ಎಚ್ಚರಿಕೆ!

ಅಲ್ಲದೇ ಇದೀಗ ಈ ಪರಿಸ್ಥಿತಿಯನ್ನು ಸರಿಪಡಿಸುವುದು ಚೀನಾದ ಜವಾಬ್ದಾರಿಯಾಗಿದ್ದು, ಭಾರತದ ಜೊತೆಗಿನ ಬಾಂಧವ್ಯ ವೃದ್ಧಿಗೆ ಏನು ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳುವುದು ಚೀನಾದ ಮೇಲಿದೆ. ಜೊತೆಗೆ, ಲಡಾಖ್‌ನ ಗಲ್ವಾನ್‌ ಕಣಿವೆ ತನ್ನದೆಂಬ ಚೀನಾದ ಪ್ರತಿಪಾದನೆಯನ್ನು ಒಪ್ಪಲಾಗದು ಎಂದಿರುವ ಅವರು, ಇಂಥ ಅತಿಶಯೋಕ್ತಿ ಕ್ರಮಗಳಿಂದ ಬಾಂಧವ್ಯಕ್ಕೆ ಮತ್ತಷ್ಟುಪೆಟ್ಟು ನೀಡಲಿವೆ ಎಂದು ಎಚ್ಚರಿಸಿದ್ದಾರೆ.