ಲೆನ್ಸ್ಕಾರ್ಟ್ ಕಂಪೆನಿಯು ಹಿಂದೂ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸಿ, ಹಿಜಾಬ್ಗೆ ಅವಕಾಶ ನೀಡಿದ ಹೊಸ ಡ್ರೆಸ್ ಕೋಡ್ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವನ್ನು ವಿರೋಧಿಸಿದ ಬಿಜೆಪಿ ನಾಯಕಿ ನಾಜಿಯಾ ಖಾನ್ಗೆ ಪಾಕಿಸ್ತಾನದಿಂದ ಜೀವ ಬೆದರಿಕೆ ಬಂದಿದ್ದು, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ನಾಸಿಕ್ನ ಟಿಸಿಎಸ್ ಕಂಪೆನಿಯಲ್ಲಿ ಉದ್ಯೋಗಿಗಳಿಂದ ಲವ್ ಜಿಹಾದ್ ಬೆನ್ನಲ್ಲೇ ದೇಶದ ಪ್ರಮುಖ ಐವೇರ್ ಕಂಪೆನಿ 'ಲೆನ್ಸ್ಕಾರ್ಟ್' (Lenskart) ನ ಉದ್ಯೋಗಿಗಳಿಗೆ ವಿಧಿಸಿರುವ ಹೊಸ ಡ್ರೆಸ್ ಕೋಡ್ ನಿಯಮಾವಳಿಗಳು ಭಾರತದ ಹಿಂದೂಗಳನ್ನು ಬೆಚ್ಚಿಬೀಳಿಸಿದೆ. ಹಿಂದೂ ಧರ್ಮದ ಸಾಂಪ್ರದಾಯಿಕ ಗುರುತುಗಳಾದ ಬಿಂದಿ, ಸಿಂದೂರ, ಕೈಗೆ ಕಟ್ಟುವ ದಾರ, ತುಳಸಿ ಮಾಲೆ, ರುದ್ರಾಕ್ಷಿ ಧರಿಸುವುದರ ಮೇಲೆ ನಿರ್ಬಂಧ ಹೇರಿರುವ ಕಂಪೆನಿ, ಹಿಜಾಬ್ ಧರಿಸಲು ಅವಕಾಶ ನೀಡಿದೆ. ಇದರ ಬೆನ್ನಲ್ಲೇ, ಇದೀಗ ಇಂಥ ಅದೆಷ್ಟು ಕಂಪೆನಿಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇವುಗಳ ಹಿಂದಿರುವ ಎಜೆಂಡಾ ಏನು ಎನ್ನುವ ಬಗ್ಗೆ ಆತಂಕ ಮನೆಮಾಡಿದೆ.
ಭಾರತವನ್ನು ಇಸ್ಲಾಮಿಕ್ ರಾಷ್ಟ್ರದ ಗುರಿ
ಅಷ್ಟಕ್ಕೂ ಇದಾಗಲೇ ಪಾಕಿಸ್ತಾನಿಗಳು 2047ರ ವೇಳೆಗೆ ಅರ್ಥಾತ್ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಆಗುವ ಸಂದರ್ಭದಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲೇಬೇಕು ಎನ್ನುವ ಪಣ ತೊಟ್ಟಿರುವುದು ಬಹಳ ಹಿಂದಿನ ಮಾತು. ಸಾಕಷ್ಟು ಬಾರಿ ಓಪನ್ ಆಗಿಯೇ ಈ ಮಾತುಗಳನ್ನು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತವು ಹಿಂದೂ ರಾಷ್ಟ್ರ ಎಂದು ಘೋಷಿಸಲು ಪ್ರಧಾನಿ ಸೇರಿದಂತೆ ಒಂದಿಷ್ಟು ಜನರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದು ಪಾಕಿಸ್ತಾನದವರಿಗೆ ಸಹಿಸಲು ಆಗುತ್ತಿಲ್ಲ. ಅವರ ಲೆಕ್ಕಾಚಾರದ ಪ್ರಕಾರ ಇದಾಗಲೇ ಭಾರತ ಮುಸ್ಲಿಂರಾಷ್ಟ್ರದತ್ತ ಹೆಜ್ಜೆ ಇಟ್ಟಾಗಿತ್ತು. ಆದರೆ ಇದೀಗ ಅದು ಅವರು ಅಂದುಕೊಂಡಷ್ಟು ಸುಲಭವಲ್ಲ ಎಂದು ತಿಳಿದಿದೆ. ಅವರಿಗೆ ಭಾರತದಿಂದಲೇ ಸಾಕಷ್ಟು ಮಂದಿ ಪ್ರೋತ್ಸಾಹ ಕೊಡುತ್ತಿರುವ ಕಾರಣ, ತಾವು ಅಂದುಕೊಂಡ ಕೆಲಸ ಮಾಡುವುದು ಸಲೀಸು ಎಂದುಕೊಂಡವರಿಗೆ ಅವರ ಗುರಿ ಮುಟ್ಟುವುದು ಕಷ್ಟವಾಗುತ್ತಿದೆ. ಆದರೂ ತಮ್ಮ ಪ್ರಯತ್ನ ಅವರು ಬಿಡುತ್ತಿಲ್ಲ.
ನಾಜಿಯಾ ಖಾನ್- ಯಾರಿವರು?
ಇದೀಗ ಸುಪ್ರೀಂಕೋರ್ಟ್ ವಕೀಲೆ, ಬಿಜೆಪಿ ನಾಯಕಿ ನಾಜಿಯಾ ಖಾನ್ ಅವರು ಲೆನ್ಸ್ಕಾರ್ಟ್ ಕಂಪೆನಿಗೆ ಹೋಗಿ ಅಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಧಾರ್ಮಿಕ ದೌರ್ಜನ್ಯವನ್ನು ಖಂಡಿಸಿದ್ದಾರೆ. ಅಲ್ಲಿರುವ ಹಿಂದೂಗಳಿಗೆ ಕುಂಕುಮ, ತಿಲಕ ಇಟ್ಟಿದ್ದಾರೆ. ಅಷ್ಟಕ್ಕೂ ನಾಜಿಯಾ ಖಾನ್ ಎಂದರೆ ಹಲವರು ಹೆದರುವುದು ಉಂಟು. ಇದಕ್ಕೆ ಕಾರಣ, ಇಸ್ಲಾಂನ ಸಂಪೂರ್ಣ ಎ ಟು ಝಜ್ ಅರಿತಿರುವ, ಕುರಾನ್, ಭಗವದ್ಗೀತೆ ಸೇರಿದಂತೆ ಧಾರ್ಮಿಕ ಗ್ರಂಥಗಳ ಆಳ-ಅಗಲ ಅರಿತಿರುವ ನಾಜಿಯಾ ಖಾನ್ ಮಾತನಾಡಿದರೆ ಮುಗಿಯಿತು, ಎಲ್ಲದಕ್ಕೂ ಸಾಕ್ಷಿ ಕೊಟ್ಟು, ದಾಖಲೆ ಇಟ್ಟು, ಯಾವ ಪುಟದಲ್ಲಿ ಏನಿದೆ ಎಂದು ಫಟಾಫಟ್ ಮಾತನಾಡಿದರೆ ಎದುರಿಗೆ ಇದ್ದವರು ಅದೆಂಥ ಮುಖಂಡರೇ ಆದರೂ ತಲ್ಲಣಗೊಳ್ಳಲೇಬೇಕು. ಅಂಥ ತಾಕತ್ತು ಈಕೆಗಿದೆ. ಈಗಾಗಲೇ ಈಕೆಗೆ ಸಾಕಷ್ಟು ಬಾರಿ ಪ್ರಾಣ ಬೆದರಿಕೆ ಬರುತ್ತಲೇ ಇದ್ದು, ಇದೀಗ ಹಿಂದೂಗಳಿಗೆ ಲೆನ್ಸ್ಕಾರ್ಟ್ ಕಂಪೆನಿಯಲ್ಲಿ ತಿಲಕ ಇರಿಸಿದ್ದಕ್ಕೆ ಪಾಕಿಸ್ತಾನದಲ್ಲಿ ಉರಿ ಹತ್ತಿದೆ.
ಇಸ್ಲಾಮಿಕ್ ರಾಷ್ಟ್ರ ಮಾಡ್ತೇವೆ
ಓಪನ್ ಆಗಿಯೇ ವಿಡಿಯೋ ಮಾಡಿ ಜೀವ ಬೆದರಿಕೆ ಜೊತೆಗೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡೋದನ್ನು ತಡಿಯಿರಿ ನೋಡೋಣ ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬ ನಾಜಿಯಾ ಖಾನ್ಗೆ ಬೆದರಿಕೆ ಹಾಕಿದ್ದು, ಅದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅತ್ಯಂತ ಕೀಳುಮಟ್ಟದ ಪದವನ್ನು ನಾಜಿಯಾ ವಿರುದ್ಧ ಬಳಸಿದ್ದಾನೆ ಈತ. ಆಕೆಯನ್ನು ವೇ* ಎಂದು ಕರೆದಿರುವ ಈತ, ನೀವು ಅಲ್ಲಿ ಹೋಗಿ ತಿಲಕ ಇಡುತ್ತೀರಾ, ನಾವು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಿಯೇ ಮಾಡ್ತೇವೆ. ಶರಿಯಾ ಕಾನೂನು ತಂದೇ ತರುತ್ತೇವೆ. ಪ್ರತಿಯೊಬ್ಬರಿಗೂ ಖಾನ್ ಮಾಡುತ್ತೇವೆ ಎನ್ನುವ ಮೂಲಕ ನೀವೇನು ಮಾಡುತ್ತೀರಿ ನೋಡೋಣ ಎಂದು ಓಪನ್ ಚಾಲೆಂಜ್ ಹಾಕಿದ್ದಾನೆ.


