Asianet Suvarna News Asianet Suvarna News

ಹುತಾತ್ಮ ಯೋಧನಿಗೆ ಪೋಸ್ಟಲ್ಲಿ ಶೌರ್ಯಚಕ್ರ: ಪ್ರಶಸ್ತಿ ವಾಪಸ್ ಕಳುಹಿಸಿದ ಪೋಷಕರು

ಕರ್ತವ್ಯದ ವೇಳೆ ಮಡಿದ ಯೋಧರಿಗೆ ನೀಡುವ ಶೌರ್ಯಚಕ್ರ ಪ್ರಶಸ್ತಿಯನ್ನು, ಹುತಾತ್ಮ ಯೋಧನ ಕುಟುಂಬಕ್ಕೆ ಅಂಚೆಯ ಮೂಲಕ ಕಳುಹಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯೋಧನ ಕುಟುಂಬ ಗೌರವ ಸ್ವೀಕರಿಸಲು ನಿರಾಕರಿಸಿದೆ. ಇದು ಸೈನಿಕನೊಬ್ಬನಿಗೆ ಮಾಡಿದ ಅವಮಾನ ಎಂದು ಪ್ರಶಸ್ತಿಯನ್ನು ಹಿಂದಿರುಗಿಸಿದೆ.

Army unit sent shourya chakra to martyred warrior by post parents returned gallantry akb
Author
First Published Sep 9, 2022, 7:46 AM IST

ಅಹಮದಾಬಾದ್‌: ಕರ್ತವ್ಯದ ವೇಳೆ ಮಡಿದ ಯೋಧರಿಗೆ ನೀಡುವ ಶೌರ್ಯಚಕ್ರ ಪ್ರಶಸ್ತಿಯನ್ನು, ಹುತಾತ್ಮ ಯೋಧನ ಕುಟುಂಬಕ್ಕೆ ಅಂಚೆಯ ಮೂಲಕ ಕಳುಹಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯೋಧನ ಕುಟುಂಬ ಗೌರವ ಸ್ವೀಕರಿಸಲು ನಿರಾಕರಿಸಿದೆ. ಇದು ಸೈನಿಕನೊಬ್ಬನಿಗೆ ಮಾಡಿದ ಅವಮಾನ ಎಂದು ಪ್ರಶಸ್ತಿಯನ್ನು ಹಿಂದಿರುಗಿಸಿದೆ.

2017ರಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರೊಂದಿಗಿನ ಸೆಣಸಾಟದಲ್ಲಿ ಲ್ಯಾನ್ಸ್‌ ನಾಯಕ್‌ ಗೋಪಾಲ್‌ ಸಿಂಗ್‌ ಬದೌರಿಯಾ ಹುತಾತ್ಮರಾಗಿದ್ದರು. ಅಹಮದಾಬಾದ್‌ನ ಬಾಪುನಗರ ಪ್ರದೇಶದಲ್ಲಿ ವಾಸಿಸುವ ಅವರ ಕುಟುಂಬದವರಿಗೆ ಪೋಸ್ಟ್‌ ಮೂಲಕ ಸರ್ಕಾರ ಶೌರ್ಯ ಚಕ್ರವನ್ನು ರವಾನಿಸಿದೆ. ದೇಶದ ಮೂರನೇ ಅತಿದೊಡ್ಡ ಗೌರವ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ಪೋಸ್ಟ್‌ ಮುಖಾಂತರ ಕಳುಹಿಸಿರುವುದು ಯೋಧನೊಬ್ಬನಿಗೆ ಮಾಡಿದ ಅವಮಾನ ಎಂದು ಬದೌರಿಯಾ ಅವರ ಕುಟುಂಬ ಹೇಳಿದೆ. ಬದೌರಿಯಾ ಅವರ ತಂದೆ ಮುನಿಮ್‌ ಸಿಂಗ್‌ ಅವರು ಈ ಪ್ರಶಸ್ತಿಯನ್ನು ಸೆ.5ರಂದು ಹಿಂದಿರುಗಿಸಿದ್ದಾರೆ.

ಈ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಬೇಕು. ಆದರೆ ಇಲ್ಲಿ ಪದಕವನ್ನು ಪಾರ್ಸೆಲ್ ಮಾಡಲಾಗಿದ್ದು, ಅದನ್ನು ಪೋಷಕರು ಹಿಂದಿರುಗಿಸಿದ್ದಾರೆ. ಜಬಲ್‌ಪುರದ ಸೇನಾ ಘಟಕದಿಂದ ಭಾರತೀಯ ಅಂಚೆ ಮೂಲಕ ಮೂರು ದಿನಗಳ ಹಿಂದೆ ಅಹಮದಾಬಾದ್‌ನಲ್ಲಿರುವ ಮುನಿಮ್ ಸಿಂಗ್ ಭಡೋರಿಯಾ (Munim Singh Bhadoriya) ಅವರ ಮನೆಗೆ ಒಂದು ಬಾಕ್ಸ್ ತಲುಪಿತ್ತು. ಪಾರ್ಸೆಲ್‌ ಮೇಲೆ ಶೌರ್ಯ ಪದಕ ಎಂದು ಬರೆಯಲಾಗಿತ್ತು. ಮೇಲೆ ಬರೆದಿದ್ದ ಒಂದು ಪದ ನೋಡಿ ಹುತಾತ್ಮ ಯೋಧ  ಗೋಪಾಲ್ ಸಿಂಗ್  ಅವರ ತಂದೆಗೆ ಇದು ತಮ್ಮ ಪುತ್ರನಿಗೆ ಬಂದ ಶೌರ್ಯ ಚಕ್ರ ಎಂಬುದು ತಿಳಿದಿದೆ.

IAF Chopper Crash: ಬದುಕುಳಿದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!
ಐದು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವಾಗ   ಭಡೋರಿಯಾ ಅವರ ಪುತ್ರ ಲ್ಯಾನ್ಸ್ ನಾಯಕ್ ಗೋಪಾಲ್ ಸಿಂಗ್ ಭಡೋರಿಯಾ ಹುತಾತ್ಮರಾಗಿದ್ದರು. ಅವರಿಗೆ ಶೌರ್ಯಕ್ಕಾಗಿ ನೀಡಲಾದ ಮೂರನೇ ಅತ್ಯುನ್ನತ ಪದಕವಾದ ಶೌರ್ಯ ಚಕ್ರವನ್ನು ಬಾಕ್ಸ್ ಒಳಗೊಂಡಿದೆ ಎಂಬುದು ಭಡೋರಿಯಾಗೆ ತಿಳಿದಿತ್ತು. ರಾಷ್ಟ್ರಪತಿ ಭವನದಲ್ಲಿ ನೀಡಬೇಕಾದ ಈ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪಾರ್ಸೆಲ್ ಮೂಲಕ ಕಳುಹಿಸಿದ್ದು ನೋಡಿ ಬೇಸರಗೊಂಡ ಅವರು, ಪಾರ್ಸೆಲ್‌ಗೆ ಸಹಿ ಮಾಡಲಿಲ್ಲ ಮತ್ತು ಅದನ್ನು ವಾಪಸ್ ಕಳುಹಿಸುವಂತೆ ಪೋಸ್ಟ್‌ಮ್ಯಾನ್‌ಗೆ ವಿನಂತಿಸಿದರು.

"ಪದಕವು ನನ್ನ ಮಗನ ಹೃದಯವಾಗಿದ್ದು, ಆತ ದೇಶ ಸೇವೆಯಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾನೆ. ಅವನು ತನ್ನ ರಕ್ತದಿಂದ ಪದಕವನ್ನು ಗಳಿಸಿದ್ದಾನೆ. ಅದು ಪವಿತ್ರವಾಗಿದೆ ಮತ್ತು ಅದಕ್ಕೆ ಅರ್ಹವಾದ ಗೌರವವನ್ನು ನೀಡಬೇಕು" ಎಂದು ಭಡೋರಿಯಾ ಅವರು ಮಾಧ್ಯಮಗಳಿಗೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಹುತಾತ್ಮ ಯೋಧ ಗೋಪಾಲ್ ಸಿಂಗ್ ಪೋಷಕರು ಗುಜರಾತ್‌ನ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.

ಯೋಧ ಪುತ್ರನ ಅಂತಿಮ ದರ್ಶನಕ್ಕೆ 2600 ಕಿ.ಮೀ. ದೂರದಿಂದ ಬೆಂಗಳೂರಿಗೆ ವೃದ್ಧ ದಂಪತಿ!

ಇದನ್ನು ಅಂಚೆ ಮೂಲಕ ಕಳುಹಿಸಬಾರದು, ಆದರೆ ರಾಷ್ಟ್ರಪತಿ ಭವನದಲ್ಲಿ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಅವರು ಔಪಚಾರಿಕ ರಕ್ಷಣಾ ಇಲಾಖೆಯ ಸಮಾರಂಭದಲ್ಲಿ ಎಲ್ಲಾ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ನೀಡುವಂತೆ ಪ್ರಸ್ತುತಪಡಿಸಬೇಕು. ಈ ಮೂಲಕ ಭಾರತೀಯ ಜನರು ನನ್ನ ಮಗನ ಶೌರ್ಯವನ್ನು ತಿಳಿದುಕೊಳ್ಳುತ್ತಾರೆ, ಇದು ಅನೇಕ ಯುವ ಸೈನಿಕರಿಗೆ ಸ್ಫೂರ್ತಿ ನೀಡುತ್ತದೆ. ಆದರೆ ಇಲ್ಲಿ ನನ್ನ ಮಗನಿಗೆ ಶೌರ್ಯಕ್ಕೆ ಅರ್ಹವಾದ ಗೌರವವನ್ನು ನಿರಾಕರಿಸಲಾಗುತ್ತಿದೆ ಎಂದು ಹುತಾತ್ಮ ಸೈನಿಕನ ತಂದೆ ಭಾವುಕರಾಗಿ ನುಡಿದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗುವ ಮೊದಲು ಲ್ಯಾನ್ಸ್ ನಾಯಕ್ ಗೋಪಾಲ್ ಸಿಂಗ್ ಭಡೋರಿಯಾ ಸುಮಾರು 14 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಹಲವು ಶೌರ್ಯದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ತಾಜ್ ಹೋಟೆಲ್‌ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿದ್ದರು.

Follow Us:
Download App:
  • android
  • ios