ಯೋಧ ಪುತ್ರನ ಅಂತಿಮ ದರ್ಶನಕ್ಕೆ ವೃದ್ಧ ದಂಪತಿ 2000 ಕಿ.ಮೀ. ಯಾನ| ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಶೌರ್ಯಚಕ್ರ ಪುರಸ್ಕೃತ ಕರ್ನಲ್‌ ಎನ್‌.ಎಸ್‌.ಬಾಲ್

ಬೆಂಗಳೂರು(ಏ.12): ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಶೌರ್ಯಚಕ್ರ ಪುರಸ್ಕೃತ ಕರ್ನಲ್‌ ಎನ್‌.ಎಸ್‌.ಬಾಲ್‌(39)ಅವರ ಅಂತ್ಯಸಂಸ್ಕಾರ ನೆರವೇರಿಸಲು ಅವರ ಪೋಷಕರು ಶನಿವಾರ ತಡರಾತ್ರಿ ವೇಳೆಗೆ ಬೆಂಗಳೂರು ತಲುಪಿದ್ದಾರೆ. ಈ ಕಾರ್ಯಕ್ಕಾಗಿ ಅವರು ದೂರದ ಅಮೃತಸರದಿಂದ 2600 ಕಿ.ಮೀ ದೂರವನ್ನು ಲಾಕ್‌ಡೌನ್‌ ಮಧ್ಯೆ ಕಾರಿನಲ್ಲೇ ಕ್ರಮಿಸಿಕೊಂಡು ಬಂದಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿರುವ ಪ್ಯಾರಾ ಯುನಿಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಎನ್‌.ಎಸ್‌.ಬಾಲ್‌ 2 ದಿನಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಸಾವಿನ ಹಿಂದಿನ ದಿನವಷ್ಟೇ ಆಸ್ಪತ್ರೆಯ ಬೆಡ್‌ ಮೇಲೆ ನಗುತ್ತಾ ಕುಳಿತ ಸೆಲ್ಫಿ ತೆಗೆದು ಪೋಷಕರಿಗೆ ಕಳುಹಿಸಿದ್ದ ವೀರ ಯೋಧ ಮಾರನೇ ದಿನವೇ ಕೊನೆಯುಸಿರೆಳೆದಿದ್ದರು. ಈ ಸುದ್ದಿ ತಿಳಿವ ವೇಳೆ ಬಾಲ್‌ ಅವರ ಪೋಷಕರು ದೂರದ ಅಮೃತಸರದಲ್ಲಿದ್ದರು.

ಈ ವೇಳೆ ಶವವನ್ನು ಅಮೃತಸರಕ್ಕೆ ಕಳುಹಿಸಿಕೊಡಲು ಸೇನೆ ನಿರ್ಧರಿಸಿತ್ತಾದರೂ ಬಾಲ್‌ರ ಪತ್ನಿ, ಮಕ್ಕಳು, ಕೆಲ ಕುಟುಂಬ ಸದಸ್ಯರು ಬೆಂಗಳೂರಿನಲ್ಲೇ ಇದ್ದ ಕಾರಣ ಇಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ಪೋಷಕರಾದ ನಿವೃತ್ತ ಯೋಧ ನವಜೋತ್‌ಸಿಂಗ್‌ ಬಾಲ್‌ ಮತ್ತು ಕರ್ನೈಲ್‌ಸಿಂಗ್‌ ಬಾಲ್‌ ನಿರ್ಧರಿಸಿದ್ದರು. ವಿಮಾನ ಸೇವೆ ಸಿಗಲಿಲ್ಲ. ಹೀಗಾಗಿ ಪೋಷಕರು ಶುಕ್ರವಾರ ಅಮೃತಸರದಿಂದ ಹೊರಟು, ಶನಿವಾರ ರಾತ್ರಿ ವೇಳೆಗೆ ಬೆಂಗಳೂರು ತಲುಪಿದ್ದಾರೆ.