Noida ಅಪಾರ್ಟ್ಮೆಂಟ್ನ ಕಾಂಪೌಂಡ್ ಕುಸಿತ: ಚರಂಡಿ ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಕಾರ್ಮಿಕರು ಸಾವು
ಅಪಾರ್ಟ್ಮೆಂಟ್ ಒಂದರ ಕಾಂಪೌಂಡ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ನೋಯ್ದಾದಲ್ಲಿ ನಡೆದಿದೆ.
ನೋಯ್ಡಾ: ಅಪಾರ್ಟ್ಮೆಂಟ್ ಒಂದರ ಕಾಂಪೌಂಡ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ನೋಯ್ದಾದಲ್ಲಿ ನಡೆದಿದೆ. ನೋಯ್ಡಾದ ಸೆಕ್ಟರ್ 21 ರ ಬಳಿ ಈ ಅನಾಹುತ ನಡೆದಿದೆ. ಸಮೀಪದ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದ್ದು, ಚರಂಡಿ ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಕಾರ್ಮಿಕರ ಬಲಿ ಪಡೆದಿದೆ.
ಜಲ ವಾಯು ವಿಹಾರದಲ್ಲಿರುವ (Jal Vayu Vihar) ವಸತಿ ಸಂಕೀರ್ಣದ (Apartment) ಕಂಪೌಂಡ್ ಗೋಡೆ ಕುಸಿದ ಪರಿಣಾಮ ಅವಶೇಷಗಳಡಿ 12 ಕಾರ್ಮಿಕರು ಸಿಲುಕಿದ್ದರು. ಕೂಡಲೇ ಬುಲ್ಡೋಜರ್ ತರಿಸಿ ಅವಶೇಷಗಳಡಿ ಸಿಲುಕಿದ್ದ ಒಟ್ಟು 12 ಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು. ಆದರೆ ಅದರಲ್ಲಿ ಗಂಭೀರ ಗಾಯಗೊಂಡ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಲಾಗಿದೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಘಟನೆ ಬಗ್ಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬೇಸರ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಕೂಡಲೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಅವರು ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಟ್ವಿಟ್ ಮಾಡಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ನ್ಯಾಯಾಧೀಶ (District magistrate) ಸುಹಾಸ್ ಎಲ್ವೈ (Suhas LY) ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ (Rescue operation)ನಡೆಯುತ್ತಿದೆ, ಗಾಯಾಳುಗಳ ವಿವರವನ್ನು ಪಡೆಯಲಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಆ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ. ಎಲ್ಲಾ ರಕ್ಷಣಾ ತಂಡಗಳು ಸ್ಥಳದಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಪಾರ್ಟ್ಮೆಂಟ್ ಸಮುಚ್ಚಯದ ಬಳಿ ಇರುವ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರವೂ ಗುತ್ತಿಗೆ (Noida development authority) ನೀಡಿತ್ತು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ. ಕಾರ್ಮಿಕರು ಇಟ್ಟಿಗೆಗಳನ್ನು ಹೊರತೆಗೆಯುವಾಗ ಗೋಡೆ ಕುಸಿದಿದೆ ಎಂದು ನಮಗೆ ತಿಳಿಸಲಾಗಿದೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಏಕಾಏಕಿ ಕುಸಿದ ಬಿದ್ದ ಮೂರಂತಸ್ತಿನ ಮಾಲ್: ಭಯಂಕರ ದೃಶ್ಯದ ವಿಡಿಯೋ ವೈರಲ್
ನೋಯ್ದಾ ನಗರ ಪ್ರಾಧಿಕಾರ ಈ ಚರಂಡಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿತ್ತು ಎಂದು ತಿಳಿದು ಬಂದಿದೆ. 13 ಕಾರ್ಮಿಕರ ತಂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗ 10 ಗಂಟೆ ಸುಮಾರಿಗೆ ಕಟ್ಟಡದ ಕಟ್ಟಡದ ಕಾಂಪೌಂಡ್ ಕುಸಿದಿದೆ ಎಂದು ವಸತಿ ಸಂಕೀರ್ಣದ ಗಾರ್ಡ್ ಒಬ್ಬರು ಹೇಳಿದ್ದಾರೆ. ಘಟನೆ ಬಗ್ಗೆ ಪೊಲೀಸ್ ಕಮೀಷನರ್ ಅಲೋಕ್ ಸಿಂಗ್ (Alok singh) ಪ್ರತಿಕ್ರಿಯಿಸಿದ್ದು, ದುರಾದೃಷ್ಟವಶಾತ್ ಈ ದುರಂತದಲ್ಲಿ ನಾಲ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಒಂಭತ್ತು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ಡಿಆರ್ಎಫ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಘಟನೆ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಕಟ್ಟಡ ಕುಸಿತ: 19 ಜನರ ಸಾವು ದಾರುಣ ಸಾವು