ಪ್ರವಾಸಿ ತಾಣ, ಧಾರ್ಮಿಕ ಕೇಂದ್ರ ಅನ್ಲಾಕ್ 3ನೇ ಅಲೆಗೆ ಕಾರಣ ಎಂದ IMA
- 3ನೇ ಅಲೆ ಅನಿವಾರ್ಯ ಹಾಗೂ ಸನ್ನಿಹಿತ ಎಂದ ಮೆಡಿಕಲ್ ಅಸೋಸಿಯೇಶನ್
- ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣದ ನಿರ್ಲಕ್ಷ್ಯದಿಂದ 3ನೇ ಅಲೆ
- ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ IMA
ನವದೆಹಲಿ(ಜು.12): ಕೊರೋನಾ ವೈರಸ್ 2ನೇ ಅಲೆ ತಗ್ಗಿದ ಪರಿಣಾಮ ಹಂತ ಹಂತದ ಅನ್ಲಾಕ್ ಮಾಡಲಾಗಿದೆ. ಇದರಲ್ಲಿ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳ ಅನ್ಲಾಕ್ ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಲೆನೋವು ಹೆಚ್ಚಿಸಿದೆ. ಅನ್ಲಾಕ್ ಬೆನ್ನಲ್ಲೇ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಜನ ಕ್ಕಿಕ್ಕಿರಿದು ತುಂಬಿದ್ದಾರೆ. ಇದು 3ನೇ ಅಲೆಗೆ ಕಾರಣವಾಗಲಿದೆ ಎಂದು ಭಾರತೀಯ ಮೆಡಿಕಲ್ ಅಸೋಸಿಯೇಶನ್(IMA) ಎಚ್ಚರಿಕೆ ನೀಡಿದೆ.
ಕೋವಿಡ್ನ 2ನೇ ಅಲೆಗೆ 800 ವೈದ್ಯರ ಬಲಿ: ಐಎಂಎ!..
ಕೊರೋನಾ ಮಾರ್ಗಸೂಚಿ ಪಾಲಿಸದೆ ಜನ ಸೇರುತ್ತಿರುವ ಕಾರಣ ಭಾರತಕ್ಕೆ 3ನೇ ಅಲೆ ನಿಶ್ಚಿತವಾಗಿದೆ. ಇದರ ಜೊತೆಗೆ 3ನೇ ಅಲೆ 2ನೇ ಅಲೆಗಿಂತ ದುಪ್ಪಟ್ಟು ಹೊಡೆತ ನೀಡಲಿದೆ ಎಂದಿದೆ. ಹೀಗಾಗಿ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ಕಠಿಣ ನಿರ್ಬಂಧ ಈಗಿನಿಂದಲೇ ಜಾರಿಗೊಳಿಸಬೇಕು ಎಂದು ಐಎಂಎ ಆಗ್ರಹಿಸಿದೆ.
ತಕ್ಷಣಕ್ಕೆ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ನಿರ್ಬಂಧ ಹೆಚ್ಚಿಸುವ ಅಗತ್ಯವಿದೆ. ಈ ಎರಡು ಕೇಂದ್ರಗಳಲ್ಲಿ ಯಾವುದೇ ರೀತಿಯಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಜನಸಂದಣಿ ಅಧಿಕವಾಗುತ್ತಿದೆ. ಇದರಿಂದ ದೇಶಕ್ಕೆ ಅಪಾಯ ಹೆಚ್ಚು ಎಂದು ಐಎಂಎ ಎಚ್ಚರಿಸಿದೆ.
ಕೊರೋನಾ ಆತಂಕ: ಈಶಾನ್ಯ ರಾಜ್ಯಗಳ ಸಿಎಂ ಜೊತೆ ಮೋದಿ ವಿಡಿಯೋ ಕಾನ್ಫೆರೆನ್ಸ್!
ಭಾರತ 2ನೇ ಅಲೆ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. 2ನೇ ಅಲೆಯಿಂದ ನಾವೆಲ್ಲ ಪಾಠ ಕಲಿಯಬೇಕಿದೆ. ಮತ್ತೊಂದು ಬಾರಿ ನಿರ್ಲಕ್ಷ್ಯಿಸಿದರೆ ಕೊರೋನಾ ನಿಯಂತ್ರಣ ಅಸಾಧ್ಯವಾಗಲಿದೆ ಎಂದಿದೆ. ಸಾಂಕ್ರಾಮಿಕ ರೋಗಗಳ ಇತಿಹಾಸ ನೋಡಿದರೆ 3ನೇ ಅಲೆ ಅನಿವಾರ್ಯ ಹಾಗೂ ಸನ್ನಿಹಿತ ಎಂದು ಐಎಂಎ ಹೇಳಿದೆ.