ಕೋವಿಡ್ನ 2ನೇ ಅಲೆಗೆ 800 ವೈದ್ಯರ ಬಲಿ: ಐಎಂಎ!
* ಇಂದು ರಾಷ್ಟ್ರೀಯ ವೈದ್ಯರ ದಿನ: ಮೋದಿ ಭಾಷಣ
* ಕೋವಿಡ್ನ 2ನೇ ಅಲೆಗೆ 800 ವೈದ್ಯರ ಬಲಿ: ಐಎಂಎ
* ಕರ್ನಾಟಕದಲ್ಲಿ 9 ಮಂದಿ ಸೇರಿ 798 ವೈದ್ಯರು ಕೊರೋನಾ ವೈರಸ್ಗೆ ಬಲಿ
ನವದೆಹಲಿ(ಜು.01): ಇಡೀ ದೇಶವನ್ನೇ ಇನ್ನಿಲ್ಲದಂತೆ ಬಾಧಿಸಿದ ಕೋವಿಡ್ 2ನೇ ಅಲೆಯಿಂದಾಗಿ ಕರ್ನಾಟಕದಲ್ಲಿ 9 ಮಂದಿ ಸೇರಿ 798 ವೈದ್ಯರು ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ(ಐಎಂಎ) ಮಾಹಿತಿ ನೀಡಿದೆ.
ಇದರಲ್ಲಿ ದೆಹಲಿಯಲ್ಲಿ ಅತಿಹೆಚ್ಚು 128, ಬಿಹಾರದಲ್ಲಿ 115 ಮತ್ತು ಉತ್ತರ ಪ್ರದೇಶದಲ್ಲಿ 79 ವೈದ್ಯರು ಬಲಿಯಾಗಿದ್ದಾರೆ. ಇನ್ನು ಅತೀ ವೇಗವಾಗಿ ಹಬ್ಬುವ ಆತಂಕ ಸೃಷ್ಟಿಸುವ ಕೊರೋನಾ ವೈರಸ್ನ ಡೆಲ್ಟಾಪ್ಲಸ್ ಪ್ರಭೇದ ಪತ್ತೆಯಾದ ಮಹಾರಾಷ್ಟ್ರ ಮತ್ತು ಕೇರಳದಲ್ಲೂ 2ನೇ ಅಲೆಯ ವೇಳೆ ಕ್ರಮವಾಗಿ 23 ಮತ್ತು 24 ವೈದ್ಯರು ಸಾವಿಗೀಡಾಗಿದ್ದಾರೆ. ಆದಾಗ್ಯೂ, ಪುದುಚೇರಿಯಲ್ಲಿ ಕೇವಲ ಓರ್ವ ವೈದ್ಯ ಬಲಿಯಾಗಿದ್ದಾರೆ.
ಇಂದು ರಾಷ್ಟ್ರೀಯ ವೈದ್ಯರ ದಿನ: ಮೋದಿ ಭಾಷಣ
ಗುರುವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ನಡೆಯಲಿದೆ. ಈ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವೈದ್ಯಕೀಯ ಸಿಬ್ಬಂದಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಜು.1 ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬಿಧನ್ ಚಂದ್ರ ರಾಯ್ ಅವರ ಜನ್ಮದಿನಾಚರಣೆ ಮತ್ತು ಪುಣ್ಯತಿಥಿ ಆಗಿದೆ. ಈ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಗುರುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ ಮಧ್ಯಾಹ್ನ 3 ಗಂಟೆಗೆ ವೈದ್ಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ವೈದ್ಯರ ದಿನದ ನಿಮಿತ್ತ ಟ್ವೀಟ್ ಮಾಡಿರುವ ಮೋದಿ, ‘ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರ ಪ್ರಯತ್ನಕ್ಕೆ ಭಾರತ ಹೆಮ್ಮೆ ಪಡುತ್ತಿದೆ’ ಎಂದು ಹೇಳಿದ್ದಾರೆ.