ಮೋದಿ ಈ ವರ್ಷ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್‌ ಹೇಳಿರುವ ಮಾತಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನರೇಂದ್ರ ಮೋದಿ ತಮ್ಮ ಮೂರನೇ ಅವಧಿಯನ್ನು ಸಂಪೂರ್ಣವಾಗಿ ಮುಗಿಸುತ್ತಾರೆ ಎಂದು ಹೇಳಿದ್ದಾರೆ.

ನವದೆಹಲಿ (ಮೇ.11): ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದು, ಮೂರನೇ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಪ್ರಧಾನಿ ನರೇಂದ್ರ ಮೋದಿ ಮುಂದಿನ ಸೆಪ್ಟೆಂಬರ್‌ 17ಕ್ಕೆ 75 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಬಿಜೆಪಿಯ ನಿಯಮದ ಪ್ರಕಾರ 75 ವರ್ಷ ದಾಟಿದ ಯಾರೂ ಕೂಡ ಸಕ್ರಿಯ ರಾಜಕಾರಣದಲ್ಲಿ ಇರಬಾರದು. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮುಂದಿನ ವರ್ಷದ ಸೆಪ್ಟೆಂಬರ್‌ 17 ಕೊನೆಯ ದಿನವಾಗಿದೆ ಎಂದು ಹೇಳಿದ್ದರು. ಅರವಿಂದ್‌ ಕೇಜ್ರಿವಾಲ್‌ ಅವರ ಈ ಮಾತಿಗೆ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ ಮೋದಿಜಿ 75 ನೇ ವರ್ಷಕ್ಕೆ ಕಾಲಿಡುತ್ತಿರುವ ಬಗ್ಗೆ ಸಂತೋಷಪಡುವ ಅಗತ್ಯವಿಲ್ಲ ಎಂದು ನಾನು ಅರವಿಂದ್ ಕೇಜ್ರಿವಾಲ್ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಹೇಳಲು ಬಯಸುತ್ತೇನೆ. ಮೋದಿಜಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ಸಂವಿಧಾನದಲ್ಲಿ ಬರೆದಿಲ್ಲ, ಅವರು ಮತ್ತೆ ಪ್ರಧಾನಿಯಾಗುತ್ತಾರೆ ಮತ್ತು ಅವಧಿ ಪೂರ್ಣಗೊಳಿಸುತ್ತಾರೆ' ಎಂದು ಅಮಿತ್ ಶಾ ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಹೇಳಿದರು.

ಇದಕ್ಕೂ ಮುನ್ನ ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಅರವಿಂದ್ ಕೇಜ್ರಿವಾಲ್ ಅವರು 2025 ರಲ್ಲಿ ಪಿಎಂ ಮೋದಿ ನಿವೃತ್ತರಾಗುತ್ತಾರೆಯೇ ಎಂದು ಕೇಳಿದರು. "ಪಿಎಂ ಮೋದಿ ಸೆಪ್ಟೆಂಬರ್ 17 ರಂದು 75 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರು ಪಕ್ಷದಲ್ಲಿನ ನಾಯಕರು 75 ವರ್ಷದ ನಂತರ ನಿವೃತ್ತರಾಗುತ್ತಾರೆ ಎಂದು ಅವರೇ ನಿಯಮ ಮಾಡಿದ್ದರು. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಮತ್ತು ಯಶವಂತ್ ಸಿನ್ಹಾ ಅವರು ಇದೇ ಕಾರಣಕ್ಕಾಗಿ ನಿವೃತ್ತಿಯಾಗಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 17 ರಂದು ನಿವೃತ್ತರಾಗಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದರು.

ಕೇಜ್ರಿವಾಲ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೆಹಲಿ ಸಿಎಂ ಅವರ ಕಾಮೆಂಟ್‌ಗಳನ್ನು ತಳ್ಳಿಹಾಕಿದ್ದಾರೆ. "ಈಗ ಪ್ರಧಾನಿ ಮೋದಿ ಅವರ ವಯಸ್ಸನ್ನು ಹುಡುಕಿ ಅವರ ದಾರಿಯಿಂದ ಮೋದಿಯನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯ ಸಂವಿಧಾನದಲ್ಲಿ ವಯಸ್ಸಿನ ಬಗ್ಗೆ ಎಲ್ಲಿಯೂ ಮಾಹಿತಿಯಿಲ್ಲ. ಮೋದಿ ಜಿ ನಮ್ಮ ನಾಯಕ ಮತ್ತು ಭವಿಷ್ಯದಲ್ಲಿಯೂ ನಮ್ಮನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಬಿಜೆಪಿ ಅಧಿಕಾರಕ್ಕೆ ಬಂದರೆ, ಯೋಗಿ ಬದಿಗೆ ಸರಿಸಿ ಅಮಿತ್‌ ಶಾ ಪಿಎಂ ಆಗ್ತಾರೆ: ಅರವಿಂದ್ ಕೇಜ್ರಿವಾಲ್‌!

ಇನ್ನು ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನನ್ನು ಕ್ಲೀನ್ ಚಿಟ್ ಎಂದು ಪರಿಗಣಿಸಬಾರದು ಎಂದು ಅಮಿತ್ ಶಾ ಹೇಳಿದ್ದಾರೆ. ಮಧ್ಯಂತರ ಜಾಮೀನು ಜೂನ್ 1 ರವರೆಗೆ ಮಾತ್ರ ನೀಡಲಾಗಿದ್ದು, ಜೂನ್ 2 ರಂದು ಅವರು ಏಜೆನ್ಸಿಗಳ ಮುಂದೆ ಶರಣಾಗಬೇಕು. ಅರವಿಂದ್ ಕೇಜ್ರಿವಾಲ್ ಇದನ್ನು ಕ್ಲೀನ್ ಚಿಟ್ ಎಂದು ಪರಿಗಣಿಸಿದರೆ, ಕಾನೂನಿನ ಬಗ್ಗೆ ಅವರ ತಿಳುವಳಿಕೆ ದುರ್ಬಲವಾಗಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಕೇಜ್ರಿವಾಲ್ ಜಾಮೀನಿಗೆ ಪಾಕಿಸ್ತಾನದಲ್ಲಿ ಸಂಭ್ರಮ, ಮೋದಿಗೆ ಮತ್ತೊಂದು ಸೋಲು ಎಂದ ಪಾಕ್ ಮಾಜಿ ಸಚಿವ!