ಅರವಿಂದ್‌ ಕೇಜ್ರಿವಾಲ್‌ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಎಂದಿನ ತೀರ್ಪಿನಂತಿರಲಿಲ್ಲ. ಅದು ಕೇಜ್ರಿವಾಲ್‌ ಅವರಿಗೆ ನೀಡಿದ ವಿಶೇಷ ಸೌಲಭ್ಯದಂತಿತ್ತು ಎಂದು ದೇಶದ ಜನರು ಮಾತನಾಡುತ್ತಿದ್ದಾರೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ 

ನವದೆಹಲಿ(ಮೇ.16): ಕೆಲ ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಕೇಜ್ರಿವಾಲ್‌ ಅವರಿಗೆ ‘ವಿಶೇಷ ಸೌಲಭ್ಯ’ ನೀಡಲಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು,‘ಅರವಿಂದ್‌ ಕೇಜ್ರಿವಾಲ್‌ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಎಂದಿನ ತೀರ್ಪಿನಂತಿರಲಿಲ್ಲ. ಅದು ಕೇಜ್ರಿವಾಲ್‌ ಅವರಿಗೆ ನೀಡಿದ ವಿಶೇಷ ಸೌಲಭ್ಯದಂತಿತ್ತು ಎಂದು ದೇಶದ ಜನರು ಮಾತನಾಡುತ್ತಿದ್ದಾರೆ ಎಂದು ಹೇಳಿದರು. 

ಮದ್ಯ ಹಗರಣ ಕೇಸಲ್ಲಿ ಆಪ್‌ ಪಕ್ಷವೇ ಆರೋಪಿ: ಕೇಜ್ರಿವಾಲ್‌ಗೆ ಮತ್ತೆ ಸಂಕಷ್ಟ..!

ಕೇಜ್ರಿವಾಲ್‌ ತಮಗೆ ಚುನಾವಣೆಯಲ್ಲಿ ಹೆಚ್ಚು ಮತ ಬಂದರೆ ಮತ್ತೆ ಜೈಲಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಅವರಲ್ಲಿ ತಪ್ಪಿದ್ದರೂ ಸುಪ್ರೀಂ ಕೋರ್ಟ್‌ ಅವರನ್ನು ಜೈಲಿಗೆ ಅಟ್ಟುವುದಿಲ್ಲ ಎನ್ನುವುದನ್ನು ಕೇಜ್ರಿವಾಲ್‌ ಹೇಳಲು ಹೊರಟಿದ್ದಾರೆ. ಇದು ಸ್ಪಷ್ಟ ನ್ಯಾಯಾಂಗ ನಿಂದನೆ. ಇವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಧೀಶರು ಕೇಜ್ರಿವಾಲ್‌ ಹೇಗೆ ಜಾಮೀನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಬೇಕು’ ಎಂದರು.
ತಿಹಾರ್‌ನಲ್ಲಿ ಕ್ಯಾಮರಾ ಅಳವಡಿಸಲಾಗಿದೆ ಎಂಬುದಕ್ಕೆ ಉತ್ತರಿಸಿದ ಅಮಿತ್‌ ಶಾ,‘ ತಿಹಾರ್‌ ಜೈಲಿನ ನಿರ್ವಹಣೆ ದೆಹಲಿ ಸರ್ಕಾರದಲ್ಲಿರುತ್ತದೆ ಹೊರತು ಕೇಂದ್ರದಲ್ಲಲ್ಲ. ಈ ರೀತಿ ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡುವುದರಿಂದ ಕೇಜ್ರಿವಾಲ್‌ ಹಿಂದೆ ಸರಿಯಬೇಕು ಎಂದರು.

ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಸಲುವಾಗಿ ಇತ್ತೀಚೆಗೆ ಸುಪ್ರೀಂಕೋರ್ಟ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿತ್ತು.