ಸತತ 2ನೇ ವರ್ಷವೂ ಅಮರನಾಥ ಯಾತ್ರೆ ರದ್ದು!
ಕಳೆದ ವರ್ಷ ಜಮ್ಮು-ಕಾಶ್ಮೀರ ವಿಶೇಷ ಸ್ಥಾನ ರದ್ದತಿಯಿಂದಾಗಿ ಯಾತ್ರೆ ರದ್ದು| ಈ ವರ್ಷ ಕೊರೋನಾ ಸಂಕಷ್ಟದ ಹಿನ್ನೆಲೆ ಅಮರನಾಥನ ದರ್ಶನ ಭಾಗ್ಯವಿಲ್ಲ
ನವದೆಹಲಿ(ಜು.22): ವಿಶ್ವಾದ್ಯಂತ ನಡೆಯಬೇಕಿದ್ದ ಕ್ರೀಡೆಗಳ ರದ್ದತಿಗೆ ಕಾರಣವಾದ ಕೊರೋನಾ ವೈರಸ್ನಿಂದಾಗಿ ಇದೀಗ ಹಿಂದುಗಳ ಪವಿತ್ರ ವಾರ್ಷಿಕ ‘ಅಮರನಾಥ ಯಾತ್ರೆ’ಯೂ ರದ್ದಾಗಿದೆ. ಕೊರೋನಾ ಸಾಂಕ್ರಮಿಕ ರೋಗದ ಕಾರಣದಿಂದಾಗಿ ಮಂಗಳವಾರದಿಂದಲೇ ಆರಂಭವಾಗಬೇಕಿದ್ದ ವಾರ್ಷಿಕ ಅಮರನಾಥ ಯಾತ್ರೆ ರದ್ದುಗೊಳಿಲು ನಿರ್ಧರಿಸಿರುವುದನ್ನು ತಿಳಿಸಲು ಶ್ರೀ ಅಮರನಾಥ ದೇವಸ್ಥಾನ ಮಂಡಳಿ ವಿಷಾದಿಸುತ್ತದೆ ಎಂದು ಜಮ್ಮು-ಕಾಶ್ಮೀರದ ರಾಜಭವನ ತಿಳಿಸಿದೆ. ತನ್ಮೂಲಕ ಅಮರನಾಥನ ದರ್ಶನದ ಕಾತುರತೆಯಲ್ಲಿದ್ದ ಭಕ್ತರ ಆಕಾಂಕ್ಷೆಗೆ ಸತತ 2ನೇ ವರ್ಷವೂ ನಿರಾಸೆಯಾದಂತಾಗಿದೆ.
ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಉಗ್ರರ ಯೋಜನೆ!
ಆದಾಗ್ಯೂ, ದೇವಸ್ಥಾನದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿ ದೇವಸ್ಥಾನದ ಮುಂಜಾನೆಯ ದರ್ಶನ ಹಾಗೂ ಸಂಜೆಯ ಮಹಾಮಂಗಳಾರತಿಯನ್ನು ಲೈವ್ ಟೆಲಿಕಾಸ್ಟ್ ಮಾಡಲಾಗುತ್ತದೆ. ತನ್ಮೂಲಕ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗಿಯಾಗಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ, ಈ ಹಿಂದಿನಿಂತೆಯೇ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ ಎಂದು ಅಮರನಾಥ ದೇಗುಲ ಮಂಡಳಿ ತಿಳಿಸಿದೆ. ಪ್ರತೀ ವರ್ಷದ ಈ ಧಾರ್ಮಿಕ ಯಾತ್ರೆಯಲ್ಲಿ ಸುಮಾರು 10 ಲಕ್ಷ ಭಕ್ತರು ಭಾಗವಹಿಸುತ್ತಿದ್ದರು.
ಅಮರನಾಥ ಗುಹೆಯಲ್ಲಿ ಹಿಮಲಿಂಗ: ಈ ವರ್ಷದ ಫಸ್ಟ್ ಫೋಟೋ ವೈರಲ್!
ಜಮ್ಮು-ಕಾಶ್ಮೀರಕ್ಕೆ ಪ್ರಾಪ್ತವಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕಾರಣದಿಂದಾಗಿ ಉಗ್ರರು ಮತ್ತು ಸ್ಥಳೀಯ ಉದ್ರಿಕ್ತರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಬಹುದು ಎಂಬ ಕಾರಣಕ್ಕಾಗಿ ಕಳೆದ ವರ್ಷ ಆರಂಭವಾಗಿದ್ದ ಯಾತ್ರೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು.