ಉತ್ತರ ಪ್ರದೇಶದಲ್ಲಿ, ಅ*ತ್ಯಾಚಾ*ರ ಸಂತ್ರಸ್ತೆಯೊಬ್ಬರ ದೂರು ದಾಖಲಿಸಲು ಕಾನ್‌ಸ್ಟೆಬಲ್ ಒಬ್ಬರು ಲೈಂಗಿಕ ಸುಖಕ್ಕೆ ಬೇಡಿಕೆಯಿಟ್ಟ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತೆ ನೀಡಿದ ಫೋನ್ ಸಂಭಾಷಣೆಯ ಆಡಿಯೋ ಸಾಕ್ಷ್ಯದ ಆಧಾರದ ಮೇಲೆ, ಆರೋಪಿ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿ ಎಫ್‌ಐಆರ್ ದಾಖಲಿಸಲಾಗಿದೆ.

ಲಕ್ನೋ (ಮಾ.21): ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ರಕ್ಷಕನೇ ಭಕ್ಷಕನಾದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. 25 ವರ್ಷದ ಅ*ತ್ಯಾಚಾ*ರ ಸಂತ್ರಸ್ತೆಯ ದೂರು ದಾಖಲಿಸಲು ಆಕೆಯ ಬಳಿಯೇ ಲೈಂಗಿಕ ಸುಖ ಕೋರಿದ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿ, ಎಫ್‌ಐಆರ್ ದಾಖಲಿಸಲಾಗಿದೆ. ಮದುವೆಯ ಸುಳ್ಳು ಭರವಸೆ ನೀಡಿ ವ್ಯಕ್ತಿಯೊಬ್ಬ ತನ್ನ ಮೇಲೆ ಅ*ತ್ಯಾಚಾ*ರ ಎಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಯುವತಿಯು ಕೆಲವು ವಾರಗಳ ಹಿಂದೆ ಕ್ವಾರ್ಸಿ ಪೊಲೀಸ್ ಠಾಣೆಗೆ ಧಾವಿಸಿದ್ದರು. ಮುಖ್ಯಮಂತ್ರಿಯವರ ಸಮಗ್ರ ಕುಂದುಕೊರತೆ ನಿವಾರಣಾ ವ್ಯವಸ್ಥೆ (IGRS) ಪೋರ್ಟಲ್ ಮೂಲಕವೂ ಅವರು ದೂರು ನೀಡಿದ್ದರು. ಆದರೆ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪ್ರಕರಣದ ವಿವರ ಪಡೆಯಲು ಕರೆ ಮಾಡಿದ್ದ ಕಾನ್‌ಸ್ಟೆಬಲ್ ಇಮ್ರಾನ್ ಖಾನ್, ಸಂತ್ರಸ್ತೆಯ ಮೇಲೆಯೇ ಕೆಟ್ಟ ಕಣ್ಣು ಹಾಕಿದ್ದ ಎನ್ನಲಾಗಿದೆ.

ಫೋನ್ ಕಾಲ್‌ನಲ್ಲಿ ಬಯಲಾದ ಕಾಮಕಾಂಡ

ಕಾನ್‌ಸ್ಟೆಬಲ್ ಇಮ್ರಾನ್ ಖಾನ್ ಸಂತ್ರಸ್ತೆಗೆ ಫೋನ್ ಮಾಡಿ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಈ ಸಂಭಾಷಣೆಯನ್ನು ಯುವತಿ ರೆಕಾರ್ಡ್ ಮಾಡಿಕೊಂಡಿದ್ದರಿಂದ ಆತನ ಅಸಲಿ ಮುಖವಾಡ ಕಳಚಿದೆ. ಇನ್ನು ವೈರಲ್‌ ಆಡಿಯೋದಲ್ಲಿ ಆಘಾತಕಾರಿ ವಿಚಾರ ಬಹಿರಂಗವಾಗಿದೆ.'ಈಗಲೇ ನಿನ್ನ ಒಂದು ಸೆ*ಕ್ಸಿ ಫೋಟೋ ಕಳುಹಿಸಿದರೆ, ನಿನಗೆ ಈದ್ ಹಬ್ಬಕ್ಕೆ ಬಟ್ಟೆ ಕೊಡಿಸುತ್ತೇನೆ. ನನ್ನ ಜೊತೆ ಹೋಟೆಲ್ ರೂಮಿಗೆ ಬಾ" ಎಂದು ಕಾನ್‌ಸ್ಟೆಬಲ್ ಆಮಿಷ ಒಡ್ಡಿದ್ದಾನೆ.

'ನಾವಿಬ್ಬರೂ ಒಂದೇ ಧರ್ಮದವರು. ನಾನು ಆತನನ್ನು ಜೈಲಿಗೆ ಕಳುಹಿಸಿ ನಿನ್ನ ದೂರು ದಾಖಲಿಸುತ್ತೇನೆ; ಪ್ರತಿಯಾಗಿ ನೀನು ನನ್ನ ಜೊತೆ ಮಲಗಬೇಕು" ಎಂದು ಪೀಡಿಸಿದ್ದಾನೆ. ಅಷ್ಟೇ ಅಲ್ಲದೆ, 'ನೀನೇನಾದರೂ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಪವಿತ್ರ ಕುರಾನ್ ಮೇಲೆ ಪ್ರಮಾಣ ಮಾಡಿ ಬೆದರಿಸಿದ್ದಾನೆ. 'ನಾನು ಯಾವುದೇ ಕ್ರಮ ಕೈಗೊಳ್ಳಲು ಬಿಡುವುದಿಲ್ಲ, ಬದಲಾಗಿ ನಿನ್ನನ್ನೇ ಜೈಲಿಗೆ ಕಳುಹಿಸುತ್ತೇನೆ' ಎಂದು ಸಂತ್ರಸ್ತೆಗೆ ಧಮ್ಕಿ ಕೂಡ ಹಾಕಿದ್ದಾನೆ.

ಪೊಲೀಸ್ ಇಲಾಖೆಯ ಕ್ರಮ

ಸಂತ್ರಸ್ತೆಯು ಫೋನ್ ಸಂಭಾಷಣೆಯ ದಾಖಲೆಗಳೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ನ್ಯಾಯಕ್ಕಾಗಿ ಮೊರೆ ಹೋಗಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಅಲಿಗಢ ಎಸ್‌ಎಸ್‌ಪಿ ನೀರಜ್ ಕುಮಾರ್ ಜಾದೂನ್, ಕಾನ್‌ಸ್ಟೆಬಲ್ ಇಮ್ರಾನ್ ಖಾನ್‌ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಆರೋಪಿ ಕಾನ್‌ಸ್ಟೆಬಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಕಲಂಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.