ನಿತೀಶ್ ಕುಮಾರ್ ನಿರ್ಗಮನಕ್ಕೆ ಕಾಂಗ್ರೆಸ್ ಕಾರಣ, ಮೈತ್ರಿ ಮುರಿಯುವ ಸೂಚನೆ ನೀಡಿದ ಅಖಿಲೇಶ್!
ಬಿಹಾರ ರಾಜಕೀಯಲ್ಲಿ ಆದ ಮಹತ್ವದ ಬೆಳವಣಿಗೆ, ಇಂಡಿಯಾ ಮೈತ್ರಿ ಒಕ್ಕೂಟವನ್ನೇ ಅಲುಗಾಡಿಸಿದೆ. ನಿತೀಶ್ ಕುಮಾರ್ ಮೈತ್ರಿ ಮುರಿಯಲು ಕಾಂಗ್ರೆಸ್ ಕಾರಣ ಎಂದು ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಮೂಲಕ ಇಂಡಿಯಾ ಮೈತ್ರಿಯಿಂದ ಮತ್ತೊಂದು ಪಕ್ಷ ಹೊರಹೋಗುವ ಸುಳಿವು ನೀಡಿದೆ.
![Akhilesh yadav blames congress lack of enthusiasm cause Nitishi kumar step away from Alliance ckm Akhilesh yadav blames congress lack of enthusiasm cause Nitishi kumar step away from Alliance ckm](https://static-ai.asianetnews.com/images/01hn4cd028rz4qj2pfmqaxvnj7/nithish-kumar-akhilesh-yadav--jdu-sp-jpg_363x203xt.jpg)
ನವದೆಹಲಿ(ಜ.27) ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಯತ್ನದ ಫಲವಾಗಿ ಹುಟ್ಟಿಕೊಂಡ ಇಂಡಿಯಾ ಮೈತ್ರಿ ಕೂಸು ಇದೀಗ ಬಡವಾಗಿದೆ. ಬಿಹಾರದಲ್ಲಿ ಬಿಜೆಡಿ, ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದು ಕೊಂಡಿರುವ ನಿತೀಶ್ ಕುಮಾರ್ ನಡೆ ಇಂಡಿಯಾ ಒಕ್ಕೂಟವನ್ನೇ ಬುಡಮೇಲಾಗಿಸಿದೆ. ಇಂಡಿಯಾ ಮೈತ್ರಿಯಿಂದ ಒಂದೊಂದೆ ಪಕ್ಷಗಳು ಹೊರಹೋಗುತ್ತಿದೆ. ನಿತೀಶ್ ಕುಮಾರ್ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಾರ್ಟಿ ಮುಖಂಡ ಅಖಿಲೇಶ್ ಯಾದವ್, ನಿತೀಶ್ ಮೈತ್ರಿ ಮುರಿದುಕೊಳ್ಳಲು ಕಾಂಗ್ರೆಸ್ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ನಿತೀಶ್ ಇಂಡಿಯಾ ಒಕ್ಕೂಟದಲ್ಲಿದ್ದರೆ ಪ್ರಧಾನಿ ಅಭ್ಯರ್ಥಿಯಾಗುತ್ತಿದ್ದರು. ಆದರೆ ಕಾಂಗ್ರೆಸ್ ಕುತಂತ್ರಕ್ಕೆ ನಿತೀಶ್ ಮೈತ್ರಿ ತೊರೆದಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ. ಈ ಮೂಲಕ ಇಂಡಿಯಾ ಮೈತ್ರಿ ಒಕ್ಕೂಟದಲ್ಲಿರುವ ಸಮಾಜವಾದಿ ಪಾರ್ಟಿ ಕೂಡ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟಿರುವ ಸೂಚನೆ ನೀಡಿದೆ.
ಬಿಹಾರದಲ್ಲಿ ರಾಜಕೀಯ ಬೆಳವಣಿಗೆ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಇಂಡಿಯಾ ಒಕ್ಕೂಟವನ್ನು ರಚಿಸಿ, 27ಕ್ಕೂ ಹೆಚ್ಚು ಪಕ್ಷಗಳನ್ನು ಒಗ್ಗೂಟಿಸಿ ಮೈತ್ರಿ ರಚನೆ ಮಾಡಿರುವ ನಿತೀಶ್ ಕುಮಾರ್, ಇಂಡಿಯಾ ಒಕ್ಕೂಟದ ಸೂಕ್ತ ಪ್ರಧಾನಿ ಅಭ್ಯರ್ಥಿ. ಆದರೆ ಕಾಂಗ್ರೆಸ್ ಅಧಿಪತ್ಯ ಸಾಧಿಸುವ ಹುನ್ನಾರದಲ್ಲಿ ನಿತೀಶ್ ಕುಮಾರ್ ಮೈತ್ರಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಕ್ಷಿಪ್ರ ಬೆಳವಣಿಗಿಗೆ ಕಾಂಗ್ರೆಸ್ ಕಾರಣ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಹಾರದಲ್ಲಿ ರಾಜಕೀಯದ ಥ್ರಿಲ್ಲರ್, ತಿಂಗಳಿಗೊಮ್ಮೆ ಗೇರ್ ಬದಲಿಸುತ್ತಿರುವ ನಿತೀಶ್ ಕುಮಾರ್!
ಇಂಡಿಯಾ ಮೈತ್ರಿ ಒಕ್ಕೂಟದ ಪ್ರಧಾನ ಜವಾಬ್ದಾರಿಗಳನ್ನು ಕಾಂಗ್ರೆಸ್ ವಹಿಸಿಕೊಂಡಿದೆ. ಆದರೆ ಮೈತ್ರಿಕೂಟದ ಪಕ್ಷದ ಜೊತೆದೆ ಚರ್ಚಿಸಲು ಹಾಗೂ ತೊಡಗಿಸಿಕೊಳ್ಳುವ ಉತ್ಸಾಹ ಕಾಂಗ್ರೆಸ್ ಇಲ್ಲದಾಗಿದೆ. ಮೈತ್ರಿಯ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೀಗಿರುವಾಗ ಮೈತ್ರಿಯ ಎಲ್ಲಾ ಪಕ್ಷಗಳ ಅಹವಾಲು, ಅವರ ಜೊತೆ ಚರ್ಚಿಸುವ ಕೆಲಸವನ್ನೂ ಕಾಂಗ್ರೆಸ್ ಮಾಡಬೇಕು. ಆದರೆ ಕಾಂಗ್ರೆಸ್ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿದೆ. ಇದು ಇತರ ಪಕ್ಷಗಳಿಗೆ ತೀವ್ರ ನಿರಾಸೆ ತಂದಿದೆ ಎಂದು ನಿತೀಶ್ ಕುಮಾರ್ ನಿರ್ಧಾರವನ್ನು ಮುಂದಿಟ್ಟು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈಗಾಗಲೇ ಇಂಡಿಯಾ ಮೈತ್ರಿಯಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಹೊರಬಂದಿದೆ. ಇದೀಗ ನಿತೀಶ್ ಕುಮಾರ್ ಕೂಡ ಮೈತ್ರಿ ಮುರಿದಿದ್ದಾರೆ. ಇದರ ಬೆನ್ನಲ್ಲೇ ಅಖಿಲೇಶ್ ಯಾದವ್ ಕೂಡ ಮೈತ್ರಿಯಿಂದ ಹೊರಹೋಗುವ ಸುಳಿವು ನೀಡಿದ್ದಾರೆ.
ಬಂಡಾಯದ ಬಾವುಟ ಬೀಸಿದ ದಂಡನಾಯಕರು! ಅಂತರ್ಯುದ್ಧಕ್ಕೆ ಛಿದ್ರವಾಗುತ್ತಾ ಘಟಬಂಧನ್..?